ಮಂಗಳೂರು: ಕ್ಷುಲ್ಲಕ ಕಾರಣಕ್ಕೆ ಇಬ್ಬರು ಸಹೋದರರಿಗೆ ತಂಡದಿಂದ ಮಾರಣಾಂತಿಕ ಹಲ್ಲೆ

Update: 2021-10-09 18:00 GMT
ಸಾಂದರ್ಭಿಕ ಚಿತ್ರ

ಮಂಗಳೂರು: ಕ್ಷುಲ್ಲಕ ಕಾರಣಕ್ಕೆ ಇಬ್ಬರು ಸಹೋದರ ಮೇಲೆ 20ಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ದುಷ್ಕರ್ಮಿಗಳ ತಂಡ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಘಟನೆ ಕಾವೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಸಂಜೆ ನಡೆದಿದೆ.

ಅಝೀಮ್, ಆಶಿಕ್ ದುಷ್ಕರ್ಮಿಗಳಿಂದ ಗಾಯಗೊಂಡವರು. ಗಾಯಾಳುಗಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಚಾರವೊಂದಕ್ಕೆ ಸಂಬಂಧಪಟ್ಟಂತೆ ಅಝೀಮ್‌ಗೆ ಯುವಕನೋರ್ವ ಅವಾಚ್ಯ ಶಬ್ದಗಳಿಂದ ನಿಂದಿಸಿ ನಂತರ ಧೈರ್ಯವಿದ್ದರೆ ಗುಡ್ಡೆ ಮೈದಾನದ ಬಳಿ ಬರುವಂತೆ ಸವಾಲನ್ನೂ ಹಾಕಿದ್ದ ಎನ್ನಲಾಗಿದೆ.

ನಡೆದ ಸಂಗತಿಯನ್ನು ಅಝೀಮ್ ತನ್ನ ಸಹೋದರ ಆಶಿಕ್‌ಗೆ ತಿಳಿಸಿದ್ದಾನೆ. ಆಶಿಕ್ ಸಹೋದರನನ್ನು ಕರೆದುಕೊಂಡು ಗುಡ್ಡೆ ಮೈದಾನದ ಬಳಿ ತೆರಳಿದಾಗ 20ಕ್ಕೂ ಅಧಿಕ ಮಂದಿಯ ತಂಡ ದೊಣ್ಣೆ, ಕಲ್ಲು, ಹೆಲ್ಮೆಟ್‌ಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದೆ ಎಂದು ತಿಳಿದುಬಂದಿದೆ.

ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ಅವರಿಬ್ಬರನ್ನೂ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ. ಈ ಬಗ್ಗೆ ಯಾವುದೇ ಮಾಹಿತಿ ಠಾಣೆಗೆ ಬಂದಿಲ್ಲ ಎಂದು ಕಾವೂರು ಠಾಣೆ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News