‘ಕೋಳ್ಯೂರು ವೈಭವ’ಕ್ಕೆ ಧರ್ಮಸ್ಥಳದಲ್ಲಿ ಚಾಲನೆ
ಉಡುಪಿ, ಅ.15: ಯಕ್ಷಗಾನ ಕ್ಷೇತ್ರದ ಶ್ರೇಷ್ಠ ಕಲಾಸಾಧಕರಾದ ಪ್ರಸಿದ್ಧ ಸ್ತ್ರೀ ವೇಷಧಾರಿ ಕೋಳ್ಯೂರು ರಾಮಚಂದ್ರ ರಾಯರಿಗೆ ತೊಂಭತ್ತು ವರ್ಷ ತುಂಬಿದ ಶುಭಾವಸರದಲ್ಲಿ ಉಡುಪಿಯ ಯಕ್ಷಗಾನ ಕಲಾರಂಗ ಒಂದು ತಿಂಗಳ ಕಾಲ ಆಯೋಜಿಸಿರುವ ‘ಕೋಳ್ಯೂರು ವೈಭವ’ದ ಸರಣಿ ಕಾರ್ಯಕ್ರಮಗಳಿಗೆ ಗುರುವಾರ ಧರ್ಮಸ್ಥಳದಲ್ಲಿ ಚಾಲನೆ ನೀಡಲಾಯಿತು.
ಧರ್ಮಸ್ಥಳದ ಪ್ರವಚನ ಮಂಟಪದಲ್ಲಿ ನಿನ್ನೆ ಸಂಪನ್ನಗೊಂಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ನ.14ರವರೆಗೆ ನಡೆಯಲಿರುವ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರಲ್ಲದೇ ಇದೇ ಸಂದರ್ಭ ದಲ್ಲಿ ಕೋಳ್ಯೂರರ ಕುರಿತು ಸಮಗ್ರ ಪರಿಚಯ ಒಳಗೊಂಡಿರುವ ‘ಕ್ವೀನ್ ಆಫ್ ಯಕ್ಷಗಾನ’ ಜಾಲತಾಣವನ್ನು ಉದ್ಘಾಟಿಸಿದರು.
ನಾವು ಎಲ್ಲವನ್ನೂ ಸರಕಾರದಿಂದ ನಿರೀಕ್ಷಿಸುವುದು ಸರಿಯಲ್ಲ. ಕಲೆ, ಕಲಾವಿದರ ಕ್ಷೇಮ ಚಿಂತನೆ ಸೇರಿದಂತೆ ಯಕ್ಷಗಾನ ಕಲಾರಂಗ ಮಾಡುತ್ತಿರುವ ಸಮಾಜಮುಖಿ ಕಾರ್ಯಗಳು ಸಂಘಟನೆಗಳಿಗೆ ಮಾದರಿಯಾಗಿದೆ ಎಂದು ಡಾ.ಹೆಗ್ಗಡೆ ಹೇಳಿದರು.
ರಂಗದ ಮೇಲೆ ರಾಣಿಯಾಗಿ ಮೆರೆದ ಕೋಳ್ಯೂರರು ನಿಜ ಬದುಕಿನಲ್ಲಿ ನಿರ್ಗವಿಯಾಗಿ ಎಲ್ಲರೊಂದಿಗೆ ಆತ್ಮೀಯತೆಯಿಂದ ಬೆರೆಯುವುದು ಅನುಕರ ಣೀಯವಾದ ನಡವಳಿಕೆ. ಎಲ್ಲ ಪ್ರತಿಕೂಲಗಳ ನಡುವೆ ಏಳು ದಶಕಗಳ ಕಾಲ ನಿರಂತರವಾಗಿ ಯಕ್ಷಗಾನ ಕ್ಷೇತ್ರದಲ್ಲಿ ಕಲಾಸೇವೆ ಮಾಡುತ್ತಾ ಬಂದ ಕೊಳ್ಯೂರರ ಕಲಾತಪಸ್ಸು ಈಗಿನ ಕಲಾವಿದರಿಗೆ ಆದರ್ಶಪ್ರಾಯ. ವೆಬ್ಸೈಟ್ ನಿರ್ಮಾಣದ ಮೂಲಕ ಅವರ ಕಲಾಸಾಧನೆ ಶಾಶ್ವತವಾಗಿ ಉಳಿಯುವಂತಾದುದು ಸ್ತುತ್ಯರ್ಹ ಕಾರ್ಯ ಎಂದು ನುಡಿದರು. ಶ್ರೀಕ್ಷೇತ್ರದ ವತಿಯಿಂದ ಅವರು ಕೋಳ್ಯೂರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.
ಯಕ್ಷಗಾನ ಕಲಾರಂಗದ ಉಪಾಧ್ಯಕ್ಷರಾದ ಪಿ.ಕಿಶನ್ ಹೆಗ್ಡೆ ಹಾಗೂ ವಿ.ಜಿ.ಶೆಟ್ಟಿ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಎಂ.ಗಂಗಾ ಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿ ಜತೆಕಾರ್ಯದರ್ಶಿ ಪ್ರೊ. ನಾರಾಯಣ ಎಂ. ಹೆಗಡೆ ವಂದಿಸಿದರು.
ಸಮಾರಂಭದಲ್ಲಿ ಕೋಳ್ಯೂರರ ಪತ್ನಿ ಭಾಗೀರಥಿ ರಾವ್, ಶಾಂತಿವನ ಟ್ರಸ್ಟ್ನ ಕಾರ್ಯದರ್ಶಿ ಸೀತಾರಾಮ ತೋಳ್ಪಡಿತ್ತಾಯ, ಕಲಾವಿದ ಚಂದ್ರಶೇಖರ ಧರ್ಮಸ್ಥಳ, ಯಕ್ಷಗಾನ ಕಲಾರಂಗದ ಸದಸ್ಯರಾದ ಅನಂತರಾಜ ಉಪಾಧ್ಯ, ಪೃಥ್ವಿರಾಜ ಕವತ್ತಾರ್, ಎಚ್.ಎನ್. ಶೃಂಗೇಶ್ವರ, ಕಿಶೋ ರ್ ಸಿ. ಉದ್ಯಾವರ ಉಪಸ್ಥಿತರಿದ್ದರು.
ಕೋಳ್ಯೂರರ ಪುತ್ರ ಕೆ.ಶ್ರೀಧರ ರಾವ್ ಹಾಗೂ ಮೊಮ್ಮಗ ನಟರಾಜ್ ಗೋಾಡಿ ಕಾರ್ಯಕ್ರಮದ ಸಂಯೋಜಿಸಿದರು.