ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕಚೇರಿ ಉದ್ಘಾಟನೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ

Update: 2021-10-24 17:11 GMT

ಮಂಗಳೂರು, ಅ. 24: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರಾದ್ಯಂತ ತನ್ನ ಪಕ್ಷಕ್ಕೆ ಸದಸ್ಯತ್ವ ಸೇರ್ಪಡೆಯ  ಅಭಿಯಾನವನ್ನು ಕಳೆದ ಅಕ್ಟೋಬರ್ 15 ರಿಂದ ಈ ತಿಂಗಳ 31ರವರೆಗೆ ಹಮ್ಮಿಕೊಂಡಿದ್ದು  ಇದರ  ಪ್ರಯುಕ್ತ ಕರ್ನಾಟಕ ರಾಜ್ಯದಲ್ಲಿಯೂ ಹೊಸ ಸದಸ್ಯರ ನೋಂದಾವಣೆಯ ಪ್ರಕ್ರಿಯೆಯು ಅರಂಭಗೊಂಡಿದೆ.  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೂಡಾ ಹೊಸ ಸದಸ್ಯರ ಸೇರ್ಪಡೆ ಚಟುವಟಿಕೆ ಬಿರುಸಾಗಿಯೇ ಸಾಗುತ್ತಿದೆಯೆಂದು ಪಕ್ಷದ ಜಿಲ್ಲಾಧ್ಯಕ್ಷರಾಗಿರುವ ಅಡ್ವೋಕೇಟ್ ಸರ್ಫರಾಜ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದರ ಪ್ರಯುಕ್ತ ವೆಲ್ಫೇರ್ ಪಕ್ಷದ ಕರ್ನಾಟಕ ರಾಜ್ಯಾಧ್ಯಕ್ಷರಾಗಿರುವ ಅಡ್ವೋಕೇಟ್ ತಾಹೀರ್ ಹುಸೇನ್ ಅವರು ರಾಜ್ಯವ್ಯಾಪಿ ಪ್ರವಾಸವನ್ನು ಕೈಗೊಂಡಿದ್ದು, ಇದರ ಭಾಗವಾಗಿ ಇತ್ತೀಚೆಗೆ ಮಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ, ಪಕ್ಷದ ಕಾರ್ಯಕರ್ತರು ಸ್ವಾಗತಿಸಿದರು.

ನಗರದ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದ್ದು, ಅದರಲ್ಲಿ ಮುಖ್ಯವಾಗಿ ಪ್ರಸಕ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ, ಸೌಹಾರ್ದತೆ ಮತ್ತು ಸಾಮರಸ್ಯದಿಂದ ಬದುಕುವ ಜನರ ಶಾಂತಿ ಕದಡುವ ಕೆಲವಾರು ಘಟನೆಗಳು ಸಂಭವಿಸಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು ಮತ್ತು ಇಷ್ಟೊಂದು ಸಂದರ್ಭದಲ್ಲಿ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವ ಹೊಣೆಯನ್ನು ಹೊಂದಿರುವ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಯವರು,  ಚಾಲ್ತಿಯಲ್ಲಿರುವ 'ನೈತಿಕ ಪೊಲೀಸ್ ಗಿರಿ' ಎಂಬ ಹೆಸರಿನ, ತೀರಾ ಅನೈತಿಕ ಗೂಂಡಾಗಿರಿಯನ್ನೇ ಬೆಂಬಲಿಸಿದ ರೀತಿಯಲ್ಲಿನ, "ಕ್ರಿಯೆಗೆ ಪ್ರತಿಕ್ರಿಯೆ" ಎನ್ನುವ ಮೂಲಕ ಕ್ರಿಮಿನಲ್ ಗಳನ್ನು ಸಮರ್ಥಿಸಿದಂತಹ ಅವರ ಪತ್ರಿಕಾ ಹೇಳಿಕೆಯು ನಿಜಕ್ಕೂ ವಿಷಾದನೀಯ ಮಾತ್ರವಲ್ಲ ಪ್ರಜಾಪ್ರಭುತ್ವದ ವಿಪರ್ಯಾಸವಾಗಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರದ ಇಂಧನ ಬೆಲೆ ಏರಿಕೆಯಿಂದ, ಸರಕು ಸಾಗಣೆ ವೆಚ್ಚವೂ ದುಬಾರಿಯಾಗಿದ್ದು, ಹೀಗೆ ಇಂದು ಆಹಾರ ವಸ್ತುಗಳು ಕೂಡಾ ತುಟ್ಟಿಯಾಗಿ ಒಟ್ಟಿನಲ್ಲಿ ಜನಸಾಮಾನ್ಯರು ತಮ್ಮ ದೈನಂದಿನ ಬದುಕು ಕಟ್ಟಿಕೊಳ್ಳಲು ಪಡುತ್ತಿರುವ ಬವಣೆಯನ್ನು ಕೇಳುವವರೇ ಇಲ್ಲದಂತಾಗಿದೆ. ಇಂದು ನಮ್ಮ ದೇಶದ ಪರಿಸ್ಥಿತಿ ಅದೊಂದು ವಿಧದ ಅಘೋಷಿತ ಸರ್ವಾಧಿಕಾರದ ನೆಲೆಯಲ್ಲಿದ್ದು ವಿಪಕ್ಷಗಳು ಕೂಡಾ ಇಂದು ನಾಮ ಮಾತ್ರವಾಗಿ ಉಳಿದಂತಹ ಸನ್ನಿವೇಶದಲ್ಲಿದೆ. ಇಂತಹ ಸಂದಿಗ್ಧತೆಯಲ್ಲಿ ದೇಶದ ಭವ್ಯ ಪರಂಪರೆಯೊಂದಿಗೆ ಸಾಮರಸ್ಯ ಸಾರುವ ಸಮಾಜವನ್ನು ಕಾಪಾಡಿಕೊಂಡು, ಪ್ರಜಾಪ್ರಭುತ್ವದ ಸಿದ್ದಾಂತದ ಉಳಿವಿಗಾಗಿ, ನಮ್ಮ ಪಕ್ಷವು ದೇಶದ ನಾಗರಿಕರಲ್ಲಿ ಮೌಲ್ಯಾಧಾರಿತ ರಾಜಕೀಯ ಜಾಗೃತಿಯನ್ನು ಮೂಡಿಸುವ ಸಲುವಾಗಿ ಅಸ್ತಿತ್ವಕ್ಕೆ ಬಂದಿದೆ ಎಂದವರು ಹೇಳಿದರಲ್ಲದೆ, ನಮ್ಮ ಪಕ್ಷವು ಸಮಾಜದ ಸರ್ವ ಜನಸಾಮಾನ್ಯರ ಮೂಲಭೂತ ಬೇಡಿಕೆಗಳಾದ, ಸರ್ವರಿಗೂ ಆರೋಗ್ಯ ಮತ್ತು ಶಿಕ್ಷಣ ಅಲ್ಲದೆ ಬಡತನ ಮುಕ್ತ ಮತ್ತು ಯಾವುದೇ ಬಗೆಯ ಮತೀಯ ವಾದಗಳಿಗೆ ವಿರುದ್ಧವಾಗಿರುವ, ಭೀತಿ ಮುಕ್ತ ದೇಶ ನಿರ್ಮಾಣಕ್ಕೆ, ಕಟಿಬದ್ಧವಾಗಿದೆ ಹಾಗೂ ಇದೀಗ ಅದಕ್ಕಾಗಿ ಪಕ್ಷವು ರಾಷ್ಟ್ರೀಯ ಮಟ್ಟದಲ್ಲಿಯೇ ಸದಸ್ಯತ್ವ ಸೇರ್ಪಡೆ ಅಭಿಯಾನವನ್ನು ಆರಂಭಿಸಿದೆ, ಆದ್ದರಿಂದ ಸಮಾಜದ ಎಲ್ಲಾ ವರ್ಗದ ಸಮಾನ ಮನಸ್ಕ ಜನರೂ ನಮ್ಮ ಸದಸ್ಯತ್ವ ಅಭಿಯಾನ ಕಾರ್ಯಾಗಾರದಲ್ಲಿ ಕೈ ಜೋಡಿಸಿರಿ,  ಪಕ್ಷದ ಸದಸ್ಯತನ ಪಡೆಯುವ ಮೂಲಕ ದೇಶದ ಪ್ರಜಾಪ್ರಭುತ್ವದ  ಮೌಲ್ಯಗಳನ್ನು ಉಳಿಸಲು ಮತ್ತು ಬೆಳೆಸಲು ಸಹಕರಿಸಿ ಎಂದರು.

ಅಪರಾಹ್ನ ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಳಿಯಿರುವ ಪಕ್ಷದ ಕಚೇರಿ ವೆಲ್ಫೇರ್ ಭವನದಲ್ಲಿ ಕಾರ್ಯಕರ್ತರ ಸಭೆಯ ನಂತರ, ಕಾರ್ಯಕರ್ತರ ವಾಹನ ಜಾಥಾದೊಂದಿಗೆ ರಾಜ್ಯಾಧ್ಯಕ್ಷರನ್ನು ತೆರೆದ ವಾಹನದಲ್ಲಿ ಪಕ್ಷದ ಉಳ್ಳಾಲ ನಗರ ಸಮಿತಿ ಕಚೇರಿ ಮತ್ತು ನಾಗರಿಕ ಸೇವಾ ಕೇಂದ್ರದ ಉದ್ಘಾಟನಾ ಸಮಾರಂಭಕ್ಕಾಗಿ ಕರೆತರಲಾಯಿತು.

