ಉತ್ತರಪ್ರದೇಶ:ನ್ಯಾಯಾಲಯದಲ್ಲಿ ವಕೀಲರ ಗುಂಡಿಕ್ಕಿ ಹತ್ಯೆ
Update: 2021-10-18 13:16 IST
ಲಕ್ನೊ: ಉತ್ತರಪ್ರದೇಶದ ಶಹಜಹಾನ್ ಪುರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದೊಳಗೆ ವಕೀಲರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು NDTV ವರದಿ ಮಾಡಿದೆ.
ನ್ಯಾಯಾಲಯದ ಮೂರನೇ ಮಹಡಿಯಲ್ಲಿ ವಕೀಲರ ಶವ ಪತ್ತೆಯಾಗಿದೆ. ಮೃತದೇಹದ ಬಳಿ ದೇಶೀಯ ನಿರ್ಮಿತ ಪಿಸ್ತೂಲ್ ಕೂಡ ಕಂಡುಬಂದಿದೆ ಎಂದು ವರದಿಯಾಗಿದೆ.
ವಕೀಲರು ಯಾರೊಂದಿಗೋ ಮಾತನಾಡುತ್ತಿದ್ದರು. ಆಗ ಇದ್ದಕ್ಕಿದ್ದಂತೆ ಜೋರಾಗಿ ಶಬ್ದವಾಯಿತು ಹಾಗೂ ಅವರು ನೆಲಕ್ಕೆ ಬಿದ್ದರು ಎಂದು ಆರಂಭಿಕ ವರದಿಗಳು ತಿಳಿಸಿವೆ.
ಹತ್ಯೆಗೀಡಾದ ವಕೀಲರನ್ನು ಜಲಾಲಾಬಾದ್ ನಿವಾಸಿ ಭೂಪೇಂದ್ರ ಸಿಂಗ್ ಎಂದು ತಿಳಿದುಬಂದಿದೆ.
ಗುಂಡಿನ ಸದ್ದು ಕೇಳಿ ನ್ಯಾಯಾಲಯದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ನ್ಯಾಯಾಲಯದಲ್ಲಿ ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಈ ಹತ್ಯೆಯು ವಕೀಲರ ಆಕ್ರೋಶಕ್ಕೆ ಕಾರಣವಾಗಿದೆ.