×
Ad

ಏಳು ತಿಂಗಳಿನಿಂದ ನಾಪತ್ತೆಯಾಗಿರುವ ಪೆರಂಪಳ್ಳಿ ಯುವತಿ: ಶೀಘ್ರ ಪತ್ತೆಗೆ ಆಗ್ರಹಿಸಿ ಕೆಥೊಲಿಕ್ ಸಭಾದಿಂದ ಎಸ್ಪಿಗೆ ಮನವಿ

Update: 2021-11-19 19:03 IST

ಉಡುಪಿ, ನ.19: ಏಳು ತಿಂಗಳಿನಿಂದ ನಾಪತ್ತೆಯಾದ ಪೆರಂಪಳ್ಳಿಯ ಯುವತಿಯನ್ನು ಕೂಡಲೇ ಪತ್ತೆ ಹಚ್ಚುವಂತೆ ಆಗ್ರಹಿಸಿ ಕೆಥೊಲಿಕ್ ಸಭಾ ಉಡುಪಿ ಪ್ರದೇಶ ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಅನುಪಸ್ಥಿತಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಚಂದ್ರ ಅವರಿಗೆ ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಅಧ್ಯಕ್ಷರಾದ ಮೇರಿ ಡಿ‘ಸೋಜಾ ಮನವಿ ಸಲ್ಲಿಸಿದರು.

ಜಿಲ್ಲೆಯ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಪೆರಂಪಳ್ಳಿ ನಿವಾಸಿ ಯಾಗಿರುವ ಅವಿನಾ ಎಂಬ ಯುವತಿ 2021ರ ಎಪ್ರಿಲ್ 13ರಂದು ತನ್ನ ಮನೆಯಿಂದ ನಾಪತ್ತೆಯಾಗಿದ್ದು, ಆಕೆಯ ಪೋಷಕರು ಆಗಲೇ ಮಣಿಪಾಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ ಈವರೆಗೆ ಆಕೆಯ ಇರುವಿಕೆ ಅಥವಾ ಪತ್ತೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲದಿರುವುದರಿಂದ ಆಕೆಯ ಪೋಷಕರು ಆತಂಕಿತರಾಗಿದ್ದಾರೆ. ಆಕೆಯ ಪತ್ತೆಗಾಗಿ ಪೊಲೀಸ್ ಇಲಾಖೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದು ಸಂಸ್ಥೆಯ ಗಮನದಲ್ಲಿದ್ದು ಆದಷ್ಟು ಬೇಗ ಆಕೆಯನ್ನು ಪತ್ತೆ ಮಾಡುವ ಮೂಲಕ ನೊಂದ ಕುಟಂಬಕ್ಕೆ ನ್ಯಾಯ ಒದಗಿಸಿಕೊಡುವಂತೆ ಈ ವೇಳೆ ಮೇರಿ ಡಿಸೋಜಾ ಮನವಿ ಮಾಡಿದರು.

ಮನವಿ ಸ್ವೀಕರಿಸಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಚಂದ್ರ ಪೊಲೀಸ್ ಇಲಾಖೆ ಯುವತಿಯ ಪತ್ತೆಗಾಗಿ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದು ಶೀಘ್ರದಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಈ ವೇಳೆ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್‌ನ ನಿಯೋಜಿತ ಅಧ್ಯಕ್ಷ ಸಂತೋಷ್ ಕರ್ನೆಲಿಯೋ, ಉಡುಪಿ ವಲಯ ಅಧ್ಯಕ್ಷೆ ಲವೀನಾ ಪಿರೇರಾ, ಉಡುಪಿ ಘಟಕದ ಅಧ್ಯಕ್ಷ ಲೆಸ್ಲಿ ಕರ್ನೇಲಿಯೋ, ಪೆರಂಪಳ್ಳಿ ಘಟಕದ ಅಧ್ಯಕ್ಷ ಒಲಿವರ್ ಡಿ’ಸೋಜಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News