ಪಾಣೆಮಂಗಳೂರು: ರಸ್ತೆ ಬದಿಗೆ ಸರಿದು ಅಪಾಯಕಾರಿ ಸ್ಥಿತಿಯಲ್ಲಿ ನಿಂತ ಗ್ಯಾಸ್ ಟ್ಯಾಂಕರ್
ಬಂಟ್ವಾಳ, ನ.19: ಚಾಲಕನ ನಿಯಂತ್ರಣ ಕಳೆದುಕೊಂಡ ಗ್ಯಾಸ್ ಟ್ಯಾಂಕರ್ ರಸ್ತೆ ಬದಿಗೆ ಸರಿದು ಅಪಾಯಕಾರಿ ಸ್ಥಿತಿಯಲ್ಲಿ ನಿಂತ ಘಟನೆ ಪಾಣೆಮಂಗಳೂರು ಎಂಬಲ್ಲಿ ಇಂದು ಮುಂಜಾನೆ ನಡೆದಿದೆ.
ಪಾಣೆಮಂಗಳೂರು ಮಾರುತಿ ಸುಝುಕಿ ಶೋರೂಂ ಸಮೀಪ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ.
ಮಂಗಳೂರಿನಿಂದ ಗ್ಯಾಸ್ ತುಂಬಿಸಿಕೊಂಡು ಬೆಂಗಳೂರು ಕಡೆಗೆ ಹೋಗುವ ವೇಳೆ ಮುಂಜಾನೆ ಸುಮಾರು 4 ಗಂಟೆಯ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.
ಪಾಣೆಮಂಗಳೂರು ಎಂಬಲ್ಲಿ ಎದುರಿನಿಂದ ಬರುತ್ತಿದ್ದ ವಾಹನಕ್ಕೆ ದಾರಿ ಬಿಟ್ಟು ಕೊಡುವ ಸಂದರ್ಭದಲ್ಲಿ ನಿಯಂತ್ರಣ ಕಳೆದ ಟ್ಯಾಂಕರ್ ರಸ್ತೆಯ ಪಕ್ಕ ಸರಿದು ಅಪಾಯಕಾರಿ ಸ್ಥಿತಿಯಲ್ಲಿ ನಿಂತಿತ್ತು. ಘಟನೆಯಿಂದ ಹೆದ್ದಾರಿಯಲ್ಲಿ ಕೆಲಹೊತ್ತು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.
ಬಳಿಕ ಕ್ರೇನ್ ಬಳಸಿ ಗ್ಯಾಸ್ ಟ್ಯಾಂಕರ್ ನ್ನು ಮೇಲಕ್ಕೆತ್ತಿ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು.
ಬಂಟ್ವಾಳ ಟ್ರಾಫಿಕ್ ಎಸ್ಸೈ ರಾಜೇಶ್ ಕೆ.ವಿ., ಎಎಸ್ಸೈ ವಿಜಯ್ ಹಾಗೂ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಟ್ರಾಫಿಕ್ ಗೆ ತೊಂದರೆಯಾಗದಂತೆ ಸ್ಥಳದಲ್ಲಿ ಕ್ರಮ ಕೈಗೊಂಡಿದ್ದರು.