ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ:ಗಂಭೀರ ಗಾಯಗೊಂಡಿದ್ದ ಸೇನಾಧಿಕಾರಿ,ಯೋಧ ಹುತಾತ್ಮ
ಶ್ರೀನಗರ: ಜಮ್ಮು ಹಾಗೂ ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಗುರುವಾರ ತಡರಾತ್ರಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಗಂಭೀರ ಗಾಯಗೊಂಡಿದ್ದ ಸೇನಾಧಿಕಾರಿ ಹಾಗೂ ಓರ್ವ ಯೋಧ ಹುತಾತ್ಮರಾಗಿದ್ದಾರೆ.
ಪೂಂಚ್-ರಾಜೌರಿ ಅರಣ್ಯದಲ್ಲಿ ಐವರು ಸೇನಾ ಯೋಧರು ಹುತಾತ್ಮರಾದ ನಾಲ್ಕು ದಿನಗಳ ನಂತರ ಅದೇ ಪ್ರದೇಶದಲ್ಲಿ ಸೇನೆ ಹಾಗೂ ಭಯೋತ್ಪಾದಕರ ನಡುವೆ ಗುಂಡಿನ ಕಾಳಗ ನಡೆಯಿತು.
ಈಗ ನಡೆಯುತ್ತಿರುವ ಗುಂಡಿನ ಚಕಮಕಿ ಕಾರಣ ಜಮ್ಮು-ಪೂಂಚ್-ರಾಜೌರಿ ಹೆದ್ದಾರಿಯನ್ನು ಮುಚ್ಚಲಾಗಿದೆ.
ಅಕ್ಟೋಬರ್ 10 ರಂದು ತಡರಾತ್ರಿ ಭದ್ರತಾ ಸಿಬ್ಬಂದಿಯ ಮೇಲೆ ಗುಂಡಿನ ದಾಳಿ ನಡೆಸಿದ ಭಯೋತ್ಪಾದಕರ ಗುಂಪಿನೊಂದಿಗೆ ಎನ್ ಕೌಂಟರ್ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೂಂಚ್ ಜಿಲ್ಲೆಯ ಸುರಾನ್ ಕೋಟ್ ಪ್ರದೇಶದಲ್ಲಿ ಡೆರಾ ಕಿ ಗಾಲಿ ಪ್ರದೇಶದಲ್ಲಿ ನಡೆದಿದ್ದ ಗುಂಡಿನ ಚಕಮಕಿಯಲ್ಲಿ ಓರ್ವ ಸೇನಾಧಿಕಾರಿ ಹಾಗೂ ಇತರ ನಾಲ್ವರು ಯೋಧರು ಮೃತಪಟ್ಟಿದ್ದರು.
ಗುರುವಾರ ತಡರಾತ್ರಿ ನಡೆದ ಗುಂಡಿನ ಕಾಳಗದಲ್ಲಿ ಜೆಸಿಒ ಸಹಿತ ಇಬ್ಬರು ಯೋಧರು ಗಂಭೀರ ಗಾಯಗೊಂಡಿದ್ದಾರೆ ಎಂದು ಸೇನೆ ಗುರುವಾರ ರಾತ್ರಿ ತಿಳಿಸಿತ್ತು.