ಆರೋಪಿಗಳನ್ನು ಕಠಿಣ ಕಾಯ್ದೆಯಡಿ ಮರು ಬಂಧನ ಮಾಡದಿದ್ದಲ್ಲಿ ನಾಳೆ ಕಾಂಗ್ರೆಸ್ ನಿಂದ ಪ್ರತಿಭಟನೆ: ಹರೀಶ್ ಕುಮಾರ್
ಮಂಗಳೂರು, ಸೆ.29:ದ.ಕ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಸುರತ್ಕಲ್ ಘಟನೆಯಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದವರ ಮೇಲೆ ಕಠಿಣ ಕಾಯ್ದೆಯಡಿ ಪ್ರಕಾರ ಪ್ರಕರಣ ದಾಖಲಿಸಿ ಮರು ಬಂಧನ ಮಾಡದಿದ್ದರೆ ಕಾಂಗ್ರೆಸ್ ವತಿಯಿಂದ ಸೆ.30ರಂದು 3 ಗಂಟೆಗೆ ಸುರತ್ಕಲ್ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಸುರತ್ಕಲ್ ಎನ್ ಐಟಿಕೆಯ ಎದುರು ಪೊಲೀಸರ ಸಮ್ಮುಖದಲ್ಲಿಯೇ ವಿದ್ಯಾರ್ಥಿ ಗಳ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ ಬಳಿಕ ಪೊಲೀಸರು ಅವರ ಮೇಲೆ ಸ್ವಯಂಪ್ರೇರಿತರಾಗಿ ಕಠಿಣ ಕಾನೂನು ಕ್ರಮ (ಐಪಿಸಿ ಅಡಿಯಲ್ಲಿ) ಕೈಗೊಂಡು ಪ್ರಕರಣ ದಾಖಲಿಸಿ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಜೈಲಿಗಟ್ಟುವ ಕೆಲಸ ಮಾಡಬೇಕಿತ್ತು. ಆದರೆ ಪೊಲೀಸರು ಆರೋಪಿಗಳನ್ನು ಬಂಧಿಸಿ ತಕ್ಷಣ ಬಿಡುಗಡೆ ಮಾಡಿರುವುದು ಸರಿಯಾದ ಕ್ರಮವಲ್ಲ. ಈ ಹಿಂದೆ ಈ ರೀತಿಯ ಕೃತ್ಯದಲ್ಲಿ ತೊಡಗಿದವರು ಕಠಿಣ ಕಾನೂನು ಕ್ರಮಕ್ಕೆ ಒಳಪಟ್ಟು ಜೈಲು ಸೇರಿದ ಉದಾಹರಣೆ ಇದೆ. ಆದರೆ ಪೊಲೀಸರ ಎದುರು ದಾಂಧಲೆ ನಡೆದಾಗಲೂ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳದೆ ಇರುವುದು ಕಾನೂನು ಸುವ್ಯವಸ್ಥೆ ಕುಸಿದಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
*ರಾಷ್ಟ್ರೀಯ ಶಿಕ್ಷಣ ನೀತಿ ಸಂವಿಧಾನದ ಆಶಯಕ್ಕೆ ವಿರುದ್ಧ ವಾಗಿದೆ. ಅದು ಸಂಘ ಪರಿವಾರದ ಆದೇಶದ ಪಾಲನೆಯಂತೆ ಇದೆ. ಹೊಸ ಶಿಕ್ಷಣ ನೀತಿ ಬಗ್ಗೆ ರಚಿಸಲಾದ ತಜ್ಞರ ಕಸ್ತೂರಿ ರಂಗನ್ ಸಮಿತಿಯಲ್ಲಿ ಆರೆಸ್ಸೆಸ್ ಪ್ರಚಾರಕ ಎಂ.ಕೆ.