×
Ad

ಮಂಗಳೂರು; ಹತ್ರಾಸ್ ನಲ್ಲಿ ಬಂಧಿತರ ಬಿಡುಗಡೆಗೆ ಒತ್ತಾಯಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಪ್ರತಿಭಟನೆ

Update: 2021-10-13 14:05 IST

ಮಂಗಳೂರು, ಅ.13: ವ್ಯವಸ್ಥಿತ ಪಿತೂರಿಯ ಮೂಲಕ ವರ್ಷದ ಹಿಂದೆ ನಾಲ್ವರು ವಿದ್ಯಾರ್ಥಿ ನಾಯಕರನ್ನು ಹತ್ರಾಸ್‌ನಲ್ಲಿ ಅಕ್ರಮವಾಗಿ ಬಂಧಿಸಿದ ಉತ್ತರ ಪ್ರದೇಶ ಸರಕಾರದ ಕೃತ್ಯವನ್ನು ಖಂಡಿಸಿ ಮತ್ತು ಎಲ್ಲರನ್ನೂ ತಕ್ಷಣ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ನೇತೃತ್ವದಲ್ಲಿ ವಿದ್ಯಾರ್ಥಿಗಳು ಬುಧವಾರ ನಗರದಲ್ಲಿ ರ್‍ಯಾಲಿ ನಡೆಸಿ ಪ್ರತಿಭಟಿಸಿದರು.

ನಗರದ ಕ್ಲಾಕ್‌ ಟವರ್‌ನಿಂದ ಡಿಸಿ ಕಚೇರಿಯವರೆಗೆ ರ್‍ಯಾಲಿ ನಡೆಸಿದಾಗ ಪೊಲೀಸರು ತಡೆಯುವ ಪ್ರಯತ್ನ ನಡೆಸಿದರು. ಆದಾಗ್ಯೂ ರ್‍ಯಾಲಿ ಮುಂದುವರಿಸಿದ ವಿದ್ಯಾರ್ಥಿಗಳು ಡಿಸಿ ಕಚೇರಿಯ ಮುಂದೆ ಪ್ರತಿಭಟಿಸಿ ಉತ್ತರ ಪ್ರದೇಶದ ಸರಕಾರದ ವಿರುದ್ಧ ಆಕ್ರೋಶ ವ್ಯಕಪಡಿಸಿದರು.

ಸಿಎಫ್‌ಐ ರಾಜ್ಯಾಧ್ಯಕ್ಷ ಅಥಾವುಲ್ಲ ಪುಂಜಾಲಕಟ್ಟೆ ಮಾತನಾಡಿ ವಿದ್ಯಾರ್ಥಿ ನಾಯಕರ ಬಂಧನದ ಮೂಲಕ ಸಿಎಫ್‌ಐ ಸಂಘಟನೆಯ ಹೋರಾಟವನ್ನು ಹತ್ತಿಕ್ಕಬಹುದು ಎಂದು ಸರಕಾರಗಳು ಬಯಸುತ್ತಿದೆ ಎಂದಾದರೆ ಅದು ಮೂರ್ಖತನದ ಪರಮಾವಧಿಯಾಗಿದೆ. ಪೊಲೀಸರ ಕೇಸು, ಜೈಲು ಹಾಗೂ ಲಾಠಿಗಳನ್ನು ನಿರೀಕ್ಷಿಸೆಯೆ ವಿದ್ಯಾರ್ಥಿಗಳು ಚಳುವಳಿಯಲ್ಲಿ ಸೇರಿಕೊಂಡಿದ್ದಾರೆ. ಬಂಧಿಸಿ ಜೈಲುಗಳಲ್ಲಿಟ್ಟರೆ ಹೇಡಿ ಸಾವರ್ಕರ್‌ನಂತೆ ಕ್ಷಮಾಪಣೆ ಕೇಳಿಕೊಂಡು ಶರಣಾಗುವವರು ನಾವಲ್ಲ. ನಮ್ಮನ್ನು ತಡೆದಷ್ಟೂ ನಮ್ಮ ವೇಗ ಹೆಚ್ಚಾಗಲಿದೆ ಎಂದರು.

ಅಲೋಶಿಯಸ್ ಕಾಲೇಜಿನ ಉದ್ಯಾನವನಕ್ಕೆ ಸ್ಟ್ಯಾನ್ ಸ್ವಾಮಿಯ ಹೆಸರಿಡಲು ಆಡಳಿತ ಮಂಡಳಿ ತೀರ್ಮಾನಿಸಿರುವುದು ಸ್ವಾಗತಾರ್ಹ ಎಂದು ಅಥಾವುಲ್ಲ ಪುಂಜಲಕಟ್ಟೆ ಹೇಳಿದರು.

ಪ್ರತಿಭಟನೆಯಲ್ಲಿ ರಾಜ್ಯ ಕೋಶಾಧಿಕಾರಿ ಸವಾದ್ ಕಲ್ಲರ್ಪೆ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಶ್ವಾನ್ ಸಾದಿಕ್, ಸಾದಿಕ್, ಫಹಾದ್ ಅನ್ವರ್, ಅಶ್ರಫ್, ಅಶ್ಪಾಕ್, ಅನ್ಸಾರ್, ಫಯಾಝ್, ಹಫೀಝ್, ರಿಝ್ವಾನ್ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News