×
Ad

40 ಲ.ರೂ.ವಂಚನೆ ಪ್ರಕರಣ: ಪಿಎನ್‌ಬಿಯ ಹಿರಿಯ ವ್ಯವಸ್ಥಾಪಕ, ಇತರ ಇಬ್ಬರಿಗೆ ಐದು ವರ್ಷ ಜೈಲು

Update: 2021-11-15 21:47 IST

ಅಹ್ಮದಾಬಾದ್,ನ.15: ಬ್ಯಾಂಕಿಗೆ 40 ಲ.ರೂ.ಗಳನ್ನು ವಂಚಿಸಿದ್ದಕ್ಕಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ( ಪಿಎನ್‌ಬಿ)ನ ಹಿರಿಯ ವ್ಯವಸ್ಥಾಪಕ ಸಂಜೀವ್ ಕಮಲಾಕರ ಇನಾಮದಾರ್ ಹಾಗೂ ಉದ್ಯಮಿಗಳಾದ ಮಯಾಂಕ್ ಬಚ್ಚುಭಾಯಿ ಶಾ ಮತ್ತು ರಿಕಿನ್ ಬಚ್ಚುಭಾಯಿ ಶಾ ಅವರಿಗೆ ಇಲ್ಲಿಯ ವಿಶೇಷ ಸಿಬಿಐ ನ್ಯಾಯಾಲಯವು ಐದು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

ನ್ಯಾಯಾಲಯವು ಇನಾಮದಾರ್ ಗೆ 7.5 ಲ.ರೂ.ಹಾಗೂ ಗುಜರಾತಿನ ಜೈನಲ್ ಎಂಟರ್‌ಪ್ರೈಸಸ್‌ನ ಮಾಲಕರಾದ ಶಾ ಸೋದರರಿಗೆ ತಲಾ ಏಳು ಲ.ರೂ.ಗಳ ದಂಡವನ್ನೂ ವಿಧಿಸಿದೆ.

ಸ್ಥಿರಾಸ್ತಿಗಳನ್ನು ಭೌತಿಕವಾಗಿ ಪರಿಶೀಲಿಸದೆ ಫೋರ್ಜರಿ ದಾಖಲೆಗಳ ಆಧಾರದಲ್ಲಿ ಮಯಾಂಕ್ ಶಾಗೆ 40 ಲ.ರೂ.ಗಳ ಅಡಮಾನ ಸಾಲ ಸೌಲಭ್ಯವನ್ನು ಮಂಜೂರು ಮಾಡಿದ್ದಕ್ಕಾಗಿ ಸಿಬಿಐ 2004,ಡಿ.2ರಂದು ಬ್ಯಾಂಕ್ ಅಧಿಕಾರಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿತ್ತು. ತನಿಖೆಯ ಬಳಿಕ 2006,ಅ.6ರಂದು ಆರೋಪಿಗಳ ವಿರುದ್ಧ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿತ್ತು. ವಿಚಾರಣೆಯ ಸಂದರ್ಭದಲ್ಲಿ ಮೂವರ ತಪ್ಪು ಸಾಬೀತಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News