×
Ad

ಬ್ಯಾಂಕ್‌ಗಳು ಗ್ರಾಹಕರಿಗೆ ನಿಖರ ಮಾಹಿತಿ ನೀಡಬೇಕು: ಡಾ.ನವೀನ್ ಭಟ್

Update: 2021-10-07 22:26 IST

ಉಡುಪಿ, ಅ.7: ವಾಣಿಜ್ಯ ಬ್ಯಾಂಕ್‌ಗಳಲ್ಲಿ ನಾಗರಿಕರು, ಗ್ರಾಹಕರು ವ್ಯವಹರಿಸಲು ಬಂದಾಗ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಿಗುವ ಸೌಲಭ್ಯಗಳ ನಿಖರ ಮಾಹಿತಿಗಳನ್ನು ಅವರಿಗೆ ಒದಗಿಸುವುದರೊಂದಿಗೆ ಗರಿಷ್ಠ ಸೇವೆಯನ್ನು ನೀಡಬೇಕು ಎಂದು ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ವೈ. ಹೇಳಿದ್ದಾರೆ.

ಗುರುವಾರ ಮಣಿಪಾಲದಲ್ಲಿರುವ ಜಿಪಂ ಸಭಾಂಗಮದಲ್ಲಿ ನಡೆದ ಲೀಡ್ ಬ್ಯಾಂಕ್‌ನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದರು.

ಸಾರ್ವಜನಿಕರು ಬ್ಯಾಂಕ್‌ಗಳಲ್ಲಿ ವ್ಯವಹರಿಸಲು ಬಂದಾಗ ಬ್ಯಾಂಕಿಂಗ್ ಕಾರ್ಯವ್ಯಾಪ್ತಿಯಲ್ಲಿ ಬರುವ ಸೌಲಭ್ಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅವರಿಗೆ ಒದಗಿಸಿ. ಬ್ಯಾಂಕಿಂಗ್ ಕ್ಷೇತ್ರದ ಸೇವೆಗಳ ಬಗ್ಗೆ ಅವರು ವಿಶ್ವಾಸ ಹೊಂದುವಂತೆ ಮಾಡಿ, ಗರಿಷ್ಠ ಆರ್ಥಿಕ ಚಟುವಟಿಕೆಯನ್ನು ಬ್ಯಾಂಕ್‌ಗಳ ಮೂಲಕ ನಿರ್ವಹಿಸುವಂತೆ ಮಾಡುವ ಮೂಲಕ ತಮ್ಮ ಕಾರ್ಯವ್ಯಾಪ್ತಿಯನ್ನು ಹೆಚ್ಚಿಸಬೇಕು.ಬ್ಯಾಂಕ್‌ಗಳು ಜನಸಾಮಾನ್ಯರಿಗೆ ಸರಿಯಾದ ಸೇವಾ ಮಾಹಿತಿ ಗಳನ್ನು ಒದಗಿಸುತ್ತಿಲ್ಲ ಎಂಬ ದೂರುಗಳು ಸಹ ಕೇಳಿಬರುತ್ತಿವೆ. ಇದಕ್ಕೆ ಆಸ್ಪದ ನೀಡದೇ ಉತ್ತಮ ಸೇವೆಯನ್ನು ಒದಗಿಸಲು ಮುಂದಾಗಬೇಕು ಎಂದರು.

ಜಿಲ್ಲೆಯಲ್ಲಿ ಸಾಲ-ಠೇವಣಿ ಅನುಪಾತವು 2020 ಜೂನ್‌ನಲ್ಲಿ 45.27 ರಷ್ಟಿದ್ದು, ಪ್ರಸ್ತುತ 2021ರ ಜೂನ್‌ನಲ್ಲಿ ಶೇ.45.71ಆಗಿದೆ. ಈ ಅನುಪಾತ ಕನಿಷ್ಠ ಶೇ.60 ಇರಬೇಕು. ಈ ಅನುಪಾತ ನಿಗದಿತ ಗುರಿ ಸಾಧಿಸಬೇಕು. ಜಿಲ್ಲೆಯಲ್ಲಿ ಇದರ ಸುಧಾರಣೆ ಅಗತ್ಯವಿದೆ ಎಂದವರು ವಿವಿಧ ಬ್ಯಾಂಕ್ ಗಳ ಪ್ರತಿನಿಧಿಗಳಿಗೆ ತಿಳಿಸಿದರು.

ಜಿಲ್ಲೆಯಲ್ಲಿ 2016-17 ಹಾಗೂ 2018-19ನೇ ಸಾಲಿನ ಅಡಿಕೆ ಮತ್ತು ಕಾಳುಮೆಣಸಿನ ಹವಾಮಾನ ಆಧಾರಿತ ಬೆಳೆಯ ಸಮೀಕ್ಷೆ ಹೊಂದಾಣಿಕೆ ಯಾಗದೇ ಇರುವ ಪ್ರಕರಣಗಳಲ್ಲಿ ಬೆಳೆ ಸಾಲ ಪಡೆದ ರೈತರಿಗೆ ವಿಮಾ ಹಣ ದೊರಕಲು ಬ್ಯಾಂಕ್ ವತಿಯಿಂದ ಕ್ಷೇತ್ರ ಪರಿಶೀಲನೆ ನಡೆಸಿ, ವಿಮಾ ಕಂಪೆನಿ ಗಳಿಗೆ ಸೂಕ್ತ ದಾಖಲೆಗಳನ್ನು ಸಲ್ಲಿಸುವ ಕಾರ್ಯವನ್ನು ಕೈಗೊಳ್ಳಲು ಕಳೆದ 2 ಸಭೆಗಳಲ್ಲಿ ಸೂಚನೆ ನೀಡಿದ್ದರೂ ಅದನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳದ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಪತ್ರ ಬರೆಯುವ ಸೂಚನೆ ನೀಡಿದರು.

