ಉಡುಪಿ: ಅ.30ಕ್ಕೆ ತಾಳ್ತಜೆ ಪ್ರಶಸ್ತಿ ಪ್ರದಾನ
ಉಡುಪಿ, ಅ. 26: ತಾಳ್ತಜೆ ಕೇಶವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಅ.30ರ ಶನಿವಾರ ಎಂ.ಜಿ.ಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ. ಇದರಲ್ಲಿ 2020 ಹಾಗೂ 2021ರ ಸಾಲಿನ ಪ್ರಶಸ್ತಿಗಳನ್ನು ಬಹುಮುಖ ಸಾಧಕರಾದ ಡಾ. ಎಸ್.ಡಿ ಶೆಟ್ಟಿ ಹಾಗೂ ಡಾ.ಪಾದೇಕಲ್ಲು ವಿಷ್ಣು ಭಟ್ಟರಿಗೆ ಪ್ರದಾನ ಮಾಡಲಾಗುವುದು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಹೆಯ ಕುಲಸಚಿವ ಡಾ.ನಾರಾಯಣ ಸಭಾಹಿತ್ ವಹಿಸಲಿದ್ದು, ಕಾರ್ಕಳ ಭುವನೇಂದ್ರ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ. ಅರುಣ್ ಕುಮಾರ್ ಎಸ್.ಆರ್ ಪುರಸ್ಕೃತರನ್ನು ಅಭಿನಂದಿಸಲಿದ್ದಾರೆ. ಜಾನಪದ ವಿವಿಯ ವಿಶ್ರಾಂತ ಕುಲಪತಿ ಡಾ.ಕೆ.ಚಿನ್ನಪ್ಪ ಗೌಡ ಅವರು ‘ಪಾಡ್ದನಗಳು -ಶ್ಲೇಷಣೆಯ ಹೊಸ ನೆಲೆಗಳು’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿರುವರು. ಪ್ರಶಸ್ತಿ ಸಮಿತಿಯ ಸದಸ್ಯರಾದ ಪ್ರೊ. ತಾಳ್ತಜೆ ವಸಂತ ಕುಮಾರ್ ಹಾಗೂ ಟಿ.ಕೆ ರಘುಪತಿ ಉಪಸ್ಥಿತರಿರುವರು.
ಇದೇ ಸಂದರ್ಭದಲ್ಲಿ ಹಿರಿಯ ಲೇಖಕರಾದ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗಳು ರಚಿಸಿದ ’ಪುರಾಣಕಥಾ ಚಿಂತಾರತ್ನ’ ಕೃತಿ ಅನಾವರಣಗೊಳ್ಳಲಿದೆ. ಡಾ.ಪಾದೇಕಲ್ಲು ವಿಷ್ಣು ಭಟ್ಟರು ಕೃತಿ ಪರಿಚಯ ಮಾಡಲಿದ್ದಾರೆ ಎಂದು ಕಾರ್ಯಕ್ರಮ ಸಂಘಟಕರ ಪ್ರಕಟಣೆ ತಿಳಿಸಿದೆ.