ಬಿಷಪ್ ಹೇಳಿಕೆ ದುರಾದೃಷ್ಟಕರ ಎಂದು, ಅಂಕಿಅಂಶಗಳ ಮೂಲಕ 'ಲವ್‌, ನಾರ್ಕೋಟಿಕ್‌ ಜಿಹಾದ್ʼ ಸತ್ಯ ಬಿಚ್ಚಿಟ್ಟ ಸಿಎಂ ಪಿಣರಾಯಿ

Update: 2021-09-23 10:49 GMT

ಹೊಸದಿಲ್ಲಿ: ಪಾಲ ಬಿಷಪ್ ಜೋಸೆಫ್ ಕಲ್ಲರಂಗಟ್ಟ್  ಅವರ `ನಾರ್ಕಾಟಿಕ್ ಎಂಡ್ ಲವ್ ಜಿಹಾದ್' ಹೇಳಿಕೆ ವಿವಾದ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಬಿಷಪ್ ಹೇಳಿಕೆ ದುರಾದೃಷ್ಟಕರ ಎಂದರಲ್ಲದೆ ಇಂತಹ ಹೇಳಿಕೆಗೆ ಯಾವುದೇ ಆಧಾರವಿಲ್ಲ ಹಾಗೂ  ಧಾರ್ಮಿಕ ಮತಾಂತರ ಮತ್ತು ಡ್ರಗ್ಸ್ ಕಳ್ಳಸಾಗಣಿಕೆ  ಕುರಿತಾದ ಅಂಕಿಅಂಶಗಳನ್ನು ಪರಿಶೀಲಿಸಿದಾಗ ರಾಜ್ಯದ ಅಲ್ಪಸಂಖ್ಯಾತ ಧರ್ಮಗಳು ಅದರಲ್ಲಿ ಯಾವುದೇ ವಿಶೇಷ ಶಾಮೀಲಾತಿ ಹೊಂದಿಲ್ಲ ಎಂದು ತಿಳಿದು ಬರುತ್ತದೆ ಎಂದರು.

"ರಾಜ್ಯದಲ್ಲಿ 2020ರಲ್ಲಿ  ನಾರ್ಕಾಟಿಕ್ ಡ್ರಗ್ಸ್ ಎಂಡ್ ಸೈಕೋಟ್ರೋಪಿಕ್ ಸಬ್‍ಸ್ಟೆನ್ಸಸ್ ಆಕ್ಟ್ ಅನ್ವಯ 4,941 ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳ 5,422 ಆರೋಪಿಗಳ ಪೈಕಿ 2,700 (ಶೇ 49.80) ಹಿಂದುಗಳು, 869 (ಶೇ 34.47) ಮುಸ್ಲಿಮರು ಮತ್ತು 853 (ಶೇ 15.73) ಕ್ರೈಸ್ತರಾಗಿದ್ದಾರೆ. ಈ ಅನುಪಾತದಲ್ಲಿ ಯಾವುದೇ ಅಸಹಜತೆಯಿಲ್ಲ, ಡ್ರಗ್ಸ್ ಕಳ್ಳಸಾಗಣಿಕೆ ಧರ್ಮದ ಆಧಾರದಲ್ಲಿ ನಡೆಯುವುದಿಲ್ಲ," ಎಂದರು.

ಕ್ರೈಸ್ತ ಮತ್ತು ಇತರ ಸಮುದಾಯಗಳ ಮಹಿಳೆಯರನ್ನು ಮದುವೆಯ ನೆಪದಲ್ಲಿ ಸೆಳೆದು ನಂತರ ಮತಾಂತರಿಸಿ ಇಸ್ಲಾಮಿಕ್ ಸ್ಟೇಟ್‍ನಂತಹ ಉಗ್ರ ಸಂಘಟನೆಗಳಿಗೆ ಸೇರಿಸಲಾಗುತ್ತದೆ ಎಂಬ ಆರೋಪಗಳನ್ನೂ ಅವರು ಅಂಕಿಅಂಶಗಳನ್ನು ಉಲ್ಲೇಖಿಸಿ ನಿರಾಕರಿಸಿದ್ದಾರೆ.

