ಮಂಗಳೂರು; ದಸರಾ ಪಾರ್ಟಿ ಮಾಡುವಾಗ ಕಲಹ: ಯುವಕನ ಕೊಲೆ

Update: 2021-10-16 17:33 GMT

ಮಂಗಳೂರು, ಅ.16: ನಗರದ ಪಂಪ್ ವೆಲ್ ಸಮೀಪದ ಸಾಯಿ ಪ್ಯಾಲೇಸ್ ಲಾಡ್ಜ್‌ನಲ್ಲಿ ಯುವಕರು ಸೇರಿ ಪಾರ್ಟಿ ಮಾಡುತ್ತಿದ್ದಾಗ ಸಂಘರ್ಷ ಉಂಟಾಗಿ ಯುವಕನೊಬ್ಬನಿಗೆ ಚೂರಿ ಇರಿದು ಕೊಲೆಗೈದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಪಚ್ಚನಾಡಿ ನಿವಾಸಿ ಧನುಷ್ (20) ಮೃತಪಟ್ಟ ಯುವಕ ಎಂದು ತಿಳಿದುಬಂದಿದೆ.

ಲಾಡ್ಜ್‌ನಲ್ಲಿ ಪ್ರಮೀತ್, ಜೇಸನ್, ಕಾರ್ತಿಕ್, ಧನುಷ್, ದುರ್ಗೇಶ ಮತ್ತು ಪ್ರಜ್ವಲ್ ಎಂಬವರು ದಸರಾ ಹಬ್ಬದ ಪ್ರಯುಕ್ತ ಶುಕ್ರವಾರ ರಾತ್ರಿ ಪಾರ್ಟಿ ಆಯೋಜಿಸಿದ್ದರು. ಶನಿವಾರ ಮುಂಜಾನೆ 2 ಗಂಟೆಗೆ ಜೇಸನ್ ಸುರತ್ಕಲ್ ಮತ್ತು ಧನುಷ್ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದೆ. ಈ ವೇಳೆ ಕುಡಿದ ಮತ್ತಿನಲ್ಲಿ ಜೇಸನ್ ತನ್ನಲ್ಲಿರುವ ಹರಿತವಾದ ಆಯುಧದಿಂದ ಧನುಷ್‌ಗೆ ಚುಚ್ಚಿದ್ದಾನೆ. ಇದರಿಂದ ಧನುಷ್ ತೀವ್ರವಾಗಿ ಗಾಯಗೊಂಡಿದ್ದು, ಇತರರು ಕೂಡಲೇ ಧನುಷ್‌ನನ್ನು ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ದೆಗ ಯುವಕ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.

ಈ ಕುರಿತು ಕಂಕನಾಡಿ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮೂವರು ವಶಕ್ಕೆ: ಪ್ರಕರಣದಲ್ಲಿ ಆರು ಮಂದಿ ಕೂಡ ಅ.14ರಂದೇ ಲಾಡ್ಜ್‌ನಲ್ಲಿ ಉಳಿದುಕೊಂಡು ಪಾರ್ಟಿ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ವಶಕ್ಕೆ ಪಡೆಯಲಾಗಿದ್ದು, ಜೇಸನ್ ಸೇರಿದಂತೆ ಇನ್ನು ಇಬ್ಬರನ್ನು ವಶಕ್ಕೆ ಪಡೆಯಲು ಬಾಕಿಯಿದೆ. ತನಿಖೆಯ ನಂತರ ಸ್ಪಷ್ಟತೆ ಕಂಡುಬರಲಿದೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.

ಸಿಸಿ ಕ್ಯಾಮೆರಾದಲ್ಲಿ ಸೆರೆ: ಯುವಕನ ಮೇಲೆ ದಾಳಿ ಮಾಡುವ ಸನ್ನಿವೇಶ ಮತ್ತು ಧನುಷ್‌ನನ್ನು ಆಸ್ಪತ್ರೆಗೆ ಕೊಂಡೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕ್ರಿಮಿನಲ್ ಹಿನ್ನೆಲೆ: ಆರೋಪಿ ಜೇಸನ್ ವಿರುದ್ಧ ಈ ಹಿಂದೆ ಕದ್ರಿ ಮತ್ತು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್, ಹಲ್ಲೆ ಪ್ರಕರಣಗಳು ದಾಖಲಾಗಿವೆ. ಧನುಷ್ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣಗಳಿವೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News