ಪರಿಶ್ರಮದಿಂದ ಒಬ್ಬ ಹಾಫಿಝ್ ಐಎಎಸ್ ಪದವಿಗೆ ತಲುಪಬಹುದು: ಅಬ್ದುಲ್ ಖದೀರ್

Update: 2021-10-16 07:33 GMT

ಮಂಗಳೂರು: ಹಾಫಿಝ್ ಓದಿದವರು ನಿರಂತರವಾಗಿ ಶ್ರಮಿಸಿದರೆ ವೈದ್ಯಕೀಯ, ನ್ಯಾಯಾಂಗ, ವಿಜ್ಞಾನ ಸಹಿತ ಹಲವು ಕ್ಷೇತ್ರಗಳಲ್ಲಿ ಸಾಧನೆಯ ಮೈಲುಗಲ್ಲು ದಾಖಲಿಸಬಹುದು. ಪರಿಶ್ರಮದಿಂದ ಒಬ್ಬ ಹಾಫಿಝ್ ಐಎಎಸ್ ಪದವಿಗೆ ತಲುಪಬಹುದು ಎಂದು ಶಾಹೀನ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ ಅಧ್ಯಕ್ಷ ಅಬ್ದುಲ್ ಖದೀರ್ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶಾಹೀನ್ ಗ್ರೂಪ್ ಆಫ್ ಇನ್‌ ಸ್ಟಿಟ್ಯೂಷನ್ಸ್ ಹಾಗೂ ಹಿದಾಯ ಫೌಂಡೇಶನ್ ಸಹಯೋಗದಲ್ಲಿ ನಗರದ ಕಂಕನಾಡಿಯ ಜಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ ಶನಿವಾರ ನಡೆದ "ಹಾಫಿಝ್ ಟು ಐಎಎಸ್" ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಕಲಿಯುವ, ಸಾಧಿಸುವ ಛಲ ಇದ್ದರೆ ಐಎಎಸ್‌ ನಂತಹ ಅತ್ಯುನ್ನತ ಹುದ್ದೆಗಳನ್ನು ಸುಲಭವಾಗಿ ಗಳಿಸಬಹುದು. ಓರ್ವ ಶಿಕ್ಷಕ ಆರು ವಿದ್ಯಾರ್ಥಿಗಳು ಎಂಬ ಪದ್ಧತಿಯನ್ನು ಶಾಹೀನ್ ಶಿಕ್ಷಣ ಸಂಸ್ಥೆಗಳಲ್ಲಿ ಅಳವಡಿಸಿಕೊಳ್ಳಲಾಗಿದೆ. ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಬೃಹತ್ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಾ ಇದ್ದಾರೆ. ಓರ್ವ ಹಾಫಿಝ್ ತನ್ನ ಧಾರ್ಮಿಕ ಸೇವೆ ಮಾಡುತ್ತಾ ಆಡಳಿತಾತ್ಮಕ ಸೇವೆ (ಐಎಎಸ್) ನೀಡಬಹುದು. ವೈದ್ಯನಾಗಬಹುದು, ನ್ಯಾಯಾಲಯದಲ್ಲಿ ನ್ಶಾಯವಾದಿ, ನ್ಯಾಯಾಧೀಶನಾಗಬಹುದು, ವಿಜ್ಞಾನದಲ್ಲಿ ಸಂಶೋಧನೆಗೆ ತೊಡಗಬಹುದು. ನಿರಂತರ ಪರಿಶ್ರಮವಿದ್ದರೆ ಯಾವುದೂ ಕಠಿಣವಲ್ಲ ಎಂದರು.

ದೇಶದ ವಿವಿಧೆಡೆ ಸಂಸ್ಥೆಯ 43 ಬ್ರ್ಯಾಂಚ್‌ಗಳಿವೆ. ಧರ್ಮ, ಜಾತಿ, ಭೇದ-ಭಾವವಿಲ್ಲದೇ ಸಹಸ್ರಾರು ಸಂಖ್ಯೆಯ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಕಳೆದ 31 ವರ್ಷಗಳಿಂದ ಉತ್ಕೃಷ್ಟ ಗುಣಮಟ್ಟದ ಶಿಕ್ಷಣ‌ ನೀಡಲಾಗುತ್ತಿದೆ. ಸಂಸ್ಥೆಯಲ್ಲಿ ಶೇ.20ರಷ್ಟು ವಿದ್ಯಾರ್ಥಿಗಳಿಗೆ ಉಚಿತ‌ ಶಿಕ್ಷಣ ನೀಡಲಾಗುತ್ತಿದೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹಿದಾಯ ಅಕಾಡಮಿ ವಿಭಾಗದ ಮುಖ್ಯಸ್ಥ ಮೌಲಾನ ಶೋಯೇಬ್ ಹುಸೈನಿ ನದ್ವಿ ಮಾತನಾಡಿ, ವಿದ್ಯಾರ್ಥಿಗಳು ಸಣ್ಣ ವಯಸ್ಸಿನಿಂದಲೇ ಮಹತ್ವಾಕಾಂಕ್ಷೆಯ ಗುರಿಗಳನ್ನು ಇಟ್ಟುಕೊಂಡು, ಅವುಗಳನ್ನು ಪೂರೈಸುವ ನಿಟ್ಟಿನಲ್ಲಿ ಮುನ್ನಡೆಯಬೇಕು. ಧಾರ್ಮಿಕ ಶಿಕ್ಷಣದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಗಮನಹರಿಸಬೇಕು. ಪರಿಶ್ರಮದಿಂದ ಎಂತಹದ್ದನ್ನೂ ಸಾಧಿಸಬಹುದು ಎನ್ನಲು ನಮ್ಮ ಮುಂದೆ ಹಲವು ನಿದರ್ಶನಗಳಿವೆ ಎಂದರು.

