ಕರ್ತವ್ಯ ಲೋಪ; ಉರ್ವ ಠಾಣೆ ಪೊಲೀಸ್ ಅಧಿಕಾರಿಗಳಿಬ್ಬರ ಅಮಾನತು : ಕಮಿಷನರ್ ಶಶಿಕುಮಾರ್

Update: 2021-10-22 14:04 GMT

ಮಂಗಳೂರು, ಅ.22: ಕಾನೂನು ವಿದ್ಯಾರ್ಥಿನಿಗೆ ವಕೀಲರೊಬ್ಬರಿಂದ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿ ಘಟನೆಯ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡದೆ ಕರ್ತವ್ಯಲೋಪ ಹಾಗೂ ನಿರ್ಲಕ್ಷ ವಹಿಸಿದ ಆರೋಪದಲ್ಲಿ ಉರ್ವ ಪೊಲೀಸ್ ಠಾಣೆಯ ಅಧಿಕಾರಿಗಳಿಬ್ಬರ ಮೇಲೆ ಶಿಸ್ತು ಕ್ರಮವನ್ನು ಜಾರಿಗೊಳಿಸಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಕಾನೂನು ವಿದ್ಯಾರ್ಥಿನಿಗೆ ವಕೀಲರೊಬ್ಬರಿಂದ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿ ಸಂತ್ರಸ್ತೆಯ ಸ್ನೇಹಿತೆಯ ದೂರಿನ ಮೇರೆಗೆ ಎಸಿಪಿ(ಸೆಂಟ್ರಲ್) ಪಿ.ಎ. ಹೆಗ್ಡೆ ಅವರ ಪ್ರಾಥಮಿಕ ತನಿಖೆಯ ಆಧಾರದಲ್ಲಿ, ಉರ್ವ ಪೊಲೀಸ್ ಠಾಣೆಯ ಪಿಎಸ್‌ಐ ಶ್ರೀಕಲಾ ಹಾಗೂ ಎಚ್‌ಸಿ ಪ್ರಮೋದ್ ಅವರನ್ನು ಅ. 21ರಂದು ಇಲಾಖಾ ಶಿಸ್ತು ಕ್ರಮ ಬಾಕಿ ಇರಿಸಿ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಉರ್ವ ಠಾಣೆಯ ಪಿಐ ಭಾರತಿಯವರಿಗೆ ಕಾರಣ ಕೇಳುವ ನೋಟೀಸು ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.

ತನ್ನನ್ನು ಉರ್ವ ಪೊಲೀಸ್ ಠಾಣೆಗೆ ಕೊಂಡೊಯ್ದು ಆರೋಪಿ ಪರವಾಗಿ ಹಾಗೂ ತನ್ನ ಸ್ನೇಹಿತೆಯ ಮೇಲಾದ ಘಟನೆಯನ್ನು ನಿರಾಕರಿಸಲು ಒತ್ತಾಯಿಸಿ ದಾಖಲೆಗೆ ಸಹಿ ಹಾಕುವಂತೆ ಮಹಿಳಾ ಜಾಗೃತ ವೇದಿಕೆಯ ಅಧ್ಯಕ್ಷೆ ಪವಿತ್ರಾ ಆಚಾರ್ಯ ಎಂಬವರು ಒತ್ತಾಯಿಸಿದ್ದರು. ಈ ಬಗ್ಗೆ ಕರ್ತವ್ಯದಲ್ಲಿದ್ದ ಅಧಿಕಾರಿಗಳು ತಮ್ಮ ಮೇಲಧಿಕಾರಿಗಳಿಗೆ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಯುವತಿಯ ದೂರಿನ ಮೇರೆಗೆ ಎಸಿಪಿ ಪಿ.ಎ. ಹೆಗ್ಡೆ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News