ಪೆಗಾಸಸ್ ಬೇಹುಗಾರಿಕೆ ಪ್ರಕರಣ: ಬುಧವಾರ ಸುಪ್ರೀಂ ಕೋರ್ಟ್ ತೀರ್ಪು
Update: 2021-10-26 16:10 GMT
ಹೊಸದಿಲ್ಲಿ, ಅ. 26: ಪೆಗಾಸಸ್ ಬೇಹುಗಾರಿಕೆ ಪ್ರಕರಣದ ಕುರಿತಂತೆ ಸ್ವತಂತ್ರ ತನಿಖೆ ಕೋರಿ ಸಲ್ಲಿಸಿದ ಮನವಿಯ ಗುಚ್ಛದ ತೀರ್ಪನ್ನು ಸುಪ್ರೀಂ ಕೋರ್ಟ್ ನಾಳೆ ಘೋಷಿಸಲಿದೆ. ಪೆಗಾಸಸ್ ಹಗರಣದ ತನಿಖೆ ಕೋರಿ ಸಲ್ಲಿಸಿದ ಅರ್ಜಿಗಳ ಮೇಲಿನ ತೀರ್ಪನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಹಾಗೂ ನ್ಯಾಯಮೂರ್ತಿಗಳಾದ ಸೂರ್ಯಕಾಂತ ಹಾಗೂ ಹಿಮಾ ಕೊಹ್ಲಿ ಅವರನ್ನು ಒಳಗೊಂಡ ಪೀಠ ಸೆಪ್ಟಂಬರ್ 13ರಂದು ಕಾಯ್ದಿರಿಸಿತ್ತು.
ಕೇಂದ್ರ ಸರಕಾರವು ಪೆಗಾಸಸ್ ಸ್ಪೈವೇರ್ ಅನ್ನು ಕಾನೂನು ಬಾಹಿರ ವಿಧಾನಗಳ ಮೂಲಕ ನಾಗರಿಕರ ಮೇಲೆ ಗೂಢಚರ್ಯೆ ನಡೆಸಲು ಬಳಸಿದೆಯೇ ಅಥವಾ ಇಲ್ಲವೇ ಎಂಬುದನ್ನು ಮಾತ್ರ ತಿಳಿಯಬೇಕಿದೆ ಎಂದು ಅದು ಹೇಳಿತ್ತು. ರಾಷ್ಟ್ರೀಯ ಭದ್ರತೆ ಉಲ್ಲೇಖಿಸಿ, ಈ ವಿಷಯದಲ್ಲಿ ವಿವರವಾದ ಅಫಿಡಾವಿಟ್ ಸಲ್ಲಿಸಲು ಕೇಂದ್ರ ನಿರಾಕರಿಸಿದೆ.