ಸೆ. 27ಕ್ಕೆ ಭಾರತ್ ಬಂದ್: ಕರಾವಳಿಯಲ್ಲಿ ವಿವಿಧ ಸಂಘಟನೆಗಳ ಬೆಂಬಲ

Update: 2021-09-26 14:42 GMT

ಮಂಗಳೂರು : ಕೇಂದ್ರ ಸರಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ನಡೆಸುತ್ತಿರುವ ಪ್ರತಿಭಟನೆ 10 ತಿಂಗಳು ಪೂರೈಸುವ ದಿನವಾದ ಸೆ.27ರಂದು ಭಾರತ್ ಬಂದ್‌ಗೆ ರೈತ ಸಂಘಟನೆಗಳು ಕರೆ ನೀಡಿವೆ. ಇದಕ್ಕೆ ಜಿಲ್ಲೆಯ ಹಲವು ಸಂಘಟನೆಗಳು ಬೆಂಬಲ ಸೂಚಿಸಿವೆ.

ಹೆದ್ದಾರಿ ಬಂದ್: ಭಾರತ್ ಬಂದ್ ಬೆಂಬಲಿಸಿ ರೈತ, ಕಾರ್ಮಿಕ, ಜನಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಬೃಹತ್ ಪ್ರತಿಭಟನಾ ಸಭೆ ಮತ್ತು ರಾಷ್ಟ್ರೀಯ ಹೆದ್ದಾರಿ ಬಂದ್ ಹೋರಾಟ ಸೋಮವಾರ ಬೆಳಗ್ಗೆ ಬಂಟ್ವಾಳ ಬಿ.ಸಿ. ರೋಡ್‌ನ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಬಳಿ ನಡೆಯಲಿದೆ.

ಸಂಯುಕ್ತ ಕಿಸಾನ್ ಮೋರ್ಚಾದ ಬೇಡಿಕೆಗಳ ಜತೆಗೆ ಉಡುಪಿ- ಕಾಸರಗೋಡು ವಿದ್ಯುತ್ ಮಾರ್ಗ, ಡಿಸಿ ಮನ್ನಾ ಜಮೀನು, ವಿದ್ಯುತ್ ಸ್ಮಾರ್ಟ್ ಮೀಟರ್ ಅಳವಡಿಕೆ, ಮಂಗಳೂರು- ಕಾರ್ಕಳ ಹೆದ್ದಾರಿ ಭೂಸ್ವಾಧೀನದಲ್ಲಿ ಕೃಷಿ ಭೂಮಿಗೆ ನಿಕೃಷ್ಟ ಪರಿಹಾರ ಇತ್ಯಾದಿ ಸ್ಥಳೀಯ ಸಮಸ್ಯೆಗಳ ಬಗ್ಗೆಯೂ ಈ ಪ್ರತಿಭಟನೆಯಲ್ಲಿ ಧ್ವನಿ ಎತ್ತಲಾಗುವುದು ಎಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ರವಿಕಿರಣ ಪುಣಚ ತಿಳಿಸಿದ್ದಾರೆ.

ಸಿಪಿಐ, ಸಿಪಿಎಂ ಬೆಂಬಲ: ಬಿ.ಸಿ. ರೋಡ್‌ನಲ್ಲಿ ಬೆಳಗ್ಗೆ ನಡೆಯಲಿರುವ ಪ್ರತಿಭಟನೆ ಹಾಗೂ ರಾಷ್ಟ್ರೀಯ ಹೆದ್ದಾರಿ ಬಂದ್‌ಗೆ ಸಿಪಿಐ ದ.ಕ. ಜಿಲ್ಲಾ ಸಮಿತಿಯು ಪೂರ್ಣ ಬೆಂಬಲ ನೀಡಿದೆ. ಪಕ್ಷದ ಕಾರ್ಯಕರ್ತರು ಇದರಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್ ಹಾಗೂ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಮನವಿ ಮಾಡಿದ್ದಾರೆ.

ಎಐಟಿಯುಸಿ ಬೆಂಬಲ: ದೇಶದ ಎಲ್ಲ ರೈತ ಸಂಘಟನೆಗಳು ಕೃಷಿ ಮಸೂದೆಗಳ ವಾಪಸಾತಿ ಮತ್ತಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರ ನಡೆಯುವ ಭಾರತ ಬಂದ್ ಯಶಸ್ವಿಗೊಳಿಸಲು ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ಜಿಲ್ಲಾ ಕಾರ್ಯದರ್ಶಿ ಎಚ್.ವಿ. ರಾವ್ ಮನವಿ ಮಾಡಿದ್ದಾರೆ.