ಸರಕಾರದ ವಿವಿಧ ಸಹಾಯಧನ ಆಧಾರಿತ ಅರ್ಥಿಕ ಸಹಾಯವನ್ನು ಒದಗಿಸಲು ಅರ್ಜಿಗಳನ್ನು ಶಿಫಾರಸ್ಸು ಮಾಡಿ ಬ್ಯಾಂಕ್‌ಗಳಿಗೆ ಕಳುಹಿಸಿ ದಾಗ ಸಕಾರಣವಿಲ್ಲದೇ ಅರ್ಜಿಗಳನ್ನು ತಿರಸ್ಕೃರಿಸದೇ ನಿಗದಿತ ಕಾಲಾವಧಿಯಲ್ಲಿ ಅವರಿಗೆ ಸೌಲಭ್ಯ ಒದಗಿಸುವಂತೆ ಸಿಇಓ ಬ್ಯಾಂಕ್‌ಗಳಿಗೆ ಸೂಚಿಸಿದರು.

ಆರ್‌ಬಿಐ ಬೆಂಗಳೂರಿನ ಎಜಿಎಂ ವೆಂಕಟೇಶ್ ಮಾತನಾಡಿ, 2000ಕ್ಕೂ ಹೆಚ್ಚು ಜನಸಂಖ್ಯೆ ಇರುವ ಗ್ರಾಮಗಳಿಗೆ ಬ್ಯಾಂಕಿಂಗ್ ಸರ್ವಿಸ್‌ಗಳನ್ನು ಒದಗಿಸ ಬೇಕು. ಬ್ಯಾಂಕಿಂಗ್ ವ್ಯವಹಾರಗಳು ಮುಂದಿನ ದಿನಗಳಲ್ಲಿ ಶೇ.100 ರಷ್ಠು ಡಿಜಿಟಲೀಕರಣವಾಗಬೇಕು , ಎಟಿಎಂಗಳಲ್ಲಿ ದಿನದ 24 ಗಂಟೆಯೂ ಹಣದ ಸೌಲಭ್ಯ ದೊರೆಯುವಂತೆ ಇರಬೇಕು, ಸಕಾರಣಲ್ಲದೇ ಎಟಿಎಂಗಳು ಕಾರ್ಯ ನಿರ್ವಹಿಸದೇ ಇದ್ದಲ್ಲಿ ಅಂತಹವುಗಳಿಗೆ ದಂಡ ವಿಧಿಸಲಾಗುವುದು ಎಂದರು.

ಲೀಡ್ ಬ್ಯಾಂಕ್ ಮೆನೇಜರ್ ಪಿ.ಎಂ.ಪಿಂಜಾರ್ ಮಾತನಾಡಿ, ಉಡುಪಿ ಜಿಲ್ಲೆಯ ವಿವಿಧ ಬ್ಯಾಂಕ್‌ಗಳಲ್ಲಿ 28,976 ಕೋಟಿ ರೂ. ಠೇವಣಿ ಇರುವುದರೊಂದಿಗೆ ಶೇ.12.87ರಷ್ಠು ಪ್ರಗತಿಯಾಗಿದೆ. 13,247 ಕೋಟಿ ರೂ ಹಣವನ್ನು ಸಾಲದ ರೂಪದಲ್ಲಿ ನೀಡಲಾಗಿದ್ದು, ಇದರ ಬೆಳವಣಿಗೆ ಶೇ.9.14 ರಷ್ಟಿದೆ ಎಂದರು.

ಪ್ರಸ್ತುತ ಸಾಲಿನ ಪ್ರಥಮ ತ್ರೈಮಾಸಿಕದ ಕೊನೆಯ ಭಾಗದಲ್ಲಿ 2290 ಕೋಟಿ ರೂ ಗಳಷ್ಟು ಸಾಲ ನೀಡುವ ಗುರಿ ಇದ್ದು, 2252 ಕೋಟಿ ರೂ ಗಳಷ್ಟು ಸಾಲ ನೀಡಿ ಶೇ.98.34 ರಷ್ಟು ಸಾಧನೆ ಮಾಡಲಾಗಿದೆ. ಕೃಷಿ ವಲಯಕ್ಕೆ 757 ಕೋಟಿ, ಸೂಕ್ಷ, ಸಣ್ಣ ಹಾಗೂ ಮಧ್ಯಮ ವಲಯಗಳಿಗೆ 351 ಕೋಟಿ, ವಿದ್ಯಾಭ್ಯಾಸಕ್ಕೆ 6 ಕೋಟ, ಗೃಹ ಸಾಲ 61 ಕೋಟಿ ಸೇರಿ ಆದ್ಯತಾ ವಲಯಕ್ಕೆ 1196 ಕೋಟಿ, ಹಾಗೂ ಆದ್ಯತೇತರ ವಲಯಕ್ಕೆ 517 ಕೋಟಿ ಸಾಲ ನೀಡಲಾಗಿದೆ ಎಂದರು.

ಸಭೆಯಲ್ಲಿ ಉಡುಪಿ ಪ್ರಾದೇಶಿಕ ಕಚೇರಿ ಪ್ರಬಂಧಕ ಕೆ.ಕಾಳಿ, ನಬಾರ್ಡ್ ಎಜಿಎಂ ಸಂಗೀತಾ ಕರ್ತ ಮತ್ತು ಕೆನರಾ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಡಾ.ವಾಸಪ್ಪ, ಆರ್‌ಎಂ ಲೀನಾ ಪೀಟರ್ ಪಿಂಟೊ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News