ಮಣಿದ ಮೋದಿ, ಗೆದ್ದ ದೇಶ

Update: 2021-11-20 05:47 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

700ಕ್ಕೂ ಹೆಚ್ಚು ರೈತರ ಬಲಿದಾನ ಕೊನೆಗೂ ಫಲಬಿಟ್ಟಿದೆ. ಸ್ವಾತಂತ್ರ ಹೋರಾಟದ ರೂಪ ಪಡೆದಿದ್ದ ರೈತರ ಬೃಹತ್ ಚಳವಳಿಗೆ ನವ ಬ್ರಿಟಿಷ್ ಕಂಪೆನಿ ತಲೆ ಬಾಗಿದೆ. ಪ್ರಧಾನಿ ಮೋದಿಯವರು ‘ಮೂರು ಕೃಷಿ ಕಾಯ್ದೆಗಳನ್ನು ಹಿಂದೆಗೆದುಕೊಂಡಿದ್ದೇವೆ’ ಎಂದು ಹೇಳಿರುವುದಲ್ಲದೆ, ತಮ್ಮ ವೈಫಲ್ಯಕ್ಕಾಗಿ ದೇಶದ ಕ್ಷಮೆ ಯಾಚಿಸಿದ್ದಾರೆ. ಮೇಲ್ನೋಟಕ್ಕೆ ಇದು ‘ಚುನಾವಣೆಯ ದೃಷ್ಟಿಯಿಂದ ತೆಗೆದುಕೊಂಡ ತೀರ್ಮಾನ’ ಎಂದೆನಿಸಿದರೂ ಅದರಾಚೆಗೂ ರೈತರ ಗೆಲುವು ವಿಸ್ತರಿಸಿಕೊಂಡಿದೆ. ಒಂದು ರೀತಿಯಲ್ಲಿ, ಸೀಳುಗಳ ನಡುವೆ ಬಾಲ ಸಿಲುಕಿ ಒದ್ದಾಡುತ್ತಿದ್ದ ಕೋತಿಯಂತೆ, ಯಾರಾದರೂ ಹೇಗಾದರೂ ಬಂದು ಬಿಡಿಸಬಾರದೆ ಎನ್ನುವ ಸ್ಥಿತಿ ಸರಕಾರದ್ದಾಗಿತ್ತು. ಇದೀಗ ಕೊನೆಯ ಕ್ಷಣದಲ್ಲಿ ‘ಚುನಾವಣೆ’ಯ ಹೆಸರಿನಲ್ಲಿ ತನ್ನ ಬಾಲವನ್ನು ಬಿಡಿಸಿ ಬದುಕಿಕೊಂಡಿದೆ. ನಾಳೆ ಸುಪ್ರೀಂಕೋರ್ಟ್ ಏನಾದರೂ ಕಾಯ್ದೆಯನ್ನು ಹಿಂದೆಗೆದರೆ ಅದು ಸರಕಾರಕ್ಕೆ ಮುಖಭಂಗವಾಗುತ್ತಿತ್ತು ಮಾತ್ರವಲ್ಲ, ಶಾಶ್ವತವಾಗಿ ರೈತರ ವಿರೋಧವನ್ನು ಸರಕಾರ ಕಟ್ಟಿಕೊಳ್ಳಬೇಕಾಗುತ್ತಿತ್ತು. ಆದುದರಿಂದ ನೇರವಾಗಿ ಪ್ರಧಾನಿಯೇ ಕಾಯ್ದೆಗಳನ್ನು ಹಿಂದೆಗೆದುಕೊಳ್ಳಬೇಕಾಯಿತು. ಇದು ರೈತರಿಗೆ ಪ್ರಧಾನಿಯ ಕೊಡುಗೆಯೂ ಅಲ್ಲ, ಭಿಕ್ಷೆಯೂ ಅಲ್ಲ. ದೇಶದ ರೈತರು ಕಳೆದ ಒಂದು ವರ್ಷದಿಂದ ನಿರಂತರ ಹೋರಾಟಗಳ ಮೂಲಕ, 700ಕ್ಕೂ ಹೆಚ್ಚು ರೈತ ಜೀವಗಳನ್ನು ಬಲಿಯರ್ಪಿಸಿ ಪ್ರಭುತ್ವವನ್ನು ಮಣಿಸಿ ತನ್ನದಾಗಿಸಿಕೊಂಡ ಹಕ್ಕು. ಕಾಯ್ದೆಗಳನ್ನು ಹಿಂದೆಗೆದುಕೊಳ್ಳುವುದರೊಂದಿಗೆ ಪ್ರಧಾನಿಯ ಕರ್ತವ್ಯ ಮುಗಿದಿಲ್ಲ. ಮೃತಪಟ್ಟ ರೈತರ ಬಲಿದಾನಗಳಿಗೆ ಅವರು ಉತ್ತರವನ್ನು ಹೇಳಬೇಕು. ರೈತರನ್ನು ಸರಕಾರದೊಳಗಿರುವ ಸಚಿವರೇ, ‘ಉಗ್ರಗಾಮಿಗಳು’ ‘ಖಲಿಸ್ತಾನಿಗಳು’ ಎಂದು ಕರೆದು ನಿಂದಿಸಿರುವುದಕ್ಕೂ ಕ್ಷಮೆಯಾಚಿಸಬೇಕು. ಸ್ವತಃ ಪ್ರಧಾನಿಯೇ ರೈತರನ್ನು ‘ಆಂದೋಲನ ಜೀವಿ’ಗಳು ಎಂದು ವ್ಯಂಗ್ಯವಾಡಿದ್ದರು. ಇಂದು ಅದೇ ಆಂದೋಲನ ಜೀವಿಗಳ ಮುಂದೆ ಕ್ಷಮೆಯಾಚಿಸುವ ಮೂಲಕ, ಮೋದಿಯವರು ತಮಗೆ ತಾವೇ ವ್ಯಂಗ್ಯಕ್ಕೀಡಾಗಿದ್ದಾರೆ.

