ನಾಡ: ಕೊರಗ ಕಾಲನಿಯ ಮನೆ, ಬೈಕ್ ಬೆಂಕಿಗಾಹುತಿ
Update: 2021-10-16 16:11 GMT
ಬೈಂದೂರು, ಅ.16: ಬೆಂಕಿ ಅನಾಹುತದಿಂದ ಮನೆಯೊಂದು ಸುಟ್ಟು ಹೋಗಿ ಲಕ್ಷಾಂತರ ರೂ. ನಷ್ಟ ಉಂಟಾಗಿರುವ ಘಟನೆ ನಾಡ ಗ್ರಾಮದ ಪಡುಕೋಣೆ ಹೈಸ್ಕೂಲ್ ಎದುರುಗಡೆ ಇರುವ ಕೊರಗ ಕಾಲನಿಯಲ್ಲಿ ಅ.15ರಂದು ಮಧ್ಯಾಹ್ನ ವೇಳೆ ನಡೆದಿದೆ.
ಕೊರಗ ಕಾಲನಿಯ ಸುನೀತಾ ಎಂಬವರು ಮನೆಯಲ್ಲಿ ದೇವರಿಗೆ ದೀಪ ಹಚ್ಚಿ ಸಮೀಪದಲ್ಲಿರುವ ಸಂಬಂಧಿಕರ ಮನೆಗೆ ಹೋಗಿದ್ದರು. ಈ ವೇಳೆ ಅಕಸ್ಮಿಕ ವಾಗಿ ಬೆಂಕಿ ತಗುಲಿ ಮನೆ ಹೊತ್ತಿಕೊಂಡಿತು. ಇದರಿಂದ ಮನೆ ಒಳಗಿದ್ದ ಪೀಠೋಪಕರಣ, ಆಹಾರ ಸಾಮಾಗ್ರಿ, ಪಾತ್ರೆ, ಕಬ್ಬಿಣದ ಕಪಾಟು, ಬಟ್ಟೆಬರೆ, ಚಿನ್ನಾಭರಣ ಹಾಗೂ ಹೊರಗಡೆ ನಿಲ್ಲಿಸಿದ ಬೈಕ್ ಬೆಂಕಿಗೆ ಆಹುತಿಯಾಗಿದೆ.
ಇದರಿಂದ ಸುಮಾರು 4 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ. ಈ ಬಗ್ಗೆ ಗಂಗೊಳ್ಳಿ ಪೋಲಿಸ್ ಠಾಣೆಗೆ ದೂರು ನೀಡಲಾಗಿದೆ. ಸ್ಥಳಕ್ಕೆ ಗ್ರಾಮ ಲೆಕ್ಕಿಗರು, ಪಿಡಿಓ ಹಾಗೂ ಸ್ಥಳೀಯ ಪಂಚಾಯತ್ ಸದಸ್ಯರ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಕುಟುಂಬಕ್ಕೆ ಸರಕಾರದಿಂದ ಸೂಕ್ತ ಪರಿಹಾರ ದೊರಕಿಸಿ ಕೊಡಬೇಕೆಂದು ಬೈಂದೂರು ತಹಶೀಲ್ದಾರ್ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ.