ಮಂಗಳೂರು: ಕಣಜ ಹುಳು ದಾಳಿ; ಎಂಸಿಎಫ್‌ನ ಮೆಕ್ಯಾನಿಕ್ ಮೃತ್ಯು

Update: 2021-09-22 15:48 GMT

ಮಂಗಳೂರು, ಸೆ.22: ಎಡಪದವಿನ ಪಟ್ಲಚ್ಚಿಲ್‌ನ ನಿವಾಸಿ ಸದಾಶಿವ ಮತ್ತು ಕಮಲಾಕ್ಷಿ ದಂಪತಿ ಪುತ್ರ, ಎಂಸಿಎಫ್‌ನಲ್ಲಿ ಎಸಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಕೇಶವ ಯಾನೆ ಕಿಟ್ಟ (24) ಎಂಬವರು ಕಣಜದ ಹುಳುಗಳ (ಪಿಲಿಕುಂಡೋಲು) ದಾಳಿಯಿಂದ ತೀವ್ರ ಗಾಯಗೊಂಡು ಸಾವನ್ನಪ್ಪಿದ ದಾರುಣ ಘಟನೆ ಬುಧವಾರ ನಡೆದಿದೆ.

ಮನೆಯ ತೆಂಗಿನ ಮರಗಳ ಕಾಯಿ ಕೀಳಲು ತಾನು ಹೊಸದಾಗಿ ಖರೀದಿಸಿ ತಂದಿದ್ದ ಯಂತ್ರ ಬಳಸಿಕೊಂಡು ಮರ ಏರಿದ ಸಂದರ್ಭದಲ್ಲಿ ಮರದಲ್ಲಿ ಗೂಡು ಕಟ್ಟಿದ್ದ ಕಣಜ ಹುಳುವಿನ ಗೂಡಿಗೆ ಕೇಶವರ ತಲೆ ತಾಗಿದೆ. ಈ ವೇಳೆ ಏಕಾಏಕಿಯಾಗಿ ಹುಳುಗಳು ದಾಳಿ ಮಾಡಿವೆ. ಹುಳುಗಳ ದಾಳಿಗೆ ಅವರ ಮೈಮೇಲೆ 70ಕ್ಕೂ ಹೆಚ್ಚು ಕಡೆ ಗಾಯಗಳಾಗಿವೆ.

ಕೂಡಲೇ ಮೂಡುಬಿದಿರೆಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತು. ಚಿಕಿತ್ಸೆ ಫಲಿಸದೆ ಕೇಶವ ಕೊನೆಯುಸಿರೆಳೆದರು. ಅವಿವಾಹಿತರಾಗಿದ್ದ ಅವರು ಮೂವರು ಸಹೋದರರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಬುಧವಾರ ಅಂತ್ಯಸಂಸ್ಕಾರ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News