ಬಂಟ್ವಾಳ : ಮಹಿಳೆಯ ಸರ ಕಿತ್ತು ಪರಾರಿ ಪ್ರಕರಣ; ಇಬ್ಬರು ಆರೋಪಿಗಳ ಬಂಧನ
Update: 2021-09-18 15:59 GMT
ಬಂಟ್ವಾಳ, ಸೆ.18: ಪಣೋಲಿಬೈಲ್ ಬಳಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಬಳಿ ಬೈಕಿನಲ್ಲಿ ಬಂದಿದ್ದ ಇಬ್ಬರು ಬಲವಂತವಾಗಿ ಕರಿಮಣಿಸರವನ್ನು ಕಿತ್ತು ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಟ್ವಾಳ ಡಿವೈಎಸ್ಪಿ ತಂಡ ಮತ್ತು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ಆರ್ಯಾಪು ಗ್ರಾಮದ ರೋಹಿತ್ (22) ಮತ್ತು ಲೋಹಿತ್ (20) ಬಂಧಿತ ಆರೋಪಿಗಳು.
ಅವರು ಸುಲಿಗೆ ಮಾಡಿದ ಮಾಂಗಲ್ಯ ಸರವನ್ನು ಹಾಗೂ ಸುಲಿಗೆ ಮಾಡಲು ಉಪಯೋಗಿಸಿದ ಬೈಕ್ ಅನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಬಂಟ್ವಾಳ ನಗರ ಪೊಲೀಸರು ತಿಳಿಸಿದ್ದಾರೆ.
ಸೆ.8ರಂದು ಮಧ್ಯಾಹ್ನ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಪಣೋಲಿಬೈಲು ಬಳಿ ನಡೆದುಕೊಂಡು ಹೋಗುತ್ತಿದ್ದ ಒಂಟಿ ಮಹಿಳೆ ವತ್ಸಲಾ (53)ರವರ ಕುತ್ತಿಗೆಯಿಂದ ಬೈಕಿನಲ್ಲಿ ಬಂದಿದ್ದ ಇಬ್ಬರು ಚಿನ್ನದ ಕರಿಮಣಿ ಸರವನ್ನು ಬಲವಂತವಾಗಿ ಕಿತ್ತು ಪರಾರಿಯಾಗಿದ್ದರು ಎಂದು ದೂರಲಾಗಿದೆ.