ಕರಾವಳಿಯಲ್ಲಿ ಸಹೋದರತೆ ಬೆಳೆಸಿ ಶಾಂತಿ ಕಾಪಾಡೋಣ: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ
ಮಂಗಳೂರು, ಅ.13: ಇತ್ತೀಚಿನ ದಿನಗಳಲ್ಲಿ ದ.ಕ. ಜಿಲ್ಲೆಯಲ್ಲಿ ಸೌಹಾರ್ದತೆಯನ್ನು ಕದಡುವಂತಹ ಕೆಲವು ಪ್ರಸಂಗಗಳು ನಡೆಯುತ್ತಲೇ ಇರುವುದು ಬಹಳ ದುರದೃಷ್ಟಕರವಾಗಿದೆ, ಇಂತಹ ಶಾಂತಿಭಂಗಕ್ಕಾಗಿ ದುಷ್ಪ್ರೇರಣೆ ನೀಡುವಂತಹ ಯಾವುದೇ ಜನಗಳ ಕರೆಗಳಿದ್ದರೂ ಇಲ್ಲಿನ ದ.ಕ. ಜಿಲ್ಲಾ ಪೊಲೀಸ್ ಇಲಾಖೆ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಲ್ಲದೆ ಇದರ ಹಿನ್ನೆಲೆಯಲ್ಲಿರುವ ಶಕ್ತಿಗಳನ್ನೂ ಕಂಡುಹಿಡಿದು ಕ್ರಮ ಕೈಗೊಳ್ಳಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಜಿಲ್ಲಾಧ್ಯಕ್ಷ ಸರ್ಪರಾಜ್ ಅಡ್ವಕೇಟ್ ಹೇಳಿದರು.
ಇವೆಲ್ಲವುಗಳ ಹಿಂದೆ ರಾಜಕೀಯ ಷಡ್ಯಂತ್ರ ಇರುವುದನ್ನು ನಮ್ಮ ನಾಡಿನ ಪ್ರಜ್ಞಾವಂತ ಜನಗಳು ಅರ್ಥಯಿಸಬೇಕಾಗಿದೆ, ಕೆಲವು ಸ್ಥಳೀಯ ಚುನಾವಣೆಗಳು ಹತ್ತಿರ ಬರಬೇಕಾದರೆ ಇವೆಲ್ಲವೂ ಬಹಳ ವ್ಯವಸ್ಥಿತ ಸಂಚಿನ ಮೂಲಕವೇ ನಡೆಯುತ್ತದೆ. ಅದೇನಿದ್ದರೂ ಇದು ಹೀಗೆ ಮುಂದುವರಿದರೆ ಎಲ್ಲಾ ಪ್ರಹಸನಗಳ ಕೊನೆಗೆ ಅದಾವುದೋ ಕುಟುಂಬದ ಆಧಾರ ಸ್ಥಂಬವಾಗಿರುವ ಜನ ಸಾಮಾನ್ಯನಾದ ಅಮಾಯಕನೊಬ್ಬ ಬಲಿಪಶುವಾಗುತ್ತಾನೆ, ಆತನ ತಾಯಿ ಮಗನನ್ನು ಕಳೆದು ರೋಧಿಸುವುದನ್ನು ಮತ್ತು ಮಕ್ಕಳು ಅನಾಥರಾಗುವ ಸನ್ನಿವೇಶವನ್ನು ನೆನೆಸಿಕೊಂಡಾದರೂ, ಇದರ ಪ್ರಾಯೋಜಕರು ಇದನ್ನು ಕೊನೆಗಾಣಿಸಬೇಕು, ಅದೇ ರೀತಿಯಲ್ಲಿ ಕೆಲವು ನಿರ್ದಿಷ್ಟ ಪಕ್ಷದ ಜನಪ್ರತಿನಿಧಿಗಳು ಇವುಗಳ ಹಿಂದೆ ರಾಜಕೀಯ ಬೇಳೆ ಬೇಯಿಸುವ ಕಾಯಕವನ್ನು ಮಾಡುತ್ತಾರೆ ಎಂಬಂತಹ, ಮಾತುಗಳು ಕೇಳಿ ಬರುತ್ತಿದ್ದವು, ಅಷ್ಟೊಂದು ಆರೋಪಗಳಲ್ಲಿ ಸತ್ಯಾಂಶ ಇದೆಯೆಂದರೆ, ಒಬ್ಬ ಜನಪ್ರತಿನಿಧಿ ಎಂಬ ನೆಲೆಯಲ್ಲಿ ಅವರಿಗೆ ಅದು ಭೂಷಣವಲ್ಲವೆಂಬುವುದನ್ನರಿತು ಅವರ ದ್ವಂದ್ವ ನಿಲುವಿನ ಇಬ್ಬಗೆಯ ನೀತಿಯನ್ನು ಕೈ ಬಿಟ್ಟು, ಜನಪ್ರತಿನಿಧಿಗಳೆಂಬ ನೆಲೆಯಲ್ಲಿ ಸರ್ವರಿಗೂ ಸಮಾನ ನ್ಯಾಯ ನೀತಿಯನ್ನವರು ಪಾಲಿಸಬೇಕಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದರು.