ಮುಖ್ಯಮಂತ್ರಿಯವರೇ, ಮಂಗಳೂರಿನಲ್ಲಿರುವುದು ಬಿಜೆಪಿ ಸರಕಾರನಾ? ತಾಲಿಬಾನಿಗಳದ್ದಾ?: ಸಿದ್ದರಾಮಯ್ಯ
ಮಂಗಳೂರು, ಸೆ.28: ರಾ.ಹೆ.66ರ ಸುರತ್ಕಲ್-ಎನ್ಐಟಿಕೆ ಸಮೀಪದ ಟೋಲ್ಗೇಟ್ ಬಳಿ ವೈದ್ಯಕೀಯ ವಿದ್ಯಾರ್ಥಿಗಳನ್ನು ಸಂಘ ಪರಿವಾರದ ಕಾರ್ಯಕರ್ತರೆನ್ನಲಾದ ತಂಡ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿರುವ ಕೃತ್ಯವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಖಂಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮುಖ್ಯಮಂತ್ರಿಯವರೇ, ಮಂಗಳೂರಿನಲ್ಲಿ ಇರುವುದು ಬಿಜೆಪಿ ಸರ್ಕಾರನಾ? ಅಥವಾ ತಾಲಿಬಾನ್ಗಳದ್ದಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೆ.26ರಂದು ಜೀಪಿನಲ್ಲಿ ತೆರಳುತ್ತಿದ್ದ ವೈದ್ಯಕೀಯ ವಿದ್ಯಾರ್ಥಿಗಳನ್ನು ರಾ.ಹೆ.66ರ ಸುರತ್ಕಲ್-ಎನ್ಐಟಿಕೆ ಸಮೀಪದ ಟೋಲ್ಗೇಟ್ ಬಳಿ ತಂಡವೊಂದು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿ ದಾಂಧಲೆ ನಡೆಸಿತ್ತು. ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆ ಬಳಿಕ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಇಲಾಖೆಯು ಸೋಮವಾರ ರಾತ್ರಿ ಬಜರಂಗ ದಳದ ಜಿಲ್ಲಾ ಪ್ರಮುಖ ಪ್ರೀತಂ ಶೆಟ್ಟಿ, ಬಜರಂಗ ದಳ ಸುರತ್ಕಲ್ ಪ್ರಖಂಡ ಪ್ರಮುಖ ಅರ್ಶಿತ್, ಶ್ರೀನಿವಾಸ್, ರಾಕೇಶ್, ಅಭಿಷೇಕ್ ಎಂಬವರನ್ನು ಬಂಧಿಸಿತ್ತು. ಬಂಧಿತ ಆರೋಪಿಗಳ ವಿರುದ್ಧ ಐಪಿಎಸ್ ಸೆಕ್ಷನ್ 341, 323, 504ರಡಿ ಪ್ರಕರಣ ದಾಖಲಿಸಿ ಠಾಣೆಯಲ್ಲೇ ಜಾಮೀನು ನೀಡಿ ಬಿಡುಗಡೆಗೊಳಿಸಲಾಗಿದೆ.
ಈ ಪ್ರಕರಣವನ್ನು ಪೊಲೀಸರು ನಿಭಾಯಿಸಿದ ಕ್ರಮಕ್ಕೆ ಸಾರ್ವಜನಿಕರಿಂದ ಅಸಮಾಧಾನ ವ್ಯಕ್ತವಾಗಿದೆ.
ಸನ್ಮಾನ್ಯ @CMofKarnataka ಅವರೇ,
— Siddaramaiah (@siddaramaiah) September 28, 2021
ಮಂಗಳೂರಿನಲ್ಲಿ ಇರುವುದು @BJP4Karnataka ಸರ್ಕಾರನಾ? ತಾಲಿಬಾನ್ಗಳದ್ದಾ? pic.twitter.com/zfprzRcNBd