ವಿದ್ಯಾರ್ಥಿಗಳ ಹಲ್ಲೆ ಪ್ರಕರಣ; ಆರೋಪಿಗಳಿಗೆ ಜಾಮೀನು ಖಂಡಿಸಿ ಕ್ಯಾಂಪಸ್ ಫ್ರಂಟ್ ಪ್ರತಿಭಟನೆ
ಮಂಗಳೂರು, ಸೆ.28: ಸುರತ್ಕಲ್ನಲ್ಲಿ ಜೀಪಿನಲ್ಲಿ ತೆರಳುತ್ತಿದ್ದ ವೈದ್ಯಕೀಯ ವಿದ್ಯಾರ್ಥಿಗಳನ್ನು ತಡೆದು ನಿಲ್ಲಿಸಿ ಹಲ್ಲೆಗೈದು, ಅವಾಚ್ಯ ಶಬ್ದ ಗಳಿಂದ ನಿಂದಿಸಿ ದಾಂಧಲೆ ನಡೆಸಿದ ದುಷ್ಕರ್ಮಿಗಳ ವರ್ತನೆಯನ್ನು ಖಂಡಿಸಿ ಹಾಗೂ ಬಂಧಿತ ಆರೋಪಿಗಳಿಗೆ ಠಾಣೆಯಲ್ಲೇ ಜಾಮೀನು ನೀಡಿದ ಪೊಲೀಸರ ನಡೆಯನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ಜಿಲ್ಲಾ ಸಮಿತಿ ವತಿಯಿಂದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಮುಖಂಡ ಅಶ್ಫಾಕ್ ಬಂಟ್ವಾಳ, ಸುರತ್ಕಲ್ನಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ಪರವಾಗಿ ಜಿಲ್ಲೆಯ ಪೊಲೀಸರು ನಿಂತಿರುವಂತಹದು ಖಂಡನೀಯ. ಜಿಲ್ಲೆಯ ವಿದ್ಯಾರ್ಥಿ ಸಮೂಹವನ್ನು ಸೇರಿಸಿ ಇದಕ್ಕೆ ತಕ್ಕ ಉತ್ತರವನ್ನು ಮುಂದಿನ ದಿನಗಳಲ್ಲಿ ನೀಡಲಿದ್ದೇವೆ ಎಂದು ತಿಳಿಸಿದರು.
ಜಿಲ್ಲಾ ನಾಯಕಿ ಗೌಸಿಯಾ ಮಾತನಾಡಿ, ಜಿಲ್ಲೆಯಲ್ಲಿ ಆಗಾಗ ಶಾಂತಿಯನ್ನು ಕದಡುವ ಘಟನೆಗಳು ನಡೆಯುತ್ತಿವೆ. ಇಂದು ಜಿಲ್ಲೆಯ ವಿದ್ಯಾರ್ಥಿ ಗಳು ಭಯದಿಂದ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಮಂಗಳೂರು ಜಿಲ್ಲಾಧ್ಯಕ್ಷ ಸರಫುದ್ದೀನ್, ಕಾರ್ಯದರ್ಶಿ ಮುನೀರ್ ಬಜಾಲ್ , ಅಶ್ರಫ್ ಪೊರ್ಕೊಡಿ, ಮುಖಂಡರಾದ ರಿಯಾಝ್ ಅಂಕತ್ತಡ್ಕ, ಫಯಾಝ್ ವಿಟ್ಲ, ಐಮಾನ್ ಬಂಟ್ವಾಳ, ಅಫ್ರಾ ಮತ್ತಿತರರು ಉಪಸ್ಥಿತರಿದ್ದರು.