ಮಂಗಳೂರು: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಗೆ ಚೂರಿ ಇರಿತ; ದೂರು

Update: 2021-09-24 15:17 GMT

ಮಂಗಳೂರು, ಸೆ.24: ಕ್ಷುಲ್ಲಕ ಕಾರಣಕ್ಕೆ ತಂಡವೊಂದು ವ್ಯಕ್ತಿಗೆ ಚೂರಿಯಿಂದ ಇರಿದು ಪರಾರಿಯಾಗಿದ್ದಾರೆನ್ನಲಾದ ಘಟನೆ ಗುರುವಾರ ಸಂಜೆ ನಗರದ ಬಲ್ಮಠ ಮೈದಾನ ಸಮೀಪ ವರದಿಯಾಗಿದೆ. ಸ್ಥಳೀಯ ನಿವಾಸಿ ಝಯಾನ್ ರಿಶಾದ್ ಚೂರಿ ಇರಿತಕ್ಕೊಳಗಾದ ವ್ಯಕ್ತಿ ಎಂದು ತಿಳಿದು ಬಂದಿದೆ.

ಝಯಾನ್ ರಿಶಾದ್ ಎಂಬವರು ಸೆ.23ರಂದು ಸಂಜೆ 7 ಗಂಟೆ ಸುಮಾರಿಗೆ ತನ್ನ ಗೆಳೆಯರೊಂದಿಗೆ ಬಲ್ಮಠ ಆರ್ಯ ಸಮಾಜ ರಸ್ತೆಯಲ್ಲಿರುವ ಹೊಟೇಲ್‌ಗೆ ತೆರಳಿದ್ದರು. ಟೇಬಲ್ ನಲ್ಲಿ ಕುಳಿತು ಇನ್ನೊಂದು ಟೇಬಲ್‌ನ ಒಂದು ಖುರ್ಚಿಯನ್ನು ಅಲ್ಲಿರುವ ಗ್ರಾಹಕರ ಬಳಿ ಕೇಳಿ ತೆಗೆದುಕೊಂಡರು. ಈ ವೇಳೆ ಪರಸ್ಪರ ಮಾತಿಗೆ ಮಾತು ಬೆಳೆದು ಹೊಟೇಲ್ ಹೊರಗೆ ಹೊಡೆದಾಟ ನಡೆದಿದೆ ಎನ್ನಲಾಗಿದೆ.

ನಂತರ ಸಂಜೆ 7:30ರ ಹೊತ್ತಿಗೆ ‘ಮಾತನಾಡಿ ಸರಿ ಮಾಡುವಾ’ ಎಂದು ಬಲ್ಮಠ ಮೈದಾನ ಬಳಿಗೆ ರಿಶಾದ್ ಅವರನ್ನು ಕರೆಸಿದ ತಂಡವು ಅವಾಚ್ಯವಾಗಿ ನಿಂದಿಸಿ, ಚೂರಿಯಿಂದ ಇರಿಸಿದ್ದಾರೆ. ಅಲ್ಲದೆ, ಆರೋಪಿಗಳಿಗೆ ಜೀವ ಬೆದರಿಕೆಯನ್ನೂ ಒಡ್ಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News