ಸರಕಾರಿ ಆಸ್ಪತ್ರೆಗಳ ಡಯಾಲಿಸಿಸ್ ಘಟಕಕ್ಕೆ ಹಣ ಬಿಡಗುಡೆ: ಕರವೇ ಅನಿರ್ದಿಷ್ಟಾವಧಿ- ಅಹೋರಾತ್ರಿ ಧರಣಿ ಅಂತ್ಯ
ಉಡುಪಿ, ನ.18: ರಾಜ್ಯ ಸರಕಾರ 23 ಜಿಲ್ಲೆಗಳ 122 ಡಯಾಲಿಸಿಸ್ ಘಟಕ ಗಳಲ್ಲಿರುವ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಮತ್ತು ಕಳೆದ 5 ತಿಂಗಳಿನಿಂದ ಬಾಕಿ ಇರುವ ಸಿಬ್ಬಂದಿ ವೇತನವನ್ನು ಕೂಡಲೇ ಪಾವತಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಕಳೆದ ಮೂರು ದಿನಗಳಿಂದ ಅಜ್ಜರಕಾಡು ಜಿಲ್ಲಾಸ್ಪತ್ರೆ ಆವರಣದಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಹಾಗೂ ಅಹೋರಾತ್ರಿ ಧರಣಿಯನ್ನು ಇಂದು ಕೈಬಿಡಲಾಗಿದೆ.
ಇಂದು ಬೆಳಗ್ಗೆ ಧರಣಿ ಸ್ಥಳಕ್ಕೆ ಆಗಮಿಸಿದ ಜಿಲ್ಲಾಸ್ಪತ್ರೆಯ ಸರ್ಜನ್ ಡಾ. ಮಧುಸೂದನ ನಾಯಕ್, ಜಿಲ್ಲಾಸ್ಪತ್ರೆಯ ಡಯಾಲೀಸಿಸ್ ಘಟಕದ ಸಿಬ್ಬಂದಿ ಗಳ ಸಂಬಂಳಕ್ಕಾಗಿ ಸರಕಾರಕ್ಕೆ ನ.17ರಂದು 2.84ಲಕ್ಷ ರೂ. ಮತ್ತು ಕೇಂದ್ರಕ್ಕೆ ಬೇಕಾದ ಸಾಮಾಗ್ರಿಗಳ ಖರೀದಿಗೆ 10.30ಲಕ್ಷ ರೂ. ಬಿಡುಗಡೆ ಮಾಡಿದೆ. ಅದೇ ರೀತಿ ಕುಂದಾಪುರ, ಕಾರ್ಕಳ ಸೇರಿದಂತೆ ರಾಜ್ಯದ ಎಲ್ಲ ಆಸ್ಪತ್ರೆಗಳಿಗೂ ಸರಕಾರ ಹಣ ಬಿಡುಗಡೆ ಮಾಡಿದೆ ಎಂದು ಮಾಹಿತಿ ನೀಡಿದರು.
ಈ ಬಗ್ಗೆ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಅನ್ಸಾರ್ ಅಹ್ಮದ್, ಡಯಾಲಿಸಿಸ್ ಯಂತ್ರಗಳ ನಿರ್ವಹಣೆಗೆ ಹದಿನೈದು ದಿನಗಳ ಕಾಲಾವಕಾಶ ವನ್ನು ಸರಕಾರಕ್ಕೆ ನೀಡಿ ನಾವು ನಮ್ಮ ಪ್ರತಿಭಟನೆಯನ್ನು ಹಿಂಪಡೆದು ಕೊಂಡಿದ್ದೇವೆ. 15 ದಿನಗಳ ಒಳಗೆ ಯಂತ್ರಗಳು ದುರಸ್ತಿಯಾಗದೆ ಸಮಸ್ಯೆ ಸೃಷ್ಟಿಯಾದಲ್ಲಿ ಇನ್ನೊಮ್ಮೆ ಅದೇ ಜಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಧರಣಿಯಲ್ಲಿ ಕರವೇ ರಾಜ್ಯ ಸಂಚಾಲಕ ಪ್ರಸನ್ನ ಕುಮಾರ್ ಶೆಟ್ಟಿ, ಮುಖಂಡ ರಾದ ಸುಧೀರ್ ಪೂಜಾರಿ, ಸೈಯ್ಯದ್ ನಿಝಾಮುದ್ದೀನ್, ಶಾಹಿಲ್ ರಹಮತುಲ್ಲಾ, ಗಣೇಶ್ ಕುಮಾರ್, ಖಲೀಲ್ ಅಹ್ಮದ್, ನಾಸೀರ್ ಯಾಕೂಬ್ ಮೊದಲಾದವರು ಉಪಸ್ಥಿತರಿದ್ದರು.