ಅಂಬಾಲದ ಕೇಂದ್ರ ಕಾರಾಗೃಹದ ಮಣ್ಣಿನಿಂದ ಗೋಡ್ಸೆ ಪ್ರತಿಮೆ ನಿರ್ಮಿಸಲಿರುವ ಹಿಂದೂ ಮಹಾಸಭಾ

Update: 2021-11-16 17:14 GMT
ಫೈಲ್ ಚಿತ್ರ

ಗ್ವಾಲಿಯರ್, ನ. 16: ಮಹಾತ್ಮಾ ಗಾಂಧಿ ಅವರನ್ನು ಹತ್ಯೆಗೈದಿರುವುದಕ್ಕೆ ನಾಥುರಾಂ ಗೋಡ್ಸೆಯನ್ನು 1949ರಲ್ಲಿ ಗಲ್ಲಿಗೇರಿಸಲಾದ ಹರ್ಯಾಣದ ಅಂಬಾಲದ ಕೇಂದ್ರ ಕಾರಾಗೃಹದಿಂದ ಮಣ್ಣು ತಂದು ಗೋಡ್ಸೆಯ ಪ್ರತಿಮೆ ತಯಾರಿಸಲಾಗುವುದು ಎಂದು ಹಿಂದೂ ಮಹಾಸಭಾ ಮಂಗಳವಾರ ಹೇಳಿದೆ. 

ಸೋಮವಾರ ನಾಥುರಾಮ್ ಗೋಡ್ಸೆಯ ಪುಣ್ಯ ಸ್ಮರಣೆಯ ಸಂದರ್ಭ ಹಿಂದೂ ಮಹಾಸಭಾ ಈ ಹೇಳಿಕೆ ನೀಡಿದೆ. ‘‘ನಾಥುರಾಂ ಗೋಡ್ಸೆ ಹಾಗೂ ನಾರಾಯಣ ಆಪ್ಟೆಯನ್ನು ಗಲ್ಲಿಗೇರಿಸಿದ ಅಂಬಾಲ ಜೈಲಿನಿಂದ ಮಹಾಸಭಾದ ಕಾರ್ಯಕರ್ತರು ಕಳೆದ ವಾರ ಮಣ್ಣು ತಂದಿದ್ದಾರೆ. ಈ ಮಣ್ಣನ್ನು ಗೋಡ್ಸೆ ಹಾಗೂ ಆಪ್ಟೆ ಅವರ ಪ್ರತಿಮೆಗಳನ್ನು ತಯಾರಿಸಲು ಬಳಸಲಾಗುವುದು. ಅನಂತರ ಈ ಪ್ರತಿಮೆಗಳನ್ನು ಗ್ವಾಲಿಯರ್ನಲ್ಲಿರುವ ಮಹಾಸಭಾದ ಕಚೇರಿಯಲ್ಲಿ ಪ್ರತಿಷ್ಠಾಪಿಸಲಾಗುವುದು’’ ಎಂದು ಹಿಂದೂ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಡಾ. ಜೈವೀರ್ ಭಾರದ್ವಾಜ್ ಹೇಳಿದ್ದಾರೆ. 

ಮಹಾಸಭಾದ ಕಾರ್ಯಕರ್ತರು ಸೋಮವಾರ ಮೀರತ್ (ಉತ್ತರಪರದೇಶ)ನ ‘ಬಲಿದಾನ್ ಧಾಮ’ದಲ್ಲಿ ಗೋಡ್ಸೆ ಹಾಗೂ ಆಪ್ಟೆ ಅವರ ಪ್ರತಿಮೆಗಳನ್ನು ಪ್ರತಿಷ್ಠಾಪಿಸಿದ್ದಾರೆ. ನಾವು ಪ್ರತಿ ರಾಜ್ಯದಲ್ಲಿ ಇಂತಹ ‘ಬಲಿದಾನ್ ಧಾಮ’ಗಳನ್ನು ನಿರ್ಮಾಣ ಮಾಡಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News