ಕಾನೂನಿನ ಬಗ್ಗೆ ಅರಿತುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ: ನ್ಯಾ. ಶಿಲ್ಪಾ ಜಿ.ತಿಮ್ಮಾಪುರ್
ಬಂಟ್ವಾಳ, ನ.9: ದೇಶದ ಪ್ರತಿಯೊಬ್ಬ ನಾಗರಿಕನಿಗೂ ಕಾನೂನಿನ ಅರಿವು ಅತಿ ಅಗತ್ಯವಾಗಿದ್ದು ತಪ್ಪು ಮಾಡಿದ ಬಳಿಕ ಆತ ಕಾನೂನಿನ ಪ್ರಕಾರ ಶಿಕ್ಷೆ ಅನುಭವಿಸಲೇಬೇಕು. ಹೀಗಾಗಿ ಕಾನೂನನ್ನು ತಿಳಿದುಕೊಳ್ಳುವುದು ಪ್ರಜ್ಞಾವಂತ ನಾಗರಿಕನ ಕರ್ತವ್ಯವಾಗಿದೆ ಎಂದು ಬಂಟ್ವಾಳ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಶಿಲ್ಪಾ ಜಿ.ತಿಮ್ಮಾಪುರ್ ಹೇಳಿದರು.
ಅವರು ಮಂಗಳವಾರ ಪುದು ಗ್ರಾ.ಪಂ. ಸಭಾಂಗಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ಬಂಟ್ವಾಳ ವಕೀಲರ ಸಂಘ, ಪುದು ಗ್ರಾ.ಪಂ. ಹಾಗೂ ಸರಕಾರದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಅಜಾದಿ ಕಾ ಅಮೃತ ಮಹೋತ್ಸವದ ಕಾನೂನು ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ಕಾನೂನು ಅರಿವು- ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಅಧ್ಯಕ್ಷತೆ ವಹಿಸಿದ್ದ ಪುದು ಗ್ರಾ.ಪಂ. ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಮಾತನಾಡಿದರು.
ನ್ಯಾಯವಾದಿ ಕೆ.ರಮೇಶ್ ಉಪಾಧ್ಯಾಯ ಅವರು ಹಿರಿಯ ನಾಗರಿಕರ ಹಕ್ಕುಗಳು ಮತ್ತು ಎಂಡೋಸಲ್ಪಾನ್ ಪೀಡಿತರ ಸವಲತ್ತುಗಳ ಕುರಿತು ಉಪನ್ಯಾಸ ನೀಡಿ, ಸಮಾಜವನ್ನು ಬದುಕಿಸುವುದೇ ಕಾನೂನು ಆಗಿದ್ದು, ಪ್ರತಿ ವಿಭಾಗಕ್ಕೂ ಅದರದ್ದೇ ಕಾನೂನುಗಳಿರುತ್ತವೆ. ಕೊಂಚ ದುರ್ಬಲವನ್ನು ವರ್ಗವನ್ನು ಮೇಲೆತ್ತುವ ದೃಷ್ಟಿಯಿಂದ ಕಾನೂನು ರೂಪಿಸಲು ಸಂವಿಧಾನದಲ್ಲಿ ಅವಕಾಶ ನೀಡಲಾಗಿದ್ದು, ಈ ಕುರಿತು ಪ್ರತಿಯೊಬ್ಬರಿಗೂ ತಿಳುವಳಿಕೆ ಅಗತ್ಯವಾಗಿದೆ. ಹಿರಿಯ ನಾಗರಿಕರನ್ನು ವೃದ್ಧಾಪ್ಯದಲ್ಲಿ ನೋಡಿಕೊಳ್ಳುವ ವಿಚಾರದಲ್ಲಿಯೂ ಪ್ರತ್ಯೇಕ ಕಾನೂನಿನಲ್ಲಿ ಅವಕಾಶವಿದ್ದು, ಆಸ್ತಿಯ ವಿಚಾರದಲ್ಲಿಯೂ ವಿಶೇಷ ಕಾನೂನುಗಳಿರುತ್ತವೆ ಎಂದರು.
ಜಿಲ್ಲಾ ಎಂಡೋ ಸಲ್ಫಾನ್ ಕೋಶದ ಸಂಯೋಜಕ ಸಾಜುದ್ದೀನ್ ಅವರು ಎಂಡೋ ಸಂತ್ರಸ್ತರ ಸೌಲಭ್ಯಗಳ ಕುರಿತು ವಿವರಿಸಿದರು.
ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಲಿಡಿಯಾ ಪಿಂಟೋ, ಬಂಟ್ವಾಳ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಬಂಟ್ವಾಳ ವಕೀಲರ ಸಂಘದ ಉಪಾಧ್ಯಕ್ಷ ಮೋಹನ ಪ್ರಭು ಕೆ., ಸಹಾಯಕ ಸರಕಾರಿ ಅಭಿಯೋಜಕಿ ಹರಿಣಿ ಕುಮಾರಿ ಡಿ, ಬಂಟ್ವಾಳ ಗ್ರಾಮಾಂತರ ಠಾಣಾ ಪಿಎಸ್ಐ ಪ್ರಸನ್ನ ಎಂ.ಎಸ್., ಪುದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುದರ್ಶನ್, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೀಲಾವತಿ, ಉಪ ತಹಶೀಲ್ದಾರ್ ನವೀನ್ ಬೆಂಜನಪದವು, ಗ್ರಾಮಕರಣಿಕೆ ನವ್ಯಾ ರಾವ್ ಮೊದಲಾದವರು ಉಪಸ್ಥಿತರಿದ್ದರು.
ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಹರೀಶ್ ಕೆ.ಎ. ಸ್ವಾಗತಿಸಿ, ವಂದಿಸಿದರು.