ಉಡುಪಿ : ಸುಂದರಗೊಂಡಿತು ಗ್ರಾಮದ ತ್ಯಾಜ್ಯ ಎಸೆಯುವ ‘ಬ್ಲ್ಯಾಕ್ ಸ್ಪಾಟ್’

Update: 2021-10-19 14:23 GMT

ಉಡುಪಿ, ಅ.19: ಸ್ವಚ್ಛ ಭಾರತ ಮಿಷನ್ (ಗ್ರಾ) ಯೋಜನೆಯಡಿ ಉಡುಪಿ ಜಿಲ್ಲಾ ಪಂಚಾಯತ್ ಜಿಲ್ಲೆಯಾದ್ಯಂತ ನಡೆಸಿದ ತ್ಯಾಜ್ಯ ಎಸೆಯುವ ‘ಬ್ಲ್ಯಾಕ್ ಸ್ಪಾಟ್’ ಸುಂದರೀಕರಣ ಯೋಜನೆ ಉತ್ತಮ ಜನಸ್ಪಂದನೆಯನ್ನು ಪಡೆದಿದ್ದು, ಇದುವರೆಗೆ 150ಕ್ಕೂ ಹೆಚ್ಚಿನ ಇಂಥ ಸ್ಥಳಗಳು ತ್ಯಾಜ್ಯಗಳಿಂದ ಮುಕ್ತವಾಗಿ ಹಸಿರು ಗಿಡಗಳೊಂದಿಗೆ ನಳನಳಿಸುತ್ತಿವೆ.

ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಸಾರ್ವಜನಿಕ ಸ್ಥಳಗಳಲ್ಲಿ ಅದರಲ್ಲೂ ಮುಖ್ಯವಾಗಿ ರಸ್ತೆ, ಬಸ್‌ನಿಲ್ದಾಣ, ನದಿಯ ಪಕ್ಕದಲ್ಲಿ ತ್ಯಾಜ್ಯ ಎಸೆಯುವ ಜಾ ಗಳನ್ನು ಗುರುತಿಸುವ ಜಿಪಂನ ಪ್ರಯತ್ನಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರಕಿದೆ. ಜನರ ಮೂಲಕವೇ ಜಿಲ್ಲೆಯಲ್ಲಿ ಇದುವರೆಗೆ ಗುರುತಿಸಲಾದ 150ಕ್ಕೂ ಅಧಿಕ ಕಡೆಗಳಲ್ಲಿದ್ದ ‘ಕಪ್ಪು ತಾಣ’ಗಳನ್ನು ನಿರ್ಮೂಲನೆ ಮಾಡಲಾಗಿದೆ.

ಈವರೆಗೆ ಒಟ್ಟು 55 ಕಡೆಗಳಲ್ಲಿ ಇಂಥ ‘ಕಪ್ಪು ಪ್ರದೇಶ’ ಇರುವ ಬಗ್ಗೆ ವಾಟ್ಸಪ್ ನಂ.: 9483330564ಕ್ಕೆ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ಇದರಲ್ಲಿ ಜಿಪಂ ವ್ಯಾಪ್ತಿಯ ಗ್ರಾಮೀಣ ಭಾಗಕ್ಕೆ ಸೇರಿದ 42 ಪ್ರದೇಶಗಳಿದ್ದು ಇವುಗಳಲ್ಲಿ ಈವರೆಗೆ 40ನ್ನು ಸಂಪೂರ್ಣ ಸ್ವಚ್ಛಗೊಳಿಸಲಾಗಿದೆ. ಉಳಿದಂತೆ ನಗರ ವ್ಯಾಪ್ತಿಗೆ ಸೇರಿದ ಕಸ-ತ್ಯಾಜ್ಯಗಳಿರುವ ಕಪ್ಪು ತಾಣಗಳನ್ನು ಸ್ವಚ್ಛಗೊಳಿಸುವ ಬಗ್ಗೆ ನಗರಸಭೆಗೆ ಮಾಹಿತಿ ನೀಡಲಾಗಿದೆ.

ಇದರೊಂದಿಗೆ ಸುಮಾರು 100 ಕ್ಕೂ ಹೆಚ್ಚು ಕಡೆಗಳಲ್ಲಿ ತ್ಯಾಜ್ಯ ಎಸೆಯುವ ಸ್ಥಳಗಳನ್ನು ಗ್ರಾಮ ಪಂಚಾಯತ್‌ಗಳು ತಾವೇ ಗುರುತಿಸಿದ್ದು, ಅವುಗಳನ್ನು ಸಹ ಸ್ವಚ್ಛಗೊಳಿಸಿಲಾಗಿದೆ.ಬಹುತೇಕ ಕಡೆಗಳಲ್ಲಿ ಗಿಡ ನೆಡುವುದು, ಸಿಸಿಟಿವಿ ಅಳವ ಡಿಕೆ, ಬ್ಯಾನರ್, ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಕೋಟೇಶ್ವರ, ಕೋಡಿಬೆಟ್ಟು, ಬೊಮ್ಮರಬೆಟ್ಟು ಗ್ರಾಪಂ ವ್ಯಾಪ್ತಿಯಲ್ಲಿ ಕಸ ಎಸೆಯುವ ‘ಕಪ್ಪು ಪ್ರದೇಶ’ಗಳನ್ನು ನಿರ್ಮೂಲನಗೊಳಿಸುವ ಜೊತೆಗೆ ಕೆಲವಡೆ ಅದನ್ನು ಹೂದೋಟವಾಗಿ ಪರಿವರ್ತಿಸಿ ಅದಕ್ಕೆ ಕಲಾತ್ಮಕತೆಯ ಸ್ಪರ್ಶ ನೀಡಲಾಗಿದೆ.