ನಿಜಕ್ಕೂ ರೈತರ ಹೋರಾಟ ಮುಗಿದಿಲ್ಲ. ಇದೊಂದು ಆರಂಭ ಮಾತ್ರವಾಗಿದೆ. ಯಾಕೆಂದರೆ, ಪ್ರಧಾನಿ ಘೋಷಣೆಯ ಜೊತೆ ಜೊತೆಗೇ ‘ನಾನು ಈ ಕಾಯ್ದೆಯನ್ನು ರೂಪಾಂತರಿಸಿ ಇನ್ನೊಮ್ಮೆ ನಿಮ್ಮ ಮುಂದೆ ಬರುತ್ತೇನೆ’ ಎಂಬ ಸೂಚನೆಯನ್ನು ನೀಡಿದ್ದಾರೆ. ಅವರು ದೇಶದ ಮುಂದೆ ಕ್ಷಮೆಯಾಚಿಸಿರುವುದು, ರೈತ ಸಮುದಾಯದ ಹಕ್ಕುಗಳನ್ನು ಕಾರ್ಪೊರೇಟ್ ಶಕ್ತಿಗಳ ಕೈಗೆ ಹಸ್ತಾಂತರಿಸಿದ ತಪ್ಪಿಗಾಗಿ ಅಲ್ಲ. ಈ ಕಾಯ್ದೆಗಳನ್ನು ರೈತರ ತಲೆಗೆ ಕಟ್ಟಿ ಅವರನ್ನು ಯಾಮಾರಿಸಲು ವಿಫಲವಾದುದಕ್ಕೆ ಕ್ಷಮೆಯಾಚಿಸಿದ್ದಾರೆ. ‘ಈ ಕಾಯ್ದೆಗಳ ಒಳಿತುಗಳನ್ನು ರೈತರಿಗೆ ವಿವರಿಸುವಲ್ಲಿ ನಾವು ವಿಫರಾಗಿದ್ದೇವೆ. ಅದಕ್ಕಾಗಿ ಕ್ಷಮೆಯಾಚಿಸುತ್ತೇವೆ’ ಎನ್ನುವ ಮಾತಿನ ಅರ್ಥವೇ ಅದು. ಕಾಯ್ದೆಯನ್ನು ರದ್ದುಗೊಳಿಸಿರುವ ಮೋದಿಯವರು ‘ನಾವು ಹೊಸದಾಗಿ ಮುಂದುವರಿಯೋಣ’ ಎಂದೂ ಹೇಳಿದ್ದಾರೆ. ಅಂದರೆ ಮತ್ತೆ ಇದೇ ಕಾಯ್ದೆಯನ್ನು ಹೊಸದಾಗಿ, ಬೇರೆ ದಾರಿಯಲ್ಲಿ ಹೇರುವ ಅವರ ಪ್ರಯತ್ನ ಮುಂದುವರಿಯಲಿದೆ. ರೈತರನ್ನು ಕೀಳಂದಾಜು ಮಾಡಿ ಈ ಕಾನೂನನ್ನು ಜಾರಿಗೊಳಿಸಿದ್ದ ಸರಕಾರಕ್ಕೆ ಈಗ ರೈತರ ಶಕ್ತಿಯ ಅರಿವಾಗಿದೆ. ಆದುದರಿಂದ, ಅದು ಇದೇ ಕಾಯ್ದೆಯನ್ನು ಬೇರೆ ಮಾರ್ಗದಲ್ಲಿ ಮತ್ತೆ ರೈತರ ಮೇಲೆ ಹೇರುವ ಪ್ರಯತ್ನ ಮಾಡಿಯೇ ಮಾಡುತ್ತದೆ. ಕೇಂದ್ರಕ್ಕೆ ಸಾಧ್ಯವಾಗದೇ ಇರುವುದನ್ನು ರಾಜ್ಯಗಳ ಮೂಲಕ ಸಾಧ್ಯವಾಗಿಸುವ ಪ್ರಯತ್ನವನ್ನು ಸರಕಾರ ಮಾಡಬಹುದು. ಈಗಾಗಲೇ ಕರ್ನಾಟಕದಲ್ಲಿ ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆಯನ್ನು ತಿದ್ದುಪಡಿಗೊಳಿಸಿ ಜಾರಿಗೊಳಿಸಲಾಗಿದೆ. ಇವುಗಳನ್ನು ಸರಕಾರ ಹಿಂದೆಗೆದುಕೊಳ್ಳದೆ ರೈತರು ಪೂರ್ಣ ಪ್ರಮಾಣದಲ್ಲಿ ಗೆಲುವನ್ನು ತಮ್ಮದಾಗಿಸಲು ಸಾಧ್ಯವಿಲ್ಲ. ಆದುದರಿಂದ ರೈತರ ಹೋರಾಟ ಇಲ್ಲಿಗೇ ಮುಗಿಯದೆ, ರಾಜ್ಯ ಸರಕಾರಗಳ ಮೂಲಕ ಕೇಂದ್ರ ಜಾರಿಗೊಳಿಸಲು ಮುಂದಾಗಿರುವ ರೈತರ ವಿರೋಧಿ ಕಾನೂನನ್ನು ಎದುರಿಸಲು ಸಿದ್ಧತೆ ನಡೆಸಬೇಕು.

ಹೇಗೆ ಸಿಎಎ ವಿರೋಧಿ ಹೋರಾಟ ಈ ದೇಶವನ್ನು ಜಾತಿ ಭೇದ ಅಳಿಸಿ ಒಗ್ಗೂಡಿಸಿತೋ, ಅದಕ್ಕಿಂತಲೂ ಪರಿಣಾಮಕಾರಿಯಾಗಿ ರೈತ ಹೋರಾಟಗಳು ಒಗ್ಗೂಡಿಸಿದವು. ಇಂದು ರೈತರು ತಮ್ಮ ಹಕ್ಕುಗಳಿಗಾಗಿ ಜಾತಿ, ಧರ್ಮಗಳನ್ನು ಬದಿಗಿಟ್ಟು ಒಂದಾಗದೇ ಇದ್ದಿದ್ದರೆ, ಇದೇ ರೈತರನ್ನು ಜಾತಿ ಧರ್ಮದ ಹೆಸರಿನಲ್ಲಿ ವಿಭಜಿಸಿ ಉತ್ತರ ಭಾರತದಲ್ಲಿ ಹಲವು ಗಲಭೆಗಳನ್ನು ಮಾಡಿಸುತ್ತಿತ್ತು. ಗಲಭೆಗಳೇ ಬಿಜೆಪಿಯ ಚುನಾವಣೆಯ ಬಂಡವಾಳವಾಗಿರುವುದರಿಂದ, ರೈತ ಹೋರಾಟ ಇನ್ನೂ ಮುಂದುವರಿದರೆ ಜನರು ಶಾಶ್ವ ತ ಭೇದಭಾವ ಮರೆತು ಒಂದಾಗಿ ಬಿಡಬಹುದು ಎಂದು ಆರೆಸ್ಸೆಸ್ ಮುಖಂಡರು ಹೆದರಿದ್ದರು. ಉತ್ತರ ಪ್ರದೇಶದ ಚುನಾವಣೆಯ ಹೊತ್ತಿಗೆ ಬೀದಿಯಲ್ಲಿರುವ ರೈತರು ಬಹುದೊಡ್ಡ ಸಮಸ್ಯೆಯಾಗಲಿದ್ದರು. ಅವರು ಒಳಗೊಳಗೇ ಕುದಿಯುತ್ತಿದ್ದರು. ಚುನಾವಣೆಯ ಸಂದರ್ಭದಲ್ಲಿ ಅದು ಸ್ಫೋಟಿಸುವ ಸಾಧ್ಯತೆಗಳಿದ್ದವು. ಹಕ್ಕುಗಳನ್ನು ಹಿಂದೆಗೆಯದೇ ರೈತರು ಬೀದಿಯಿಂದ ಕದಲುವುದಿಲ್ಲ ಎನ್ನುವುದು ಸ್ಪಷ್ಟವಾದ ಬಳಿಕವೇ ಸರಕಾರ ಅವುಗಳನ್ನು ರದ್ದುಗೊಳಿಸಲು ಮುಂದಾಯಿತು. ಆದುದರಿಂದ ಇದು ಚುನಾವಣೆಯ ಓಲೈಕೆಗಾಗಿ ತೆಗೆದುಕೊಂಡ ನಿರ್ಧಾರವಲ್ಲ. ರೈತರ ಶಕ್ತಿಗೆ ಬೆದರಿ ತೆಗೆದುಕೊಂಡ ನಿರ್ಧಾರ. ಜನರು ಜಾಗೃತವಾಗಿದ್ದರೆ ಪ್ರಭುತ್ವ ಎಷ್ಟು ದುರಹಂಕಾರಿಯಾಗಿದ್ದರೂ ಅದನ್ನು ಎದುರಿಸಿ ಗೆಲ್ಲಬಹುದು ಎನ್ನುವುದು ರೈತರು ದೇಶಕ್ಕೆ ತೋರಿಸಿಕೊಟ್ಟಿದ್ದಾರೆ.

