ಶಿಖರದಿಂದ ಸಾಗರದವರೆಗೆ ಐವರು ಯುವತಿಯರ ಸಾಹಸ ಯಾತ್ರೆ; 300ಕಿ.ಮೀ. ಕಯಾಕಿಂಗ್ ಯಾನ ಹೊರಟ ತಂಡಕ್ಕೆ ಮಲ್ಪೆಯಲ್ಲಿ ಸ್ವಾಗತ

Update: 2021-10-28 16:33 GMT

ಉಡುಪಿ, ಅ.28: ಭಾರತದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಶಿಖರದಿಂದ ಸಾಗರ ಐತಿಹಾಸಿಕ ಯಾನ ದಲ್ಲಿ ಭಾಗಿಯಾಗಿರುವ ಕರ್ನಾಟಕದ ಕರಾವಳಿ ಕಾರವಾರದಿಂದ 300ಕಿ.ಮೀ ಸಮುದ್ರದಲ್ಲಿ ಕಯಾಕಿಂಗ್ ಯಾನ ಮಾಡುತ್ತಿರುವ ಐವರು ಕರ್ನಾಟಕ ರಾಜ್ಯದ ಯುವತಿಯರ ತಂಡ ಇಂದು ಮಲ್ಪೆ ಸಮುದ್ರ ತೀರಕ್ಕೆ ಆಗಮಿಸಿತು.

ಕಾಶ್ಮೀರದಲ್ಲಿ ಕೊಲ್ಲೋಹಿ (5425 ಮೀ) ಶಿಖರವನ್ನು ಯಸ್ವಿಯಾಗಿ ಏರಿ, ನಂತರ ಲಡಾಖ್‌ನಿಂದ 3,000 ಕಿ.ಮೀ ಸೈಕಲ್ ಯಾನ ಮಾಡಿ, ಕಾರವಾರ ತಲುಪಿರುವ ಈ ತಂಡ, ಇದೀಗ ಕಯಾ ಕಿಂಗ್ ಯಾನ ಹೊರಟಿದೆ. ಈ ಐತಿಹಾಸಿಕ ಯಾನದಲ್ಲಿರುವ ಶಿವಮೊಗ್ಗದ ಐಶ್ವರ್ಯ ವಿ., ಧನಲಕ್ಷ್ಮೀ, ಬೆಂಗಳೂರಿನ ಆಶಾ, ಮಡಿಕೇರಿಯ ಪುಪ್ಪ, ಮೈಸೂರಿನ ಬಿಂದು ಅವರನ್ನು ಮಲ್ಪೆ ಸಮದ್ರ ತೀರದಲ್ಲಿ ಜಿಲ್ಲಾಡಳಿತದ ಪರವಾಗಿ ಸ್ವಾಗತಿಸಲಾಯಿತು.

ಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ತಂಡವನ್ನು ಸ್ವಾಗತಿಸಿ ಮಾತನಾಡಿ, ಯುವತಿಯರು ಸಾಹಸ ಕ್ರೀಡೆಗಳಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸುವುದರ ಜೊತೆಗೆ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತು ಓಲಂಪಿಕ್‌ನಲ್ಲಿ ಉತ್ತಮ ಸಾಧನೆಯನ್ನು ಮಾಡುವ ದಿಟ್ಟ ನಿರ್ಧಾರ ಮಾಡಬೇಕು. ಇವರ ಸಾಹಸ ಗುಣಗಳು, ಛಲ ರಾಜ್ಯದ ಎಲ್ಲಾ ಯುವತಿಯರು ಮತ್ತು ಮಹಿಳೆಯರಿಗೂ ಮಾದರಿಯಾಗಬೇಕು ಎಂದರು.

