ಹೆಬ್ರಿ ಪಿಡಿಒ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಒತ್ತಾಯಿಸಿ ದಸಂಸ ಪ್ರತಿಭಟನೆ

Update: 2021-09-20 12:07 GMT

ಉಡುಪಿ, ಸೆ.20: ಪೆರ್ಡೂರು ಗ್ರಾಪಂ ವ್ಯಾಪ್ತಿಯ ಸರಕಾರಿ ಜಾಗದಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿರುವ ಹೆಬ್ರಿ ಮತ್ತು ಮುದ್ರಾಡಿ ಪಿಡಿಒ ಸದಾಶಿವ ಸೇರ್ವೆಗಾರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಈ ಬಗ್ಗೆ ತನಿಖೆ ನಡೆಸಿ ಸರಕಾರಕ್ಕೆ ವಂಚನೆ ಮಾಡಿದ ಪಿಡಿಓರನ್ನು ಕೂಡಲೇ ಸೇವೆಯಿಂದ ವಜಾ ಗೊಳಿಸಬೇಕು ಎಂದು ದಸಂಸ ರಾಜ್ಯ ವಿಭಾಗೀಯ ಸಂಚಾಲಕ ಶೇಖರ್ ಹೆಜಮಾಡಿ ಆಗ್ರಹಿಸಿದ್ದಾರೆ.

ಪೆರ್ಡೂರು ಗ್ರಾಪಂ ಅಧ್ಯಕ್ಷರ ದಬ್ಬಾಳಿಕೆ, ಅನ್ಯಾಯ, ಕಾನೂನು ಬಾಹಿರ ಚಟುವಟಿಕೆ ಹಾಗೂ ಪೊಲೀಸ್ ನಿಷ್ಕ್ರೀಯತೆ ವಿರೋಧಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಉಡುಪಿ ಜಿಲ್ಲಾ ಸಮಿತಿ(ಪ್ರೊ.ಕೃಷ್ಣಪ್ಪ ಸ್ಥಾಪಿತ) ನೇತೃತ್ವದಲ್ಲಿ ಸೋಮವಾರ ಪೆರ್ಡೂರು ಗ್ರಾಪಂ ಕಚೇರಿ ಎದುರು ಹಮ್ಮಿಕೊಳ್ಳಲಾದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಸದಾಶಿವ ಸೇರ್ವೆಗಾರ ಅಕ್ರಮಕ್ಕೆ ಸಂಬಂಧಿಸಿ ನೋಟೀಸ್ ಜಾರಿಗೊಳಿಸಿ ಕಾನೂನು ಪ್ರಕಾರ ಕರ್ತವ್ಯ ನಿರ್ವಹಿಸಿದ ಪೆರ್ಡೂರು ಪಿಡಿಒ ಸುಮನ ಕೆ. ವಿರುದ್ಧ ರಾಜಕೀಯ ಪ್ರೇರಿತ ಸುಳ್ಳು ದೂರು ನೀಡಿ ವರ್ಗಾವಣೆಗೊಳಿಸಲಾಗಿದೆ. ಪಿಡಿಒ ಸುಮನ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿ ನಿಂದಿಸಿ ಬೆದರಿಸಿ, ಮೇಲಾಧಿಕಾರಿಗೆ ಸುಳ್ಳು ದೂರು ನೀಡಿದ ಪೆರ್ಡೂರು ಗ್ರಾಪಂ ಅಧ್ಯಕ್ಷ ದೇವು ಪೂಜಾರಿ ಹಾಗೂ ಸದಸ್ಯರ ವಿರುದ್ಧ ದಲಿತ ದೌರ್ಜನ್ಯ ಕಾಯಿದೆಯಡಿ ಪ್ರಕರಣ ದಾಖಲಾಗಿದ್ದು, ಅವರನ್ನು ಕೂಡಲೇ ಬಂಧಿಸಬೇಕು ಎಂದು ಅವರು ಆಗ್ರಹಿಸಿದರು.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಪೆರ್ಡೂರು ಗ್ರಾಮದ ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿದ ಹೆಬ್ರಿ ಮತ್ತು ಮುದ್ರಾಡಿ ಪಿಡಿಒ ಅವರನ್ನು ಕೂಡಲೇ ಅಮಾನತುಗೊಳಿಸಬೇಕು. ಅಕ್ರಮ ವಾಗಿ ನಿರ್ಮಿಸಿರುವ ಮನೆಯನ್ನು ಕೂಡಲೇ ಧ್ವಂಸಗೊಳಿಸಬೇಕು. ಆದರೆ ಅಕ್ರಮ ಮನೆ ನಿರ್ಮಿಸುತ್ತಿರುವ ಬಗ್ಗೆ ವಿವರಣೆ ನೀಡುವಂತೆ ನೋಟೀಸ್ ನೀಡಿರುವ ಪಿಡಿಒ ಅವರನ್ನೇ ವರ್ಗಾವಣೆ ಮಾಡಿರುವುದು ಅಮಾನವೀಯ ಎಂದು ಆರೋಪಿಸಿದರು.

ಬಳಿಕ ಈ ಕುರಿತ ಮನವಿಯನ್ನು ಗ್ರಾಪಂ ಪಿಡಿಓ ಹಾಗೂ ಪೊಲೀಸ್ ಅಧಿಕಾರಿಗಳ ಮೂಲಕ ಡಿಸಿ, ಜಿಪಂ ಸಿಇಓ, ಎಸ್ಪಿ ಅವರಿಗೆ ಸಲ್ಲಿಸಲಾಯಿತು. ಇದಕ್ಕೂ ಮೊದಲು ಪೆರ್ಡೂರು ಮಾಂಗಲ್ಯ ಸಭಾಭವನದಿಂದ ಗ್ರಾಪಂವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ದಸಂಸ ಜಿಲ್ಲಾ ಸಂಚಾಲಕ ಆನಂದ ಬ್ರಹ್ಮಾವರ, ಜಿಲ್ಲಾ ಸಂಘಟನಾ ಸಂಚಾಲಕರಾದ ಸುಧಾಕರ್ ಪಲಿಮಾರು, ಉಮಾನಾಥ ಪಡುಬಿದ್ರಿ, ಆರತಿ ಗಿಳಿಯಾರು, ವೆಂಕಟೇಶ್ ಮಣಿಪಾಲ, ಕೇಶವ ಸಾಲ್ಯಾನ್, ಕೀರ್ತಿ ಪಡುಬಿದ್ರಿ, ಶಂಭು ಮಾಸ್ಟರ್, ಪುಷ್ಪಕರ್,, ರವಿ ಫಲಿಮಾರು, ಕಾಂಗ್ರೆಸ್ ಮುಖಂಡರಾದ ಸಂತೋಷ್ ಪೂಜಾರಿ ಬೈರಂಪಳ್ಳಿ, ನೀರೆ ಕೃಷ್ಣ ಶೆಟ್ಟಿ, ಶಾಂತಾರಾಮ್ ಸೂಡ, ಪ್ರವೀಣ್ ಶೆಟ್ಟಿ, ನವೀನ್‌ ಚಂದ್ರ ಸುವರ್ಣ, ಮೈರ್ಮಾಡಿ ಸುಧಾಕರ್ ಶೆಟ್ಟಿ, ಸಂಧ್ಯಾ ಶೆಟ್ಟಿ, ಚೇತನಾ ಶೆಟ್ಟಿ, ವಕೀಲ ಉದಯ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News