ಚುನಾವಣೆ ಸಮೀಪಿಸುತ್ತಿರುವ ಕಾರಣ ಪ್ರಧಾನಿ ಕ್ಷಮೆಯಾಚಿಸುತ್ತಿದ್ದಾರೆ: ಪ್ರಿಯಾಂಕಾ ಗಾಂಧಿ

Update: 2021-11-19 09:41 GMT

ಹೊಸದಿಲ್ಲಿ: ಅವರನ್ನು ನೋಡುತ್ತಿದ್ದಾಗ, ನಾನು ಮೃತ ರೈತರಲ್ಲೊಬ್ಬರಾದ ದಲ್ಜಿತ್ ಸಿಂಗ್ ಅವರ ಕುಟುಂಬದ ಬಗ್ಗೆ ಯೋಚಿಸಿದೆ. ಮೋದಿ ಸರಕಾರದ ಮಂತ್ರಿಯ ಮಗ ರೈತರನ್ನು ಕಾರಿನಡಿ ಸಿಲುಕಿಸಿ ಸಾಯಿಸಿದ. ಪ್ರಧಾನಿ ತಮ್ಮನ್ನು ಭೇಟಿ ಮಾಡಲು ಬಂದಿಲ್ಲ ಎಂದು ಸಂತ್ರಸ್ತ ರೈತ ಕುಟುಂಬವು ಯೋಚಿಸುತ್ತಿರಬೇಕು. ಸಚಿವರು ಇನ್ನೂ ಪ್ರಧಾನಿಯೊಂದಿಗೆ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ ಹಾಗೂ  ಇಂದು ಪ್ರಧಾನಿ ಕ್ಷಮೆಯಾಚಿಸುತ್ತಿದ್ದಾರೆ. ಚುನಾವಣೆಗಳು ಸಮೀಪಿಸುತ್ತಿವೆ. ಸಮೀಕ್ಷೆಗಳು ಬಿಜೆಪಿ ದುರ್ಬಲ ನೆಲೆಯಲ್ಲಿದೆ ಎಂದು ತೋರಿಸುತ್ತದೆ ... ಅದಕ್ಕಾಗಿಯೇ ಅವರು ಇದನ್ನು ಮಾಡುತ್ತಿದ್ದಾರೆ ”ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸುದ್ದಿಗಾರರಿಗೆ ತಿಳಿಸಿದರು.

ಪ್ರಧಾನಿ ಮೋದಿ ಅವರು ಶುಕ್ರವಾರ ಬೆಳಗ್ಗೆ ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಪಡಿಸುವುದಾಗಿ ಘೋಷಿಸಿದ್ದರು. ಇದನ್ನು ಉಲ್ಲೇಖಿಸಿ ಪ್ರಿಯಾಂಕಾ ಪ್ರತಿಕ್ರಿಯಿಸಿದರು.

"ಪ್ರಧಾನಿ ಅವರ ಉದ್ದೇಶವನ್ನು ಯಾರು ನಂಬುತ್ತಾರೆ? ದೇಶದ ಮುಂದೆ ಎಲ್ಲವೂ ಸ್ಪಷ್ಟವಾಗಿದೆ. ಸರಕಾರವು ಗಂಭೀರವಾಗಿದ್ದರೆ, ಲಖಿಂಪುರ ಘಟನೆಯ ಬಗ್ಗೆ ಸರಿಯಾದ ಕ್ರಮ ತೆಗೆದುಕೊಳ್ಳಲಾಗುತ್ತಿತ್ತು" ಎಂದು ಅವರು ಹೇಳಿದರು.

ಪ್ರತಿಪಕ್ಷಗಳು ಈಗ ಪಶ್ಚಿಮ ಉತ್ತರಪ್ರದೇಶಕ್ಕೆ ತನ್ನ ಕಾರ್ಯತಂತ್ರವನ್ನು ಮರುಪರಿಶೀಲಿಸಬೇಕೇ ಎಂದು ಕೇಳಿದಾಗ, ಈ ದೇಶದಲ್ಲಿ ರೈತರಿಗಿಂತ ಬುದ್ಧಿವಂತರು ಯಾರೂ ಇಲ್ಲ ಎಂದು ನಾನು ಭಾವಿಸುತ್ತೇನೆ. ಅವರು ಎಲ್ಲವನ್ನೂ ನೋಡುತ್ತಾರೆ ಹಾಗೂ ಅರಿತುಕೊಳ್ಳುತ್ತಾರೆ ಮತ್ತು ಏನಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವ ಅವರ ಸಾಮರ್ಥ್ಯವನ್ನು ಯಾರೂ ಅನುಮಾನಿಸಬಾರದು ಎಂದು ಕಾಂಗ್ರೆಸ್ ನಾಯಕಿ ಹೇಳಿದರು.

ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಪ್ರಚಾರವನ್ನು ನಿರ್ವಹಿಸುತ್ತಿರುವ ಪ್ರಿಯಾಂಕಾ ಗಾಂಧಿ ವಾದ್ರಾ, ಚುನಾವಣೆಯ ಕಾರಣದಿಂದಾಗಿ ಪ್ರಧಾನಿ ಈ ರೀತಿಯ ನಿರ್ಧಾರ ಪ್ರಕಟಿಸಿದರು ಎಂದು ಹೇಳಿದ್ದಾರೆ.

ಇಂದು ದೇಶವನ್ನುದ್ದೇಶಿಸಿ ಮಾತನಾಡಿದ ಮೋದಿ ಅವರು "ನಾನು ಪ್ರಾಮಾಣಿಕ ಮತ್ತು ಶುದ್ಧ ಹೃದಯದಿಂದ ದೇಶದ ಜನರಲ್ಲಿ ಕ್ಷಮೆಯಾಚಿಸುತ್ತೇನೆ... ರೈತರನ್ನು ಮನವೊಲಿಸಲು ನಮಗೆ ಸಾಧ್ಯವಾಗಲಿಲ್ಲ. ನಮ್ಮ ಪ್ರಯತ್ನದಲ್ಲಿ ಕೆಲವು ಕೊರತೆಯಿದ್ದು ಕೆಲವು ರೈತರಿಗೆ ಮನವರಿಕೆ ಮಾಡಲು ಸಾಧ್ಯವಾಗಲಿಲ್ಲ'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News