ಕೊಣಾಜೆಯಲ್ಲಿ ತಲವಾರು ದಾಳಿ: ಅಲ್ಪ ಗಾಯದೊಂದಿಗೆ ಪಾರಾದ ಅಂಗಡಿ ಮಾಲಕ
Update: 2021-10-19 06:32 GMT
ಕೊಣಾಜೆ, ಅ.19: ಮಂಗಳೂರು ವಿಶ್ವವಿದ್ಯಾನಿಲಯದ ಬಳಿ ಬೈಕ್ ನಲ್ಲಿ ಬಂದ ಮೂವರು ಅಪರಿಚಿತರ ತಂಡವೊಂದು ಅಂಗಡಿಗೆ ಬಾಗಿಲು ಮುಚ್ಚಿ ಹೊರಬರುತ್ತಿದ್ದ ವ್ಯಕ್ತಿಯೊಬ್ಬರಿಗೆ ತಲವಾರಿನಿಂದ ದಾಳಿ ನಡೆಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಅಂಗಡಿ ಮಾಲಕ ಅಲ್ಪ ಗಾಯದೊಂದಿಗೆ ಪಾರಾಗಿದ್ದಾರೆ.
ಕೊಣಾಜೆ ಮಂಗಳೂರು ವಿವಿಯ ಇಂಡೋರ್ ಸ್ಟೇಡಿಯಂ ಸಮೀಪ ಇರುವ ದುರ್ಗಾ ಫ್ಯಾನ್ಸಿ ಆ್ಯಂಡ್ ಜನರಲ್ ಸ್ಟೋರ್ ಮಾಲಕ ಪ್ರಕಾಶ್ ಅಪಾಯದಿಂದ ಪಾರಾದವರಾಗಿದ್ದಾರೆ. ಇವರು ಕಳೆದ ರಾತ್ರಿ, ಕೆಲಸ ಮುಗಿಸಿ ಮನೆ ಕಡೆಗೆ ಹೊರಡುತ್ತಿದ್ದಾಗ ರಸ್ತೆ ಸಮೀಪ ಹೊಂಚು ಹಾಕಿ ಕುಳಿತಿದ್ದ ಮೂವರು ಅಪರಿಚಿತರ ತಂಡ ತಲವಾರು ಬೀಸಿದ್ದರೆನ್ನಲಾಗಿದೆ. ಈ ಸಂದರ್ಭದಲ್ಲಿ ದಾಳಿಯಿಂದ ತಪ್ಪಿಸಿಕೊಂಡರೂ ತೋಳಿಗೆ ಸ್ವಲ್ಪ ಗಾಯವಾಗಿದೆ ಎಂದು ಪ್ರಕಾಶ್ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ಕೊಣಾಜೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.