ಉಳ್ಳಾಲ ನಗರ ವ್ಯಾಪ್ತಿಯಲ್ಲಿರುವ ತೊಕ್ಕೊಟ್ಟು ಸಹಾರ ಆಸ್ಪತ್ರೆ ಬಳಿಯಲ್ಲಿನ ಹೈಲಾಂಡ್ ವಾಣಿಜ್ಯ ಸಂಕೀರ್ಣದ ಒಂದನೇ ಮಹಡಿಯಲ್ಲಿ, ವೆಲ್ಫೇರ್ ಪಕ್ಷದ ಉಳ್ಳಾಲ ನಗರ ಸಮಿತಿ ಕಚೇರಿ ಮತ್ತು ನಾಗರಿಕ ಸೇವಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂದು ಅಲ್ಲಲ್ಲಿ ನಾಗರಿಕ ಸೇವಾ ಕೇಂದ್ರವನ್ನು ಸ್ಥಾಪಿಸಬೇಕಾದ ಅನಿವಾರ್ಯ ಬಂದಿರುವುದು ಸರ್ಕಾರದ ವೈಫಲ್ಯವಾಗಿದೆ, ಸರಕಾರದ ಸೌಲಭ್ಯಗಳು ಸರಳವಾಗಿ ನಾಗರಿಕರಿಗೆ ತಲುಪದಿರುವ ಕಾರಣ ಜನಸಾಮಾನ್ಯರು ಇಷ್ಟೊಂದು ಸೇವಾ ಕೇಂದ್ರದ ಮೊರೆ ಹೋಗುವ ಪರಿಸ್ಥಿತಿ ಎದುರಾಗಿರುವುದು ದುರಂತವಾಗಿದೆ, ಅದೇನಿದ್ದರೂ ಸದಾ ನಿಸ್ವಾರ್ಥ ಸಮಾಜ ಸೇವೆಯಲ್ಲಿ ನಿರತರಾಗಿರುವ ನಮ್ಮ ಪಕ್ಷದ ಉತ್ಸಾಹಿ ಯುವಕರ ತಂಡ ಹೀಗೊಂದು ಜನಸೇವಾ ಕಾರ್ಯಾಲಯಕ್ಕೆ ಇಲ್ಲಿ ಚಾಲನೆ ನೀಡಿರುವುದು ಶ್ಲಾಘನೀಯ ಎಂದರು.

ಇದೇ ಸಂದರ್ಭದಲ್ಲಿ ಕಳೆದ ಕೋವಿಡ್ ಸಂಕಷ್ಟ ಕಾಲದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಮತ್ತು ಇತರ ಎಲ್ಲಾ ವಿಧದಲ್ಲೂ  ನೆರವಾಗಿರುವುದಲ್ಲದೆ ನೂರಕ್ಕೂ ಅಧಿಕ ಕೋವಿಡ್ ಕಾರಣದಿಂದ ಮೃತರಾದವರ ಆಂತ್ಯಸಂಸ್ಕಾರವನ್ನು ನೆರವೇರಿಸುವಲ್ಲಿ ಮುತುವರ್ಜಿ ವಹಿಸಿದ ಕೊರೋನ ವಾರಿಯರ್ಸ್, ಸಾಮಾಜಿಕ ಕಾರ್ಯಕರ್ತರಾದ ಸೆಯ್ಯದ್ ಶಿಹಾಬುದ್ದೀನ್ ಮತ್ತು ಝಮೀರ್ ಅಹಮದ್ ರವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ರಾಜ್ಯಾಧ್ಯಕ್ಷರಾದ ಅಡ್ವಕೇಟ್ ತಾಹೀರ್ ಹುಸೇನ್, ಉಪಾಧ್ಯಕ್ಷರಾದ  ಶ್ರೀಕಾಂತ್ ಸಾಲ್ಯಾನ್, ರಾಜ್ಯ ಕಾರ್ಯದರ್ಶಿ ಮೊಹಿನ್ ಕಮರ್, ಎ. ಎಚ್.ಮಹ್ಮೂದ್, ಉದ್ಯಮಿ ಕೋಟೆಕಾರ್, ಅಬ್ದುಲ್ ಖಾದರ್ ಉದ್ಯಮಿ ತೊಕೊಟ್ಟು,  ಪಕ್ಷದ ಜಿಲ್ಲಾಧ್ಯಕ್ಷ ಸರ್ಫರಾಝ್. ಜಿಲ್ಲಾ ವಕ್ತಾರ ಎಸ್. ಎಮ್. ಮುತ್ತಲಿಬ್  ಪಕ್ಷದ ಉಳ್ಳಾಲ ನಗರ ಸಮಿತಿಯ ಅಧ್ಯಕ್ಷ ತೌಸೀಫ್  ಉಳ್ಳಾಲ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News