​ಪೌರ ಕಾರ್ಮಿಕರ ಭತ್ಯೆ ಹೆಚ್ಚಳಕ್ಕೆ ಮನವಿ: ಸುಮಿತ್ರಾ ಆರ್. ನಾಯಕ್

Update: 2021-09-23 14:16 GMT

ಉಡುಪಿ, ಸೆ.23: ಉಡುಪಿಯಲ್ಲಿ ಪೌರ ಕಾರ್ಮಿಕರಿಗೆ ನೀಡಲಾಗುತ್ತಿರುವ ವಿವಿಧ ಭತ್ಯೆಗಳನ್ನು ಹೆಚ್ಚಿಸುವಂತೆ ರಾಜ್ಯ ಸರಕಾರಕ್ಕೆ ಮನವಿಯನ್ನು ಸಲ್ಲಿಸಲಾಗಿದೆ ಎಂದು ಉಡುಪಿ ನಗರಸಭೆಯ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್ ಹೇಳಿದ್ದಾರೆ.

ಗುರುವಾರ ನಗರದ ಅಜ್ಜರಕಾಡಿನ ಪುರಭವನದಲ್ಲಿ ಉಡುಪಿ ನಗರಸಭೆಯ ವತಿಯಿಂದ ಆಯೋಜಿಸಲಾದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಉಡುಪಿ ನಗರದಲ್ಲಿ ಒಟ್ಟು 293 ಪೌರಕಾರ್ಮಿಕರಿದ್ದು, ಇವರು ಪ್ರತಿನಿತ್ಯ ನಗರದ ಸ್ವಚ್ಛತೆಗೆ ಆದ್ಯತೆಯನ್ನು ನೀಡುತ್ತಿದ್ದಾರೆ. ಅವರ ಭತ್ಯೆಗಳನ್ನು ಹೆಚ್ಚಿಸುವುದು ಅಷ್ಟೇ ಅಲ್ಲದೇ ಬೆಳಗ್ಗಿನ ಉಪಹಾರದ ಭತ್ಯೆಯನ್ನೂ ಸಹ ಹೆಚ್ಚಿಸುವಂತೆ ಮನವಿಯನ್ನು ಸಲ್ಲಿಸಲಾಗಿದೆ ಎಂದವರು ತಿಳಿಸಿದರು.

ಕಾರ್ಮಿಕರು ಕೆಲಸದ ವೇಳೆಯಲ್ಲಿ ಅಜಾಗರೂಕತೆ ಮತ್ತು ನಿರ್ಲಕ್ಷವಹಿಸದೆ ಕಾರ್ಯ ನಿರ್ವಹಿಸಬೇಕು. ಕಾರ್ಮಿಕರು ಕರ್ತವ್ಯಕ್ಕೆ ಹೆಚ್ಚು ಗೈರು ಹಾಜರಾಗದೆ ಉಡುಪಿ ನಗರಸಭೆ ಸ್ವಚ್ಛತೆಯಲ್ಲಿ ದೇಶದಲ್ಲಿಯೇ ಉತ್ತಮ ನಗರಸಭೆಯಾಗಿ ಗುರುತಿಸಿಕೊಳ್ಳುವಂತೆ ಕರ್ತವ್ಯ ನಿರ್ವಹಿಸಬೇಕು ಎಂದರು.

ಪೌರಕಾರ್ಮಿಕರಿಗೆ ವಸತಿ: ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಉಡುಪಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಪ್ರತಿಭಾ, ಜಿಲ್ಲೆಯ ಲ್ಲಿರುವ ಎಲ್ಲಾ ನಿರ್ವಸಿತ ಪೌರಕಾರ್ಮಿಕರಿಗೆ ವಸತಿ ಕಲ್ಪಿಸಲು ಸರಕಾರವು ಗೃಹ ಭಾಗ್ಯ, ಪ್ರಧಾನ ಮಂತ್ರಿ ಆವಾಸ ಯೋಜನೆಗಳಂತಹ ಹಲವಾರು ಯೋಜನೆ ಗಳನ್ನು ಜಾರಿಗೆ ತಂದಿದ್ದು ಅದರ ಸದುಪಯೋಗ ಪಡೆದುಕೊಳ್ಳಬೇಕು. ಉಡುಪಿಯಲ್ಲಿ ಕೇವಲ 7-8 ಮಂದಿ ಮಾತ್ರ ಇದರ ಉಪಯೋಗ ಪಡೆದಿದ್ದಾರೆ ಎಂದರು.

