ಕುಂದಾಪುರ: ಯುವಕನ ಸಂಶಯಾಸ್ಪದ ಸಾವು; ದೂರು ದಾಖಲು

Update: 2021-10-22 13:25 GMT

ಕುಂದಾಪುರ, ಅ.22: ಕುಂದಾಪುರದ ಹೊಟೇಲೊಂದರಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದ ಬೈಂದೂರು ತಾಲೂಕು ಜಡ್ಕಲ್ ಗ್ರಾಮ ಕೋರಿಜೆಡ್ಡುನ ಪ್ರಶಾಂತ್ (19) ಅ.21ರ ಮುಂಜಾನೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಆತನ ಆತ್ಮಹತ್ಯೆಯ ಬಗ್ಗೆ ಸಂಶಯವಿರುವುದಾಗಿ ಪೋಷಕರು ತಿಳಿಸಿದ್ದು, ಅದರಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸಲಾಗುತ್ತಿದೆ.

ಪ್ರಶಾಂತ್ ತಾನು ವಾಸ ಮಾಡಿಕೊಂಡಿದ್ದ ರೂಮಿನಲ್ಲಿ ಅ.21ರ  ಮುಂಜಾನೆ 2 ರಿಂದ 3 ಗಂಟೆಯ ಮಧ್ಯೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗಿದೆ. ಆತನ ಮೊಬೈಲ್‌ನ್ನು ಪರಿಶೀಲಿಸಿದಾಗ ಅದರಲ್ಲಿ ಕೆಲವೇ ಗಂಟೆ ಮೊದಲು ‘ಏನೂ ಇಲ್ಲದವನ ಮುಂದೆ ಎಲ್ಲ ಇದ್ದವರ ಆಟ’ ಎಂದು ಬರೆದಿದ್ದು, ಮಗನ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆ ವೊಲೀಸರು ಮಣಿಪಾಲ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ಜಡ್ಕಲ್ ಸಮೀಪದ ಮುದೂರು ಬಸ್ರಿಬೇರುನಲ್ಲಿ ಕೂಲಿ ಕೆಲಸ ಮಾಡಿ ಕೊಂಡಿರುವ ಲಚ್ಚು ನಾಯ್ಕ್, ಗೌರಿ ದಂಪತಿಗಳ ಮೂರು ಮಕ್ಕಳಲ್ಲಿ ಕೊನೆಯವನಾದ ಪ್ರಶಾಂತ್ ಎಸೆಸೆಲ್ಸಿ ವಿದ್ಯಾಭ್ಯಾಸದ ಬಳಿಕ ಮನೆ ಜವಾಬ್ದಾರಿ ಹೊತ್ತು ಹೋಟೆಲ್ ಕೆಲಸಕ್ಕೆ ಸೇರಿದ್ದ. ಆತನಿಗೆ ಯಾವುದೇ ಸಮಸ್ಯೆ ಇದ್ದಿರಲಿಲ್ಲ. ಅ.20ರ ಸಂಜೆ ವೇಳೆಗೆ ಮನೆಗೆ ಕರೆ ಮಾಡಿ ಲವಲವಿಕೆಯಿಂದಲೇ ಮಾತನಾಡಿದ್ದಲ್ಲದೇ ಸಹೋದರನ ಖಾತೆಗೆ 5000 ರೂ. ಹಣ ಜಮಾ ಮಾಡಿದ್ದ ಎಂದು ಪೋಷಕರು ತಿಳಿಸಿದ್ದಾರೆ.

ಮನೆಯ ನಿರ್ವಹಣೆಗೆ ಆತ ಮೊದಲಿನಿಂದಲೂ ಕೈಜೋಡಿಸುತಿದ್ದ. ಬುಧವಾರ ಕೂಡ ಹಣ ಕಳುಹಿಸಿ ಒಳ್ಳೇ ರೀತಿ ಮಾತನಾಡಿದ್ದ. ಆತ ಆತ್ಮಹತ್ಯೆ ಮಾಡಿಕೊಳ್ಳುವ ಯುವಕನಲ್ಲ. ಏನೋ ನಡೆದಿದೆ ಎಂಬ ಅನುಮಾನವಿದೆ. ಹೀಗಾಗಿ ಪೊಲೀಸರು ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಪ್ರಶಾಂತ್ ಪೋಷಕರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News