ನೈತಿಕ ಬೆಂಬಲ: ಭಾರತ್ ಬಂದ್‌ಗೆ ಸಂಘದ ಯಾವುದೇ ವಿರೋಧವಿಲ್ಲ. ಸಂಪೂರ್ಣವಾಗಿ ನೈತಿಕ ಬೆಂಬಲ ನೀಡುತ್ತೇವೆ ಎಂದು ದ.ಕ. ಜಿಲ್ಲಾ ಆಟೊ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ವಿಷ್ಣುಮೂರ್ತಿ ತಿಳಿಸಿದ್ದಾರೆ.

ಬಂದ್‌ಗೆ ಸಾಕಷ್ಟು ಪ್ರಚಾರ: ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟದ ಭಾಗವಾದ ಭಾರತ್ ಬಂದ್‌ಗೆ ಸಂಪೂರ್ಣ ಬೆಂಬಲವಿದೆ. ಭಾರತ್ ಬಂದ್‌ನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗಿಯಾಗಲು ಈಗಾಗಲೇ ಕರಪತ್ರ ಹಂಚಿ ಪ್ರಚಾರ ನಡೆಸಲಾಗಿದೆ. ಬಿ.ಸಿ.ರೋಡ್‌ನಲ್ಲಿ ನಡೆಯುವ ಪ್ರತಿಭಟನೆ, ಹೆದ್ದಾರಿ ಬಂದ್‌ನಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಕರ್ನಾಟಕ ಪ್ರಾಂತ್ಯ ರೈತ ಸಂಘದ ರಾಜ್ಯ ಸಮಿತಿ ಉಪಾಧ್ಯಕ್ಷ ಯಾದವ ಶೆಟ್ಟಿ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಪ್ರತಿಭಟನೆ: ದೆಹಲಿ ರೈತರ ಹೋರಾಟ ಬೆಂಬಲಿಸಿ, ರೈತ ಕಾರ್ಮಿಕರ ಬೇಡಿಕೆ ಜೊತೆ ಬೆಲೆ ಏರಿಕೆ, ಕಾನೂನುಬಾಹಿರ ಮೈಕ್ರೋ ಕೈಸಾಲ ಮನ್ನಾ ಮಾಡಬೇಕು ಎಂಬ ಬೇಡಿಕೆ ಮುಂದಿಟ್ಟು ಸೆ.27ರಂದು ಮಧ್ಯಾಹ್ನ 3 ಗಂಟೆಗೆ ನಗರದ ಪುರಭವನ ಸಮೀಪದ ಕ್ಲಾಕ್ ಟವರ್ ಹತ್ತಿರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಕಮ್ಯೂನಿಸ್ಟ್ ಮುಖಂಡ ಬಿ.ಎಂ.ಭಟ್ ತಿಳಿಸಿದ್ದಾರೆ.

ಸೆ.27: ಬಂದರು ಶ್ರಮಿಕರ ಸಂಘ ಪ್ರತಿಭಟನೆ

ರೈತರ ಮತ್ತು ಕಾರ್ಮಿಕರ ಬದುಕಿಗೆ ಮಾರಕವಾಗಿರುವ ಹೊಸ ಕೃಷಿ ಕಾಯಿದೆಗಳನ್ನು ಕೈಬಿಡುವಂತೆ ಒತ್ತಾಯಿಸಿ ಸೆ.27ರಂದು ದೇಶ ವ್ಯಾಪಿ ನಡೆಯುವ ಭಾರತ್ ಬಂದ್ ಬೆಂಬಲಿಸಿ ಬೆಳಗ್ಗೆ 9:45ಕ್ಕೆ ಹಳೆ ಬಂದರು ಸಗಟು ಮಾರುಕಟ್ಟೆಯ ಕಾರ್ಮಿಕರ ಕಟ್ಟೆ ಬಳಿ ಬಂದರು ಶ್ರಮಿಕರ ಸಂಘದ ನೇತೃತ್ವದಲ್ಲಿ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿದೆ.

ರಾಜ್ಯ ಹಮಾಲಿ ಕಾರ್ಮಿಕ ಫೆಡರೇಷನ್ ರಾಜ್ಯ ಅಧ್ಯಕ್ಷ ಕೆ.ಮಹಾಂತೇಶ್ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ಬಂದರು ಶ್ರಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಕೆ. ಇಮ್ತಿಯಾಜ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

‘ಎಂದಿನಂತೆಯೇ ಬಸ್ ಸಂಚಾರ’

ರೈತರು ದೇಶದ ಬೆನ್ನೆಲುಬು. ಕೃಷಿಕರ ಭಾರತ್ ಬಂದ್‌ಗೆ ಸಂಘದ ನೈತಿಕ ಬೆಂಬಲವಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಜಿಲ್ಲೆಯಲ್ಲಿ ಎಂದಿನಂತೆಯೇ ಬಸ್‌ಗಳು ಓಡಾಟ ನಡೆಸಲಿವೆ.

- ಜಯಶೀಲ ಅಡ್ಯಂತಾಯ
ದ.ಕ. ಜಿಲ್ಲಾ ಖಾಸಗಿ ಬಸ್ ಮಾಲಕರ ಸಂಘದ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News