×
Ad

ಹಿರಿಯ ಸಾರಿಗೆ ಉದ್ಯಮಿ ರಬೀಂದ್ರ ನಾಯಕ್ ನಿಧನ

Update: 2021-10-02 18:36 IST

ಉಡುಪಿ, ಅ.2: ಜಿಲ್ಲೆಯ ಹಿರಿಯ ಸಾರಿಗೆ ಉದ್ಯಮಿ ಹಾಗೂ ಸಮಾಜ ಸೇವಕರಾಗಿದ್ದ ಪಾಂಗಾಳ ರಬೀಂದ್ರ ನಾಯಕ್ (99) ಇಂದು ಮುಂಜಾನೆ ನಿಧನರಾಗಿದ್ದಾರೆ. ಕೆಲಕಾಲದಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮುಂಜಾನೆ ಸ್ವಗೃಹದಲ್ಲಿ ನಿಧನ ರಾದರು. ಅವರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

1922ರ ಫೆ.9ರಂದು ಉಡುಪಿಯಲ್ಲಿ ಜನಸಿದ್ದ ಪಾಂಗಾಳ ರಬೀಂದ್ರ ನಾಯಕ್, ಮುಂಬಯಿ ವಿವಿಯಿಂದ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ಕೆಲಕಾಲ ಹೊಸದಿಲ್ಲಿಯಲ್ಲಿ ಲ್ಯಾಬ್ ಟೆಕ್ನಾಲಜಿಸ್ಟ್ ಆಗಿ ಅಲ್ಲದೇ ಇಂಡಿಯನ್ ನೇವಿಯಲ್ಲೂ ಸೇವೆ ಸಲ್ಲಿಸಿದ್ದರು.

1950ರ ಪ್ರಾರಂಭದಲ್ಲಿ ಹುಟ್ಟೂರಿಗೆ ಮರಳಿ ಬಂದ ಅವರು ಜಿಲ್ಲೆಯ ಪ್ರಥಮ ಸಾರಿಗೆ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು. ಕರಾವಳಿ ಭಾಗದಲ್ಲಿ ಗಜಾನನ ಹಾಗೂ ಹನುಮಾನ್ ಟ್ರಾನ್ಸ್ಪೋರ್ಟ್ ಎಂಬ ಎರಡು ಸಂಸ್ಥೆಗಳನ್ನು ಮುನ್ನಡೆಸಿ ಕರಾವಳಿಯ ಸಾರಿಗೆ ಉದ್ಯಮಕ್ಕೆ ಹೊಸ ದಿಕ್ಕು ತೋರಿಸಿದ್ದರು.

ಹತ್ತು ಹಲವು ಸಾಮಾಜಿಕ ಸೇವಾ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ರಬೀಂದ್ರ ನಾಯಕ್, ಉಡುಪಿ ಜಿಲ್ಲಾಸ್ಪತ್ರೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ, ಜಿಲ್ಲಾಸ್ಪತ್ರೆಯ ಅಭಿವೃದ್ಧಿಗೆ ದೇಣಿಗೆಯನ್ನು ನೀಡಿದ್ದರಲ್ಲದೇ, ಅದು ಬಡಜನರ ಪಾಲಿಗೆ ಅತ್ಯುತ್ತಮ ಸೇವೆ ನೀಡುವಂತೆ ನೋಡಿಕೊಂಡಿದ್ದರು. ಅಲ್ಲದೇ ಅವರು ಉಡುಪಿಯ ಹಿರಿಯ ನಾಗರಿಕರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ರಬೀಂದ್ರ ನಾಯಕ್ ಅವರ ನಿಧನಕ್ಕೆ ಶಾಸಕ ಕೆ.ರಘುಪತಿ ಭಟ್, ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥರು, ಪರ್ಯಾಯ ಅದಮಾರು ಮಠದ ಹಿರಿಯ ಯತಿಗಳಾದ ಶ್ರೀವಿಶ್ವಪ್ರಿಯ ತೀರ್ಥರು, ಪರ್ಯಾಯ ಪೀಠಾಧಿಶರಾದ ಶ್ರೀಈಶಪ್ರಿಯ ತೀರ್ಥರು, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News