ರಾಮಮಂದಿರ, ಕಾಶ್ಮೀರ ಎಂದು ಜನರನ್ನು ಏಮಾರಿಸಿ, ಇತ್ತ ರೈತ ವಿರೋಧಿ, ಜನವಿರೋಧಿ ನೀತಿಗಳನ್ನು ಒಂದೊಂದಾಗಿ ಜಾರಿಗೊಳಿಸುತ್ತಾ ಬಂದಾಗ, ಪಂಜಾಬಿನ ರೈತರು ಮೊತ್ತಮೊದಲು ಜಾಗೃತರಾಗಿ ಅದರ ವಿರುದ್ಧ ಧ್ವನಿಯೆತ್ತಿದ್ದರು. ಯಾವುದೇ ಭಾವನಾತ್ಮಕ ತಂತ್ರ ಅವರ ಮುಂದೆ ನಡೆಯಲಿಲ್ಲ. ವಿಪರ್ಯಾಸವೆಂದರೆ ರೈತರು ತಮ್ಮ ಹಕ್ಕಿಗಾಗಿ ಬೀದಿಗಿಳಿದಾಗ ಅಕ್ಷರ ಬಲ್ಲ ವಿದ್ಯಾವಂತರು, ಪತ್ರಕರ್ತರೆಂದು ಕರೆಸಿಕೊಂಡವರು ಪ್ರಭುತ್ವದ ಜೊತೆಗೆ ಕೈಜೋಡಿಸಿದ್ದರು. ಆದರೆ ನೆಲದ ಮಕ್ಕಳ ಪ್ರಜಾಸತ್ತಾತ್ಮಕ ಹೋರಾಟದ ಮುಂದೆ ಎಲ್ಲ ಶಕ್ತಿಗಳು ಅಂತಿಮವಾಗಿ ತಲೆಬಾಗಲೇ ಬೇಕು ಎನ್ನುವುದನ್ನು ಹೋರಾಟ ತೋರಿಸಿಕೊಟ್ಟಿದೆ. ಇದೀಗ ಈ ಹೋರಾಟ ದೇಶದ ಬೇರೆ ಬೇರೆ ಕ್ಷೇತ್ರಗಳಿಗೂ ವಿಸ್ತರಿಸಬೇಕಾಗಿದೆ. ಇಡೀ ದೇಶವನ್ನು ಕಾರ್ಪೊರೇಟ್ ಕಂಪೆನಿಗಳಿಗೆ ಹಂತ ಹಂತವಾಗಿ ಮಾರುತ್ತಿರುವ ಸರಕಾರದ ವಿರುದ್ಧ ಜನರು ಜಾಗೃತರಾಗಲು ರೈತ ಹೋರಾಟ ಪ್ರೇರಣೆಯಾಗಬೇಕು. ನವ ಈಸ್ಟ್ ಇಂಡಿಯಾ ಕಂಪೆನಿಯು ಕೇಸರಿ ಶಾಲು ಮತ್ತು ನಾಮಗಳ ಜೊತೆಗೆ ನಮ್ಮ ಮುಂದಿದೆ. ಶತ್ರು ‘ನಮ್ಮವರ ವೇಷ’ದಲ್ಲಿದ್ದಾನೆ. ಈ ವೇಷಧಾರಿಗಳನ್ನು ಗುರುತಿಸಿ, ದೇಶದ ಸಾರ್ವಭೌಮತೆಯನ್ನು ಉಳಿಸುವ ಎರಡನೇ ಸ್ವಾತಂತ್ರ ಹೋರಾಟಕ್ಕೆ ಸಜ್ಜಾಗುವ ಕಾಲ ಹತ್ತಿರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News