×
Ad

ಕರಾವಳಿಯಲ್ಲಿ ಸಂಭ್ರಮದ ಆಯುಧ ಪೂಜೆ

Update: 2021-10-14 09:22 IST

ಮಂಗಳೂರು: ಕರಾವಳಿಯಲ್ಲಿಂದು ಸಂಭ್ರಮದ ಆಯುಧ ಪೂಜೆ ನಡೆಯುತ್ತಿದ್ದು, ನಗರ ಮತ್ತು ಹೊರವಲಯದ ಪೊಲೀಸ್ ಠಾಣೆ, ಗ್ಯಾರೇಜು, ಇಂಜಿನಿಯರಿಂಗ್ ವರ್ಕ್ಸ್ ಶಾಪ್, ಖಾಸಗಿ ಕಚೇರಿಗಳಲ್ಲಿ ಪೂಜೆ ಮಾಡಲಾಗುತ್ತಿದೆ.

ಇಂದು ಮುಂಜಾನೆಯೂ ಮಾರುಕಟ್ಟೆ, ಬೀದಿ ಬದಿಗಳಲ್ಲಿ ಪೂಜೆಗೆ ಸಂಬಂಧಿಸಿದಂತೆ ಹೂವು, ಹಣ್ಣು ಖರೀದಿಯ ಭರಾಟೆಯು ಕಾಣಿಸುತ್ತಿದೆ‌. ನಿನ್ನೆಯಿಂದ ಮಳೆ ಕಡಿಮೆಯಾದ ಕಾರಣ ಸೇವಂತಿಗೆ, ಮಲ್ಲಿಗೆ, ಗುಲಾಬಿ ಹೂಗಳು ಮತ್ತು ಲಿಂಬೆ ಹಣ್ಣು ವ್ಯಾಪಾರಿಗಳಿಗೆ ಭರ್ಜರಿ ವ್ಯಾಪಾರವಾಗಿದೆ. ತಂದು ಅಲ್ಲಲ್ಲಿ ರಾಶಿ ಹಾಕಿ ಮಾರಾಟ ಮಾಡುತ್ತಿದ್ದುದು ಕಂಡು ಬಂತು. ಕೆಲವರು ಬುಧವಾರ ಸಂಜೆ ಆಯುಧ ಪೂಜೆ ನಡೆಸಿದರೆ ಇನ್ನು ಕೆಲವರು ಇಂದು ಬೆಳಗ್ಗಿನಿಂದ ವಾಹನಗಳು, ಕಂಪ್ಯೂಟರ್ ಮತ್ತು ಆಯುಧ ಸಾಮಗ್ರಿಗಳಿಗೆ ಹೂವುಗಳಿಂದ ಅಲಂಕರಿಸಿ ಪೂಜೆ ಮಾಡುತ್ತಿದ್ದಾರೆ. ಇಂದು ಮುಂಜಾನೆಯಿಂದಲೇ ಸಾವಿರಾರು ಮಂದಿ ಭಕ್ತರು ದೇವಾಲಯಗಳಲ್ಲಿ ತಮ್ಮ ವಾಹನಗಳಿಗೆ ಪೂಜೆ ಮಾಡಿಸುತ್ತಿರುವುದು ಕಂಡು ಬಂದಿದೆ.

ಶುಕ್ರವಾರ ಕರಾವಳಿಯಾದ್ಯಂತ ವಿಜಯದಶಮಿ ಆಚರಿಸಲಾಗುತ್ತಿದೆ. ಅಲ್ಲದೆ ಶುಕ್ರವಾರ ಸಂಜೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನವದುರ್ಗೆಯರು, ಶಾರದೆ ಹಾಗು ಗಣಪತಿ ವಿಗ್ರಹಗಳಿಗೆ ಪೂಜೆ ನಡೆದು ದೇವಳದ ಸುತ್ತ ಪ್ರದಕ್ಷಿಣೆ ಹಾಕಿ ದೇವಳದ ಪುಷ್ಕರಿಣಿಯಲ್ಲಿ ವಿಸರ್ಜನೆ ನಡೆಯಲಿದೆ. ಕೊರೋನ ಹಿನ್ನೆಲೆಯಲ್ಲಿ ಈ ಬಾರಿಯೂ ವೈಭವದ ಶೋಭಾಯಾತ್ರೆ ನಡೆಸದಿರಲು ತೀರ್ಮಾನಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News