ಬ್ಯಾರಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (ಬಿಸಿಸಿಐ) ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ ಮಾತನಾಡಿ, ಮಂಗಳೂರಿನಲ್ಲೂ ಹಲವರು ಹಾಫಿಝ್ ಕಲಿತವರು ಹಲವು ಅತ್ಯುನ್ನತ ಹುದ್ದೆಗೇರಿದ್ದಾರೆ ಎಂದರು.

ಹಿದಾಯ ಫೌಂಡೇಶನ್‌ ಸಂಸ್ಥಾಪಕ ಖಾಸಿಮ್ ಅಹ್ಮದ್ ಮಾತನಾಡಿ, ಹಾಫಿಝ್ ಶಿಕ್ಷಣ ಪೂರೈಸಿದವರು ಐಎಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳು, ವೈದ್ಯಕೀಯ, ಇಂಜಿನಿಯರಿಂಗ್ ಸಹಿತ ಇತರ ವೃತ್ತಿಪರ ಕೋರ್ಸ್‌ಗಳತ್ತ ಗಮನ ಹರಿಸಿ, ಸಾಧನೆಯ ಉತ್ತುಂಗಕ್ಕೆ ಏರಲು ಸಹಕಾರಿಯಾಗುವಂತಹ ಒಂದು ದಿನದ ಕಾರ್ಯಕ್ರಮ ಆಯೋಜಿಸುವುದು ಕಾರ್ಯಾಗಾರದ ಉದ್ದೇಶವಾಗಿದೆ. ನಿರಂತರ ಪರಿಶ್ರಮದೊಂದಿಗೆ ಯಶಸ್ಸು ಪಡೆಯಬಹುದು ಎಂದರು.

10+2 ಧಾರ್ಮಿಕ ಶಿಕ್ಷಣದ ನಂತರ ಬಹುತೇಕ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಶಿಕ್ಷಣ ಪಡೆಯುವ ಇಂಗಿತವಿದ್ದರೂ ಪೋಷಕರು ಪ್ರೋತ್ಸಾಹ ನೀಡು ತ್ತಿಲ್ಲ. ಇಂತಹ ಸಂದರ್ಭ ಅವರಿಗೆ ಉನ್ನತ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.

ಇಖ್ರಾ ಅರಬಿಕ್ ಇನ್‌ಸ್ಟಿಟ್ಯೂಷನ್‌ನ ಪ್ರಾಂಶುಪಾಲ ಮೌಲಾನ ಸಲೀಮ್ ನದ್ವಿ ಮಾತನಾಡಿದರು.

ಕಾರ್ಯಾಗಾರದಲ್ಲಿ ಮುಸ್ಲಿಂ ಎಜುಕೇಷನ್‌ ಇನ್‌ಸ್ಟಿಟ್ಯೂಷನ್ಸ್ ಆಫ್ ಫೇಡರೇಶನ್‌ನ (ಮೀಫ್‌) ಅಧ್ಯಕ್ಷ ಮೂಸಬ್ಬ ಬ್ಯಾರಿ, ಯುನಿಟಿ ಕೇರ್ ಆ್ಯಂಡ್ ಹೆಲ್ತ್ ಸರ್ವಿಸೆಸ್‌ನ ಅಧ್ಯಕ್ಷ ಡಾ.ಸಿ.ಪಿ. ಹಬೀಬ್ ರಹ್ಮಾನ್ ಉಪಸ್ಥಿತರಿದ್ದರು.

ಮುಹಮ್ಮದ್ ಹಕೀಮ್ ಕಿರಾಅತ್ ಪಠಿಸಿದರು. ಮುಹಮ್ಮದ್ ಹಾಜಿ ಗೊಳ್ತಮಜಲು ಸ್ವಾಗತಿಸಿದರು. ಬಿ‌.ಎ. ಮುಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಾಗಾರದಲ್ಲಿ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News