ಉ. ಪ್ರ.: ಹೊಲದಲ್ಲಿ ದಲಿತ ಬಾಲಕಿಯ ಶವ ಪತ್ತೆ: ಶಾಲೆಗೆ ತೆರಳಿದ್ದ 8ರ ಬಾಲೆಯ ನಿಗೂಢ ಸಾವು

Update: 2021-09-21 18:12 GMT

ಅಲಿಗಢ,ಸೆ.21: ಇಲ್ಲಿಗೆ ಸಮೀಪದ ಕೃಷ್ಣಗಢ ಗ್ರಾಮದ ಸಮೀಪ ಹೊಲವೊಂದರಲ್ಲಿ 8 ವರ್ಷದ ದಲಿತ ಬಾಲಕಿಯ ಮೃತದೇಹವೊಂದು ಪತ್ತೆಯಾಗಿದೆಯೆಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಬಾಲಕಿಯು ಸೋಮವಾರ ಬೆಳಗ್ಗೆ 8:00 ಗಂಟೆಯ ವೇಳೆಗೆ ಶಾಲೆಗೆ ತೆರಳಿದ್ದಳು. ಆದರೆ ಮಧ್ಯಾಹ್ನಕ್ಕೆ ಮುನ್ನ ಆಕೆಯ ಶಾಲಾ ಬ್ಯಾಗ್ ಗದ್ದೆಯ ಬದಿಯಲ್ಲಿ ಪತ್ತೆಯಾಗಿತ್ತು. ಇದನ್ನು ಕಂಡ ದಾರಿಹೋಕರು ಕೂಡಲೇ ಮನೆಯವರ ಗಮನಕ್ಕೆ ತಂದರು. ಬಾಲಕಿಯು ಶಾಲೆಗೆ ತಲುಪಿಲ್ಲವೆಂದು ಗೊತ್ತಾದ ಬಳಿಕ ಕುಟುಂಬಿಕರು ಆಕೆಗಾಗಿ ಹುಡುಕಾಡತೊಡಗಿದರು ಮತ್ತು ಆಕೆಯ ಮೃತದೇಹವು ಗದ್ದೆಯಲ್ಲಿ ಪತ್ತೆಯಾಗಿತ್ತು. ಬಾಲಕಿಯನ್ನು ಅತ್ಯಾಚಾರಗೈದು ಕೊಲೆ ಮಾಡಲಾಗಿದೆ ಎಂದು ಆಕೆಯ ಕುಟುಂಬಿಕರು ಆರೋಪಿಸಿದ್ದಾರೆ. 

ತದನಂತರ ಉದ್ರಿಕ್ತ ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರು ತಪ್ಪಡ್-ಲಾಲ್ಪುರ ರಸ್ತೆಯಲ್ಲಿ ಸುಮರು ಎರಡು ತಾಸುಗ ಕಾಲ ಸಂಚಾರಕ್ಕೆ ತಡೆಯೊಡ್ಡಿದರು ಹಾಗೂ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಪೊಲೀಸರಿಗೆ ಹಸ್ತಾಂತರಿಸಲು ನಿರಾಕರಿಸಿದರು. ಸೋಮವಾರ ರಾತ್ರಿ ಹೊತ್ತಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕಕೆ ಆಗಮಿಸಿದ್ದು, ಮೃತದೇಹವನ್ನು ಹಸ್ತಾಂತರಿಸುವಂತೆ ಗ್ರಾಮಸ್ಥರ ಮನವೊಲಿಸುವಲ್ಲಿ ಸಫಲರಾದರು. ಮಧ್ಯರಾತ್ರಿಯ ವೇಳೆಗೆ ವೈದ್ಯರ ತಂಡವೊಂದು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದೆ.

ಘಟನಾ ಸ್ಥಳಕ್ಕೆ ಅಪರಾಧ ವಿಧಿ ವಿಧಾನ ತಜ್ಞರು ಆಗಮಿಸಿದ್ದು ತನಿಖೆ ನಡೆಸುತ್ತಿದ್ದಾರೆಂದು ಎಸ್ಎಸ್ಪಿ ಕಲಾನಿಧಿ ನೈದಾನಿ ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕವೇ ಸಾವಿಗೆ ಕಾರಣವನ್ನು ಬಹಿರಂಗಪಡಿಸಬಹುದಾಗಿದೆ ಎಂದವರು ಹೇಳಿದರು. ಬಾಲಕಿಯ ಸಾವಿನ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಯ ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ ಎಂದವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News