ನೆಲ್ಯಾಡಿ: ಕೆರೆಗೆ ಬಿದ್ದು ಪಿಯುಸಿ ವಿದ್ಯಾರ್ಥಿನಿ ಮೃತ್ಯು
Update: 2021-11-15 05:48 GMT
ನೆಲ್ಯಾಡಿ: ಪಿಯುಸಿ ವಿದ್ಯಾರ್ಥಿನಿ ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಕೊಣಾಲು ಗ್ರಾಮದ ಅಂಬರ್ಜೆ ಎಂಬಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.
ಅಂಬರ್ಜೆ ನಿವಾಸಿ ಮೋಹನ ಎಂಬವರ ಪುತ್ರಿ, ರಾಮಕುಂಜೇಶ್ವರ ಪ.ಪೂ. ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿ ಶ್ರೇಯಾ (18) ಮೃತರು ಎಂದು ಗರುತಿಸಲಾಗಿದೆ.
ಶ್ರೇಯಾ ಇಂದು ಬೆಳಗ್ಗೆ ತಮ್ಮ ಮನೆ ಸಮೀಪದ ಕೆರೆಗೆ ತಾವರೆ ಹೂ ಬಿಡಲೆಂದು ಹೋಗಿದ್ದ ವೇಳೆ ಆಕಸ್ಮಿಕವಾಗಿ ಕಾಲುಜಾರಿ ಕೆರೆಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಕೆರೆಗೆ ತಾವರೆ ಹೂ ಬಿಡಲು ಹೋಗುವುದಾಗಿ ಹೇಳಿಹೋಗಿದ್ದ ಶ್ರೇಯಾ ಹಿಂತಿರುಗಿ ಬರದೇ ಇದ್ದ ಹಿನ್ನೆಲೆಯಲ್ಲಿ ಮನೆಯವರು ಕೆರೆಯ ಕಡೆ ಹೋಗಿದ್ದ ವೇಳೆ ಶ್ರೇಯಾ ಕೆರೆ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.