ಶಾಸಕರು, ಸಂಸದರ ಸಿಡಿಗಳಿವೆ, ಅಗತ್ಯ ಸಂದರ್ಭದಲ್ಲಿ ಹೊರಬಿಡುತ್ತೇನೆ: ಮಹೇಶ್ ಶೆಟ್ಟಿ ತಿಮರೋಡಿ

Update: 2021-09-23 13:26 GMT

ಬೆಳ್ತಂಗಡಿ, ಸೆ.23: ಹಿಂದುತ್ವದ ಹೆಸರಿನಲ್ಲಿ ಅಧಿಕಾರ ಪಡೆದು ಹಿಂದೂಗಳ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಮೇಲೆ ಬಿಜೆಪಿ ಸರಕಾರ ದಾಳಿ ಮಾಡುತ್ತಿದೆ. ಶಾಸಕರು ಸಂಸದರು ಇದನ್ನು ನೋಡಿ ಮೌನವಾಗಿದ್ದಾರೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಇಂತಹ ಹೇಯ ಕೃತ್ಯ ನಡೆದಿಲ್ಲ ಎಂದು ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಖಂಡಿಸಿದ್ದಾರೆ.

ದೇವಾಲಯ ಧ್ವಂಸ ಖಂಡಿಸಿ ರಾಜ್ಯ ಸರಕಾರದ ವಿರುದ್ಧ ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆ ವತಿಯಿಂದ ತಾಲೂಕು ಮಿನಿ ವಿಧಾನ ಸೌಧದ ಎದುರು ಗುರುವಾರ ನಡೆದ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಧಾರ್ಮಿಕ ಕೇಂದ್ರಗಳನ್ನು ಯಾರೇ ಒಡೆದರೂ ಅವರು ಭಯೋತ್ಪಾದಕರಾಗಿದ್ದಾರೆ. ಬಿಜೆಪಿಗರಿಗೆ ಹಿಂದುತ್ವ ಕೇವಲ ಅಧಿಕಾರಕ್ಕಾಗಿ ಮಾತ್ರ ಇರುವುದಾಗಿದೆ. ಬಿಜೆಪಿಯಲ್ಲಿ ಭ್ರಷ್ಟಾಚಾರಿಗಳು, ಅತ್ಯಾಚಾರಿಗಳು ತುಂಬಿದ್ದಾರೆ. ಕಡಿಮೆಯಾಗಿರುವುದಕ್ಕೆ ಹೊರಗಿನಿಂದಲೂ ತರುತ್ತಿದ್ದಾರೆ. ಅಧಿಕಾರಕ್ಕೆ ಬಂದು ಎರಡು ವರ್ಷದಲ್ಲಿ ಹಲವು ಶಾಸಕರು ಕೋಟ್ಯಾಧೀಶರಾಗಿದ್ದಾರೆ. ಇದು ಹೇಗೆ ಸಾಧ್ಯವಾಗಿದೆ ಎಂಬುದು ತಿಳಿದಿದೆ. ಶಾಸಕರು ಸಂಸದರ ಸಿಡಿಗಳಿವೆ. ಅದನ್ನು ಅಗತ್ಯ ಸಂದರ್ಭದಲ್ಲಿ ಹೊರಬಿಡುತ್ತೇನೆ ಎಂದು ಅವರು ಎಚ್ಚರಿಸಿದರು.

ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕೇಂದ್ರ ಸರಕಾರ ದೇಶದ ಸಂಪತ್ತನ್ನು ಮಾರುತ್ತಿದ್ದಾರೆ ಮುಂದಿನ ದಿನಗಳಲ್ಲಿ ಇವರು ದೇಶವನ್ನು ಸರ್ವನಾಶ ಮಾಡುವ ಅಪಾಯವಿದೆ ಎಂದರು. ಹಿಂದೂ ಧರ್ಮದ ಯಾವುದೇ ಪವಿತ್ರ ಸ್ಥಾನಗಳನ್ನು ಮುಟ್ಟಲು ಬಂದರೆ ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಅವರು ಎಚ್ಚರಿಸಿದರು. ಆರೆಸ್ಸೆಸ್‌ಗೆ ಸಂಘದ ಕಾರ್ಯಕರ್ತರು ಯಾರೂ ಮುಖ್ಯಮಂತ್ರಿಯಾಗಲು ಸಿಗಲಿಲ್ಲವೇ ಎಂದು ಪ್ರಶ್ನಿಸಿದ ತಿಮರೋಡಿ, ಬೊಮ್ಮಾಯಿ ಒಬ್ಬ ಅವಿವೇಕಿ ಮುಖ್ಯಮಂತ್ರಿಯಾಗಿದ್ದಾರೆ ಎಂದು ಟೀಕಿಸಿದ್ದಾರೆ.

ಕಾರ್ಯಕ್ರಮಕ್ಕೆ ಮೊದಲು ಬೆಳ್ತಂಗಡಿ ಅಯ್ಯಪ್ಪ ಮಂದಿರದ ಬಳಿಯಿಂದ ತಾಲೂಕು ಮಿನಿ ವಿಧಾನ ಸೌದದ ವರೆಗೆ ಬೃಹತ್ ಪ್ರತಿಭಟನಾ ರಾಲಿ ನಡೆಯಿತು.

ಪ್ರತಿಭಟನೆಯ ನೇತೃತ್ವವನ್ನು ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆ ಗೌರವಾಧ್ಯಕ್ಷ ಹರೀಶ್ ಬರೆಮೇಲು, ಅಧ್ಯಕ್ಷ ಅನಿಲ್ ಕುಮಾರ್, ಕಾರ್ಯದರ್ಶಿ ಸಂದೀಪ್, ಸಂಚಾಲಕ ಮನೋಜ್ ಕುಂಜರ್ಪ, ಪ್ರಮುಖರಾದ ಪ್ರಜ್ವಲ್, ವೆಂಕಪ್ಪ ಕೋಟ್ಯಾನ್, ಮೊದಲಾದವರು ವಹಿಸಿದ್ದರು.

ಬಾಲಕಿ ಸೌಜನ್ಯಾಳ ಅತ್ಯಾಚಾರ- ಕೊಲೆಯಾದಾಗ ಡಿ.ವಿ.ಸದಾನಂದ ಗೌಡ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಅಂದು ಅವರು ಅನ್ಯಾಯಕ್ಕೆ ಒಳಗಾದ ಬಾಲಕಿಯ ಪರವಾಗಿ ನಿಲ್ಲದೆ ಅತ್ಯಾಚಾರಿಗಳ ಪರವಾಗಿ ನಿಂತಿದ್ದರು. ಸೌಜನ್ಯಾಳ ಶಾಪ ಡಿವಿಗೆ ತಾಗಿದೆ, ಈಗ ಅವರು ಬೀದಿಯಲಿ ನಿಂತಿದ್ದಾರೆ.
-ಮಹೇಶ್ ಶೆಟ್ಟಿ ತಿಮರೋಡಿ , ಸ್ಥಾಪಕಾಧ್ಯಕ್ಷ, ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News