ತಮ್ಮ ಈ ಸಾಹಸ ಯಾತ್ರೆಯ ಅನುಭವ ಹಂಚಿಕೊಂಡ ಯುವತಿಯರು, ಶಿಖರವೇರುವ ಸಂದರ್ಭದಲ್ಲಿ 25 ಕೆಜಿಗೂ ಅಧಿಕ ಬಾರದ ಬ್ಯಾಗ್‌ಗಳನ್ನು ಹೊತ್ತುಕೊಂಡು, ಜೀವವನ್ನು ಪಟಕ್ಕಿಟ್ಟು ಸಾಹಸ ಮಾಡಿದ್ದೇವೆ. ಯಾನದಲ್ಲಿ ತಮ್ಮ ಎಲ್ಲಾ ಅಗತ್ಯತೆಗಳಿಗೆ ಯಾರನ್ನೂ ಅವಲಂಬಿಸದೇ ತಾವೇ ಸ್ವತ: ಅಡುಗೆ ಮಾಡುವುದು ಸೇರಿದಂತೆ ಟೆಂಟ್‌ಗಳನ್ನು ಹಾಕುವ ಕೆಲಸಗಳನ್ನು ಮಾಡಿದ್ದೇವೆ. ಶಿಖರವನ್ನು ನಿಗದಿತ ಅವಧಿಗಿಂತ ಮುಂಚಿತವಾಗಿಯೇ ಏರಿ ಸಾಧನೆ ಮಾಡಿದ್ದೇವೆ ಎಂದರು.

ಉಡುಪಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕ್ಲಿಪರ್ಡ್ ಲೋಬೋ, ಸಾಹಸ ಯಾತ್ರೆಯ ಮಾರ್ಗದರ್ಶಕ ಶಬ್ಬೀರ್ ಮೊದಲಾದವರು ಉಪಸ್ಥಿತರಿದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್‌ಕುಮಾರ್ ಶೆಟ್ಟಿ ಸ್ವಾಗತಿಸಿ ವಂದಿಸಿದರು.

ಭಾರತೀಯ ಪರ್ವತರೋಹಣ ಸಂಸ್ಥೆಯ ದಕ್ಷಿಣ ವಲಯ ಹಾಗೂ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯ ಸಹಯೋಗದೊಂದಿಗೆ ನಡೆಸುತ್ತಿರುವ ಈ ಯಾನವನ್ನು ಆ.16ರಂದು ಧ್ವಜಾರೋಹಣ ಮಾಡಿದ್ದು, ಕಯಾ ಕಿಂಗ್ ಯಾನದ ಮೂಲಕ ಮಂಗಳೂರಿನಲ್ಲಿ ಮುಕ್ತಾಯಗೊಳ್ಳಲಿದೆ.

ಉಡುಪಿ ಜಿಲ್ಲೆಯಲ್ಲಿಯೂ ಕೂಡ ಸಾಹಸ ಕಾರ್ಯಕ್ರಮಗಳ ತರಬೇತಿಗೆ ಈಗಾಗಲೇ ಪಡುಕೆರೆಯೆಲ್ಲಿ ಸ್ಥಳ ಗುರುತಿಸಲಾಗಿದ್ದು, ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿಯ ಮೂಲಕ ಇಲ್ಲೂ ಸಹ ಸಾಹಸ ಕ್ರೀಡೆಗಳ ತರಬೇತಿ ಕೇಂದ್ರ ಆರಂಭವಾಗಲಿದೆ. ಜಿಲ್ಲೆಯ ಯುವ ಜನತೆಯ ಈ ಕೇಂದ್ರದ ಪ್ರಯೋಜನ ಪಡೆಯಬೇಕು.

-ಡಾ.ನವೀನ್ ಭಟ್, ಸಿಇಓ, ಜಿಪಂ

ಲಡಾಖ್‌ನಿಂದ ನಡೆಸಿದ ಸೈಕ್ಲಿಂಗ್ ಪ್ರಯಾಣದಲ್ಲಿ ಕಂಡು ಬಂದ ವಿವಿಧ ಪ್ರದೇಶದಲ್ಲಿನ ಯುವತಿಯರು ಮತ್ತು ಮಹಿಳೆಯರ ಸಮಸ್ಯೆಗಳನ್ನು ಕಂಡಿದ್ದು, ಮಹಿಳೆಯರು ಮನೆಯಿಂದ ಹೊರಬಂದು ಸಾಹಸಿಗಳಾಗಬೇಕು ಎನ್ನುವ ಉದ್ದೇಶದಿಂದ ಮುಂದಿನ ದಿನದಲ್ಲಿ ಅರಿವು ಕಾರ್ಯಕ್ರಮಗಳನ್ನು ಮಾಡುವ ಉದ್ದೇಶ ಇದೆ.

-ಸಾಹಸಿ ಯುವತಿಯರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News