×
Ad

ಬಡಗುತಿಟ್ಟಿನ ಹಿರಿಯ ವೇಷಧಾರಿ ಅನಂತ ಕುಲಾಲ ನಿಧನ

Update: 2021-10-13 13:37 IST

ಉಡುಪಿ : ಬಡಗುತಿಟ್ಟಿನ ಹಿರಿಯ ವೇಷಧಾರಿ ಅನಂತ ಕುಲಾಲ (66) ಅವರು ಮಂಗಳವಾರ ತಡರಾತ್ರಿ ಕುಂದಾಪುರ ತಾಲೂಕಿನ ಮೊಳಹಳ್ಳಿಯಲ್ಲಿ ನಿಧನ ಹೊಂದಿದರು.

ಇವರು ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಗುರು ವೀರಭದ್ರ ನಾಯಕರಲ್ಲಿ ಯಕ್ಷಗಾನ ಕುಣಿತ ಆಭ್ಯಾಸ ಮಾಡಿ, ಹಳ್ಳಾಡಿ ಮಂಜಯ್ಯ ಶೆಟ್ಟಿ ಮತ್ತು ಹಳ್ಳಾಡಿ ಕೃಷ್ಣರಲ್ಲಿ ಮಾತುಗಾರಿಕೆ, ರಂಗತಂತ್ರ ಕಲಿತು ಪ್ರೌಢ ಪುರುಷ ವೇಷಧಾರಿಯಾಗಿ ರೂಪುಗೊಂಡರು.

ಅಮೃತೇಶ್ವರೀ, ಹಿರಿಯಡಕ, ಸಾಲಿಗ್ರಾಮ, ಪೆರ್ಡೂರು, ಹಾಲಾಡಿ, ಮಾರಣಕಟ್ಟೆ ಮೇಳಗಳಲ್ಲಿ ಸುಮಾರು ಐದು ದಶಕಗಳ ಕಾಲ ವೈವಿಧ್ಯಮಯ ವೇಷಗಳನ್ನು ಮಾಡುತ್ತಾ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. ಕೇವಲ ಮಾರಣಕಟ್ಟೆ ಮೇಳವೊಂದರಲ್ಲಿ ನಾಲ್ಕು ದಶಕಗಳ ಕಾಲ ಕಲಾಸೇವೆಗೈದಿದ್ದರು. ಕಳೆದ ವರ್ಷ ಯಕ್ಷಗಾನ ಕಲಾರಂಗವು ಡಾ. ಬಿ. ಬಿ. ಶೆಟ್ಟಿ ಸ್ಮರಣಾರ್ಥ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ ನೀಡಿ ಅವರನ್ನು ಸಮ್ಮಾನಿಸಿತ್ತು.

ಕಳೆದ ತಿಂಗಳು ಎಮ್. ಎಮ್. ಹೆಗಡೆ ಪ್ರಶಸ್ತಿಯನ್ನು ಪಿ. ಕಿಶನ್ ಹೆಗ್ಡೆಯವರ ನೇತೃತ್ವದಲ್ಲಿ ಅವರ ಮನೆಯಲ್ಲೆ ನೀಡಿ ಗೌರವಿಸಲಾಗಿತ್ತು.  ಇವರು ಪತ್ನಿ, ನಾಲ್ವರು ಪುತ್ರರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಅವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಮ್. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಗಾಢ ಸಂತಾಪ ವ್ಯಕ್ತ ಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News