2019ರ ತನಕ ಕೇರಳದಿಂದ ಇಸ್ಲಾಮಿಕ್ ಸ್ಟೇಟ್ ಸೇರಿದ್ದಾರೆನ್ನಲಾದವರಿಗೆ ಸಂಬಂಧಿಸಿದ ಅಂಕಿಅಂಶಗಳನ್ನು ಉಲ್ಲೇಖಿಸಿದ ಅವರು  100 ಮಂದಿ ಕೇರಳಿಗರ ಪೈಕಿ 72 ಮಂದಿ  ವೃತ್ತಿಗೆ ಸಂಬಂಧಿಸಿದಂತೆ ವಿದೇಶಕ್ಕೆ ತೆರಳಿ ಅಲ್ಲಿ ಇಸ್ಲಾಮಿಕ್ ಸ್ಟೇಟ್ ಸಿದ್ಧಾಂತದಿಂಧ ಆಕರ್ಷಿತರಾಗಿ  ಸಂಘಟನೆ ಸೇರಿದ್ದಾರೆ. ಇವರ ಪೈಕಿ ಕೊಝಿಕ್ಕೋಡ್‍ನ ತುರುತ್ತಿಯಾಡ್ ಎಂಬಲ್ಲಿನ ದಾಮೋದರನ್ ಅವರ ಪುತ್ರ ಪ್ರಜು ಹೊರತುಪಡಿಸಿ ಎಲ್ಲರೂ ಮುಸ್ಲಿಂ ಸಮುದಾಯದವರಾಗಿದ್ದಾರೆ.  ಉಳಿದ 28 ಮಂದಿ ಇಲ್ಲಿರುವಾಗಲೇ ಐಎಸ್ ಸಿದ್ಧಾಂತದಿಂದ ಆಕರ್ಷಿತರಾಗಿ ಕೇರಳ ತೊರೆದಿದ್ದಾರೆ" ಎಂದರು. 

ಈ 28 ಮಂದಿಯ ಪೈಕಿ ತಿರುವನಂತಪುರಂನ ಹಿಂದು ಮಹಿಳೆಯೊಬ್ಬರು ಪಾಲಕ್ಕಾಡ್‍ನ ಕ್ರೈಸ್ತ ವ್ಯಕ್ತಿಯನ್ನು ವಿವಾಹವಾಗಿದ್ದರೆ ಕ್ರೈಸ್ತ ವ್ಯಕ್ತಿಯನ್ನೇ ವಿವಾಹವಾಗಿದ್ದ ಎರ್ಣಾಕುಳಂನ ಕ್ರೈಸ್ತ ಮಹಿಳೆ ಕೂಡ ಸೇರಿದ್ದಾರೆ. ಅವರು ವಿವಾಹ ನಂತರ ಇಸ್ಲಾಂಗೆ ಮತಾಂತರಗೊಂಡು ಐಎಸ್ ಸೇರಿದ್ದಾರೆ" ಎಂದು ಮುಖ್ಯಮಂತ್ರಿ ಹೇಳಿದರು.

ಬಿಷಪ್ ಜೋಸೆಫ್ ಕಲ್ಲರಂಗಟ್ಟ್ ಅವರ ಹೇಳಿಕೆ ಕೇರಳ ಸಮಾಜವನ್ನು ಪ್ರತಿಫಲಿಸುವುದಿಲ್ಲ ಹಾಗೂ ಅವರು  ಈ ವಿಚಾರದಲ್ಲಿ ಜನರ ನಿಲುವನ್ನು ಅರ್ಥೈಸಿಕೊಂಡು  ಪ್ರತಿಕ್ರಿಯಿಸುತ್ತಾರೆಂಬ ಆಶಾವಾದವನ್ನು ಪಿಣರಾಯಿ ವ್ಯಕ್ತಪಡಿಸಿರು. ಈ ಕುರಿತು ಚರ್ಚಿಸಲು ಸರ್ವಪಕ್ಷಗಳ ಸಭೆ ಕರೆಯಬೇಕೆಂಬ ವಿಪಕ್ಷಗಳ ಬೇಡಿಕೆ ತಿರಸ್ಕರಿಸಿದ ಸೀಎಂ, ಹೇಳಿಕೆಯನ್ನು ರಾಜಕೀಯ ಪಕ್ಷಗಳಿಗೆ ಸೇರಿದವರು ಯಾರೂ ಮಾಡಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News