ತ್ಯಾಜ್ಯ ಎಸೆಯುವ ಜಾಗವನ್ನು ಗುರುತಿಸಿ ಮಾಹಿತಿ ನೀಡುವ ಕರೆಗೆ ಸಾರ್ವಜನಿಕರಿಂದ ಅತ್ಯುತ್ತಮ ಸ್ಪಂದನೆ ದೊರೆತಿದ್ದು, ಕೆಲವು ಕಡೆಗಳಲ್ಲಿ ತ್ಯಾಜ್ಯ ಎಸೆದವರಿಗೆ ದಂ ವಿಧಿಸುವುದರೊಂದಿಗೆ ಅವರಿಂದಲೇ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಕಾರ್ಯವೂ ಭರದಿಂದ ನಡೆಯುತ್ತಿದೆ. 

ಸಿದ್ಧಾಪುರ ಗ್ರಾಪಂನಲ್ಲಿ ಸ್ಮಶಾನದ ಬಳಿ ತ್ಯಾಜ್ಯ ಎಸೆದವರನ್ನು ಪತ್ತೆ ಹಚ್ಚಿ 1000 ರೂ ದಂಡ ವಿಧಿಸಲಾಗಿದೆ. ಸಾಣೂರು ಗ್ರಾಪಂನಲ್ಲಿ 2000 ರೂ., ಬಡಾ ಗ್ರಾಪಂನಲ್ಲಿ 2000 ರೂ. ದಂಡ ವಿಧಿಸಲಾಗಿದೆ. ಕೋಡಿಬೆಟ್ಟು ಗ್ರಾಪಂನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದವರನ್ನು ಪತ್ತೆ ಹಚ್ಚಿ ಅವರಿಂದಲೇ ಕಸ ಹೆಕ್ಕಿಸುವ ಕಾರ್ಯವೂ ನಡೆದಿದೆ. ಅಲೆವೂರು ಗ್ರಾಪಂನಲ್ಲಿ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆದವರನ್ನು ಪತ್ತೆ ಮಾಡಿ ಅವರಿಂದಲೇ ಕಸ ಹೆಕ್ಕಿಸಿ 2000ರೂ. ದಂಡವನ್ನು ಕೂಡ ವಸೂಲಿ ಮಾಡಲಾಗಿದೆ.

ಮುಂದಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುವವರ ಪೋಟೋ/ ಕಸ ತಂದು ಸುರಿಯುವ ವಾಹನಗಳ ಪೋಟೋ/ ಕಸ ಬಿದ್ದಿರುವ ಜಾಗದ ಪೋಟೋಗಳನ್ನು ಮತ್ತು ಸ್ಥಳದ ಮಾಹಿತಿಯನ್ನು ವಾಟ್ಸಪ್ ನಂಬರ್: 9483330564ನಲ್ಲಿ ನೀಡಿದ್ದಲ್ಲಿ ಮಾಹಿತಿ ನೀಡಿದವರಿಗೆ ಗ್ರಾಮ ಪಂಚಾಯತ್ ನಿಂದ ಸೂಕ್ತ ಬಹುಮಾನ ನೀಡಲಾಗುವುದು. ಈ ಮಾಹಿತಿ ನೀಡಿದವರ ಮೊಬೈಲ್ ಸಂಖ್ಯೆ ಮತ್ತು ಹೆಸರನ್ನು ಬಹಿರಂಗ ಪಡಿಸುವುದಿಲ್ಲ.

ಜಿಲ್ಲೆಯಲ್ಲಿ ಕಸ-ತ್ಯಾಜ್ಯ ನಿರ್ಮೂಲನಾ ಕಾರ್ಯ ನಿರಂತರ ಪ್ರಕ್ರಿಯೆ ಯಾಗಿದ್ದು, ಸಾರ್ವಜನಿಕರು ಬ್ಲ್ಯಾಕ್‌ ಸ್ಪಾಟ್‌ಗಳ ಬಗ್ಗೆ ವಾಟ್ಸಾಪ್ ಮೂಲಕ ಮಾಹಿತಿ ನೀಡಿ ‘ನಮ್ಮ ಊರು ಸ್ವಚ್ಛ ಊರು’ ಅಭಿಯಾನವನ್ನು ಮತ್ತಷ್ಟು ಯಶಸ್ವಿಗೊಳಿಸಿ, ಇಡೀ ಜಿಲ್ಲೆಯನ್ನು ತ್ಯಾಜ್ಯ ಮುಕ್ತ ಮಾಡಲು ಸಹಕರಿಸಬೇಕು.

-ಡಾ.ನವೀನ್ ಭಟ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಡುಪಿ ಜಿಪಂ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News