ಅದೇ ರೀತಿ ಸ್ವಂತ ನಿವೇಶನವಿದ್ದು, ವಸತಿ ಸೌಕರ್ಯ ಇಲ್ಲದವರಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಗೃಹ ನಿರ್ಮಾಣಕ್ಕೆ 7.5ಲಕ್ಷ ರೂ.ನೀಡುತ್ತಿದೆ. ಅಲ್ಲದೇ ಸಾಲವನ್ನೂ ಒದಗಿಸುತ್ತದೆ ಎಂದ ಅವರು, ಈ ಬಗ್ಗೆ ಅನಕ್ಷರಸ್ಥ ಪೌರಕಾರ್ಮಿಕರಿಗೆ ಪೌರಾಯುಕ್ತರು ಹಾಗೂ ಸಂಬಂದಿಸಿದ ಅಧಿಕಾರಿಗಳು ಸೂಕ್ತ ಮಾರ್ಗದರ್ಶನ ನೀಡುವುದರ ಜೊತೆಗೆ ಯೋಜನೆಗಳ ಫಲಾನುಭವಿ ಗಳನ್ನಾಗಿಸಬೇಕು ಎಂದರು.

ಮಳೆ, ಚಳಿ, ಬಿಸಿಲು ಎನ್ನದೆ ವರ್ಷದ 365 ದಿನವೂ ಕಾರ್ಯ ನಿರತರಾಗಿರುವ ಪೌರಕಾರ್ಮಿಕರ ಆರೋಗ್ಯ ಹಾಗೂ ಬದುಕಿನ ಬಗ್ಗೆ ನಾವು ಕಾಳಜಿಯನ್ನು ವಹಿಸಬೇಕು. ಪೌರಕಾರ್ಮಿಕರ ಮಕ್ಕಳು ಶೈಕ್ಷಣಿಕವಾಗಿ ಹಿಂದುಳಿಯದೇ ಸಮಾಜದಲ್ಲಿ ಉತ್ತಮ ಶಿಕ್ಷಣವನ್ನು ಪಡೆಯುವಂತಾಗಬೇಕು. ಆ ನಿಟ್ಟಿನಲ್ಲಿ ಸರಕಾರ ಉಚಿತ ಶೈಕ್ಷಣಿಕ ಸೌಲಭ್ಯಗಳು, ಶಿಷ್ಯವೇತನವನ್ನು ನೀಡುತ್ತಿದ್ದು, ಖಾಸಗಿ ಶಾಲಾ-ಕಾಲೇಜುಗಳಲ್ಲಿ ಪೌರಕಾರ್ಮಿಕರ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುವಂತೆ ಸರಕಾರವು ಯೋಜನೆಗಳನ್ನು ಜಾರಿಗೆ ತಂದಿದೆ. ಅದರ ಸದುಪಯೋಗ ಪಡೆದುಕೊಳ್ಳುವುದರ ಜೊತೆಗೆ ಈ ಮಕ್ಕಳು ಸಮಾಜದ ಉನ್ನತ ಹುದ್ದೆಗಳನ್ನು ಪಡೆದುಕೊಳ್ಳುವಂತಾಗಬೇಕು ಎಂದು ಹೇಳಿದರು.

ಪೌರಕಾರ್ಮಿಕರು ಕೋವಿಡ್ ಸಾಂಕ್ರಾಮಿಕದಂತಹ ಮಹಾಮಾರಿಯ ಸಂದರ್ಭದಲ್ಲೂ ಸ್ವಚ್ಛತೆಗೆ ಆಧ್ಯತೆ ನೀಡಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಅವರಿಗೆ ಪ್ರತೀ ವರ್ಷವೂ ನೀಡುತ್ತಿರುವ ವಿಶೇಷ ಭತ್ಯೆಯನ್ನು 3,500ದಿಂದ 7,000 ರೂ. ಗಳಿಗೆ ಹೆಚ್ಚಿಸಲಾಗಿದೆ ಎಂದರು.

ನಗರಸಭೆಯ ಪೌರಾಯುಕ್ತ ಡಾ.ಉದಯ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಾಗರತ್ನ ಆರೋಗ್ಯ ರಕ್ಷಣೆ ಕುರಿತಂತೆ ಪೌರಕಾರ್ಮಿಕರು ವಹಿಸಬೇಕಾದ ಮುಂಜಾಗೃತಾ ಕ್ರಮಗಳ ಬಗ್ಗೆ ಉಪನ್ಯಾಸ ನೀಡಿದರು.

ಸಭಾ ಕಾರ್ಯಕ್ರಮಕ್ಕೂ ಮೊದಲು, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ವತಿಯಿಂದ ಪೌರ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ನಿವೃತ್ತಿ ಹೊಂದಲಿರುವ ಹಿರಿಯ ಪೌರ ಕಾರ್ಮಿಕರನ್ನು ನಗರಸಭೆ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಅಂಚನ್, ನಗರಸಭಾ ಸದಸ್ಯ ಹಾಗೂ ಉಡುಪಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಶ್ರೀಕೃಷ್ಣರಾವ್ ಕೊಡಂಚ, ಪೌರಸೇವಾ ನೌಕರರ ಸೇವಾ ಸಂಘದ ಅಧ್ಯಕ್ಷ ಮನೋಹರ್, ಇಂಜಿನಿಯರ್ ಮೋಹನ್‌ರಾಜ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News