ಅಯೋಧ್ಯೆ ಕುರಿತಾದ ಸಲ್ಮಾನ್ ಖುರ್ಷೀದ್ ರ ಕೃತಿಗೆ ತಡೆ ಹೇರಲು ದಿಲ್ಲಿ ಕೋರ್ಟ್ ನಕಾರ: ಅರ್ಜಿ ವಜಾ
Update: 2021-11-18 08:48 GMT
ಹೊಸದಿಲ್ಲಿ: ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷೀದ್ ಅವರು ಬರೆದಿರುವ ʼಸನ್ರೈಸ್ ಓವರ್ ಅಯೋಧ್ಯ' ಕೃತಿಯ ಪ್ರಕಟಣೆ, ಪ್ರಸಾರ ಮತ್ತು ಮಾರಾಟಕ್ಕೆ ತಡೆ ಹೇರಲು ದಿಲ್ಲಿಯ ನ್ಯಾಯಾಲಯವೊಂದು ನಿರಾಕರಿಸಿದೆಯಲ್ಲದೆ ಹಿಂದು ಸೇನಾ ಅಧ್ಯಕ್ಷ ವಿಷ್ಣು ಗುಪ್ತ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ಸಲ್ಮಾನ್ ಖುರ್ಷೀದ್ ಅವರ ಕೃತಿ ಜನರ ಭಾವನೆಗಳಿಗೆ ಧಕ್ಕೆ ತರುತ್ತಿದೆ ಎಂದು ಆರೋಪಿಸಿದ ಅರ್ಜಿದಾರರು ಅದರ ಪ್ರಕಟಣೆ ಮತ್ತು ಮಾರಾಟಕ್ಕೆ ತಡೆ ಹೇರುವಂತೆ ಕೋರಿದ್ದರು.
ಆದರೆ ಈ ಕೃತಿ ಅರ್ಜಿದಾರರಿಗೆ ಯಾವ ರೀತಿಯಲ್ಲಿ ಅನಾನುಕೂಲ ಸೃಷ್ಟಿಸುತ್ತದೆ ಎಂಬುದಕ್ಕೆ ಅರ್ಜಿದಾರರು ಸೂಕ್ತ ವಿವರಣೆ ನೀಡಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಆದರೆ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ಈ ಕೃತಿ ಬಿಡುಗಡೆ ಇಟ್ಟಿರುವುದು ಧ್ರುವೀಕರಣದ ಉದ್ದೇಶದಿಂದ ಹಾಗೂ ರಾಜ್ಯದ ಅಲ್ಪಸಂಖ್ಯಾತರ ಮತಗಳನ್ನು ಸೆಳೆಯುವ ಉದ್ದೇಶದಿಂದ ಎಂದು ಅರ್ಜಿದಾರರು ವಾದಿಸಿದ್ದರು.