ಆರ್ಯನ್‌ ಖಾನ್‌ ನೊಂದಿಗೆ ಸೆಲ್ಫೀ ಕ್ಲಿಕ್ಕಿಸಿದ್ದ ʼಡಿಟೆಕ್ಟಿವ್‌ʼ ವಿರುದ್ಧ ಮತ್ತೊಂದು ವಂಚನೆ ಪ್ರಕರಣ ದಾಖಲು

Update: 2021-10-18 12:04 GMT

ಹೊಸದಿಲ್ಲಿ: ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಶಾರೂಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಹಾಗೂ ಹಲವರನ್ನು ಬಂಧಿಸಲಾಗಿತ್ತು. ಈ ವೇಳೆ ವ್ಯಕ್ತಿಯೋರ್ವ ಆರ್ಯನ್‌ ಖಾನ್‌ ನೊಂದಿಗೆ ಸೆಲ್ಫೀ ಕ್ಲಿಕ್ಕಿಸಿದ್ದು ಭಾರೀ ಸುದ್ದಿಯಾಗಿತ್ತು. ಬಳಿಕ ಆತ ಓರ್ವ ಖಾಸಗಿ ಡಿಟೆಕ್ಟಿವ್‌ ಆಗಿದ್ದು, ಕಿರಣ್‌ ಗೋಸಾವಿ ಎಂದು ಗುರುತಿಸಲಾಗಿತ್ತು. ಆತನ ವಿರುದ್ಧ ಈ ಹಿಂದೆ ವಂಚನೆ ಪ್ರಕರಣವೊಂದು ದಾಖಲಾಗಿದ್ದು, ಇದೀಗ ಮತ್ತೊಂದು ಪ್ರಕರಣವನ್ನೂ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ಪ್ರಕರಣದೊಂದಿಗೆ ಗೋಸಾವಿ ವಿರುದ್ಧ ವಂಚನೆ, ಮೋಸಕ್ಕೆ ಸಂಬಂಧಿ ನಾಲ್ಕು ಪ್ರಕರಣಗಳನ್ನು ದಾಖಲಿಸಲಾಗಿದೆ. ಪೊಲೀಸರ ಪ್ರಕಾರ, ಪ್ರಕರಣದ ಸಂತ್ರಸ್ತರಾದ ಉತ್ಕರ್ಶ್ ತಾರೆ ಮತ್ತು ಆದರ್ಶ್ ಕೇಣಿ ಅವರು 2018 ರಲ್ಲಿ ಗೋಸಾವಿಯೊಂದಿಗೆ ಸಂಪರ್ಕ ಹೊಂದಿದ್ದರು ಮತ್ತು ಮಲೇಷ್ಯಾದ ಕೌಲಾಲಂಪುರದ ಹೋಟೆಲ್‌ಗಳಲ್ಲಿ ಉದ್ಯೋಗ ನೀಡುವ ನೆಪದಲ್ಲಿ ಅವರನ್ನು 1.65 ಲಕ್ಷ ರೂಪಾಯಿಗಳನ್ನು ವಂಚಿಸಲಾಗಿತ್ತು.

ದೂರಿನ ಪ್ರಕಾರ, ಗೋಸಾವಿ ಸಂತ್ರಸ್ತರಿಂದ ಹಣ ಪಡೆದ ನಂತರ ನಕಲಿ ಪ್ರವಾಸಿ ವೀಸಾಗಳನ್ನು ಮತ್ತು ವಿಮಾನ ಟಿಕೆಟ್ಗಳನ್ನು ಹಸ್ತಾಂತರಿಸಿದ್ದಾನೆ. ಸಂತ್ರಸ್ತರು ವಿಮಾನ ನಿಲ್ದಾಣಕ್ಕೆ ಹೋದಾಗ ಅವರ ದಾಖಲೆಗಳು ಮತ್ತು ಟಿಕೆಟ್ಗಳನ್ನು ಪರಿಶೀಲಿಸಿದ ನಂತರ ಅವರನ್ನು ಸಿಐಎಸ್ಎಫ್ ಅಧಿಕಾರಿಗಳು ಹಿಂತಿರುಗಿಸಿದ್ದಾರೆ ಎನ್ನಲಾಗಿದೆ.

ನಂತರ ಇಬ್ಬರೂ ಕೆಲ್ವಾ ಪೊಲೀಸರಿಗೆ ದೂರು ನೀಡಿದ್ದರು. ಆದರೆ, ಮೂರು ವರ್ಷಗಳ ನಂತರವೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಅಥವಾ ಯಾವುದೇ ಕ್ರಿಮಿನಲ್ ಅಪರಾಧ ದಾಖಲಿಸಲಿಲ್ಲ ಎಂದು ಅವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News