ಮಂಗಳೂರು : ಪೊಲೀಸರ ಮೇಲೆ ತಲವಾರು ದಾಳಿಗೆ ಯತ್ನಿಸಿದ ವಾರಂಟ್ ಆರೋಪಿ

Update: 2021-10-21 08:54 GMT

ಮಂಗಳೂರು : ವಾರಂಟ್ ಆರೋಪಿ, ಧರ್ಮನಗರ ನಿವಾಸಿ ಮುಕ್ತಾರ್ ಅಹ್ಮದ್ ಎಂಬಾತನನ್ನು ವಶಕ್ಕೆ ಪಡೆಯಲು ತೆರಳಿದ್ದ ಪೊಲೀಸರ ಮೇಲೆ ಆರೋಪಿ ಮುಕ್ತಾರ್ ತಲವಾರು ದಾಳಿ ನಡೆಸಿದ್ದಾನೆ ಎನ್ನಲಾದ  ಘಟನೆ ಉಳ್ಳಾಲದಲ್ಲಿ ನಡೆದಿದೆ.

ಘಟನೆಯ ಬಳಿಕ ಪೊಲೀಸರ ಕಣ್ಣು ತಪ್ಪಿಸಿ ಆರೋಪಿ ಪರಾರಿಯಾಗಿದ್ದು, ಆತನಿಗೆ ಪರಾರಿಯಾಗುವ ವೇಳೆ ಸಹಕರಿಸಿದ ಆರೋಪಿ ನವಾಝ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಮುಕ್ತಾರ್ ಅಹ್ಮದ್ ಎಂಬಾತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದರು. ಹಲವು ಪ್ರಕರಣಗಳ ಆರೋಪಿ ಆಗಿದ್ದ ಈತ  ಕೋರ್ಟಿಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ. ಈ ಕಾರಣದಿಂದ ಉಳ್ಳಾಲ ಪೊಲೀಸರು ಕೋರ್ಟಿನಿಂದ ವಾರಂಟ್ ಪಡೆದು ಗುರುವಾರ ಬೆಳಗ್ಗೆ ಬಂಧಿಸಲು ತೆರಳಿದ್ದರು.

ಈ ಸಂದರ್ಭ ತಲವಾರು ಹಿಡಿದುಕೊಂಡು ಹೊರಬಂದ ಮುಕ್ತಾರ್, ಪೊಲೀಸರ ಮೇಲೆ ದಾಳಿ ನಡೆಸಲು ಯತ್ನಿಸಿ, ಬಳಿಕ  ನವಾಝ್ ನ ಬೈಕಿನಲ್ಲಿ ಆತ ಪರಾರಿಯಾಗಿದ್ದು, ಬೆನ್ನಟ್ಟಿದ ಪೊಲೀಸರು ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ  ಬೈಕನ್ನು ಹಿಡಿದಿದ್ದಾರೆ. ಆದರೆ, ಇದರ ನಡುವಲ್ಲೇ ಮುಕ್ತಾರ್ ಅಹ್ಮದ್ ಬೈಕಿನಿಂದ ಇಳಿದು ಪರಾರಿಯಾಗಿದ್ದು, ಬೈಕ್ ಸವಾರ ನವಾಝ್ ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News