ಶ್ರೀಧರ್, ಭ್ರಷ್ಟಾಚಾರದ ಆರೋಪದಲ್ಲಿ ವಜಾಗೊಂಡಿರುವ ವ್ಯಕ್ತಿ ರಾಜೇಂದ್ರ ಪ್ರತಾಪ್ ಗುಪ್ತ ಮೊದಲಾದವರು ಇದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಚರ್ಚೆ ನಡೆದಿಲ್ಲ. ಆದರೆ ಸಂಘ ಪರಿವಾರದ ಅಂಗ ಸಂಸ್ಥೆಗಳಲ್ಲಿ ಚರ್ಚೆ ನಡೆದಿದೆ. ಇದನ್ನು ಗಮನಿಸಿದಾಗ ಈ ದೇಶ ಜನರಿಂದ ಆಯ್ಕೆಗೊಂಡ ಪ್ರತಿನಿಧಿಗಳ ಸರಕಾರದಿಂದ ನಡೆಯುತ್ತಿದೆಯೇ ? ಅಥವಾ ಆರೆಸ್ಸೆಸ್ ನಿಂದ ನಡೆಯುತ್ತಿದೆಯೇ ಎಂಬ ಪ್ರಶ್ನೆ ಮೂಡುತ್ತದೆ. ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದ, ಸಂವಿಧಾನದ ಆಶಯವನ್ನು ಪರಿಗಣಿಸದೆ ಇರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಪುನರ್ ಪರಿಶೀಲನೆ ನಡೆಯಬೇಕು ಎಂದು ಹರೀಶ್ ಕುಮಾರ್ ಆಗ್ರಹಿಸಿದ್ದಾರೆ.
*ಕಾರ್ಮಿಕ ಇಲಾಖೆಯ ಮೂಲಕ ಕಾರ್ಮಿಕರಿಗೆ ವಿತರಿದಲಾದ ಕಿಟ್ ಗಳಲ್ಲಿ ದೊಡ್ಡ ಪ್ರಮಾಣದ ಅವ್ಯವಹಾರ ನಡೆದಿದೆ ಎಂದು ಹರೀಶ್ ಕುಮಾರ್ ಆರೋಪಿಸಿದ್ದಾರೆ.
ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಆಹಾರ ಸಾಮಾಗ್ರಿಗಳನ್ನು ಖರೀದಿಸಿರುವಂತೆ ದಾಖಲೆ ತೋರಿಸಿ ಅವ್ಯವಹಾರ ನಡೆದಿದೆ. ಈ ಬಗ್ಗೆ ತನಿಖೆ ನಡೆಯ ಬೇಕು ಎಂದು ಅವರು ಆಗ್ರಹಿಸಿದ್ದಾರೆ.
ನಮ್ಮ ನಾಯಕ ಸಿದ್ಧರಾಮಯ್ಯ ನೇರವಾಗಿ ಮಾತನಾಡುತ್ತಿದ್ದಾರೆ. ಅದನ್ನು ಎದುರಿಸಲಾಗದೆ ಬಿಜೆಪಿ ರಾಜಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿಕೆ ನೀಡುತ್ತಿದ್ದಾರೆ. ನಳಿನ್ ಕುಮಾರ್ ಮೊದಲು ಎತ್ತಿ ನ ಹೊಳೆಯ ಬಗ್ಗೆ ತಮ್ಮ ನಿಲುವನ್ನ ಪ್ರಕಟಿಸಲಿ ಎಂದು ಹರೀಶ್ ಕುಮಾರ್ ಒತ್ತಾಯಿಸಿದರು
ಸುದ್ದಿಗೋಷ್ಢಿಯಲ್ಲಿ ಕಾಂಗ್ರೆಸ್ ಮುಖಂಡರಾ ದ ಶಶಿಧರ ಹೆಗ್ಡೆ, ಶಾಹುಲ್ ಹಮೀದ್, ನವೀನ್ ಡಿಸೋಜ, ಪ್ರಕಾಶ್ ಸಾಲ್ಯಾನ್, ಶುಭೋದಯ ಆಳ್ವ, ನೀರಜ್ ಪಾಲ್, ಟಿ.ಕೆ.ಸುಧೀರ್, ಆರಿಫ್ ಬಾವ, ಗಣೇಶ್ ಪೂಜಾರಿ ಮೊದಲಾದವರುನ ಉಪಸ್ಥಿತರಿದ್ದರು.