×
Ad

ಕೋಮುದ್ವೇಷ ಹುಟ್ಟು ಹಾಕಿದ ಪ್ರಕರಣ; ಶಿಕ್ಷಣ ಸಂಸ್ಥೆ ವಿರುದ್ಧ ಕ್ರಮಕ್ಕೆ ಮಕ್ಕಳ ಹಕ್ಕುಗಳ ಆಯೋಗ ನಿರ್ದೇಶನ

Update: 2021-11-20 19:11 IST

ಮಂಗಳೂರು, ನ.20: ಪುತ್ತೂರಿನ ಶಿಕ್ಷಣ ಸಂಸ್ಥೆಯೊಂದರಲ್ಲಿ ನೆರೆ ದೇಶದ ಧ್ವಜವನ್ನು ಮಕ್ಕಳ ಕೈಯಿಂದ ಸುಟ್ಟು ಹಾಕಿಸಿ ದ್ವೇಷ ಹುಟ್ಟು ಹಾಕುವ ಪ್ರಕರಣ ವರದಿಯಾಗಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು, ಶಿಕ್ಷಣ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದೆ.

ಮಂಗಳೂರಿನಲ್ಲಿ ಶನಿವಾರ ಮಕ್ಕಳ ಹಕ್ಕುಗಳ ಮಾಸಾಚರಣೆ ಅಂಗವಾಗಿ ಕೋವಿಡ್- 19 ಅವಧಿಯಲ್ಲಿ ಮಕ್ಕಳ ಮೇಲಾಗಿರುವ ದುಷ್ಪರಿಣಾಮಗಳ ಕುರಿತು ಸಾರ್ವಜನಿಕ ಅಹವಾಲು ಸ್ವೀಕಾರ ಸಂದರ್ಭದಲ್ಲಿ ಈ ಕುರಿತು ಚರ್ಚೆ ನಡೆಯಿತು.

ಶಾಲೆಯ ಅಸೆಂಬ್ಲಿಯಲ್ಲಿ ಬೇರೆ ರಾಷ್ಟ್ರದ ವಿರುದ್ಧ ಘೋಷಣೆ, ಧ್ವಜ ಸುಟ್ಟಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಮಕ್ಕಳನ್ನು ಇಂಥ ಕೃತ್ಯಕ್ಕೆ ಬಳಕೆ ಮಾಡಿರುವುದನ್ನು ಮಂಗಳೂರು ವಿಶೇಷ ಮಕ್ಕಳ ಪೊಲೀಸ್ ಅಧೀಕ್ಷಕರ ವ್ಯಾಪ್ತಿಯ ಹಿರಿಯ ಮಕ್ಕಳ ರಕ್ಷಣಾಧಿಕಾರಿ ಡಾ.ಗಾನ ಪಿ.ಕುಮಾರ್ ಗಮನ ಸೆಳೆದರು.

ಇದಕ್ಕುತ್ತರಿಸಿದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಿ.ಶಂಕರಪ್ಪ, ಶಾಲೆ ಆವರಣದಲ್ಲಿ ಇಂಥ ಕೃತ್ಯ ನಡೆಸಿದವರ ಮೇಲೆ ಪ್ರಕರಣ ದಾಖಲಿಸಬೇಕು. ಶಾಲೆಗಳಲ್ಲಿ ಕೋಮುದ್ವೇಷ, ಕಾನೂನು ಸುವ್ಯವಸ್ಥೆ ಹದಗೆಡಲು ಅವಕಾಶ ಕೊಡಬಾರದು ಎಂದು ಪೊಲೀಸ್ ಇಲಾಖೆಗೆ ಸೂಚನೆ ನೀಡಿದರು.

ಪೊಲೀಸರು ಸಂಬಂಧಪಟ್ಟ ಶಾಲೆಗೆ ಭೇಟಿ ನೀಡಿ, ಯಾರು ಮಕ್ಕಳನ್ನು ಬಳಕೆ ಮಾಡಿದ್ದಾರೆ ಎಂಬುದನ್ನು ನೋಡಿ ಅಂಥವರ ವಿರುದ್ಧ ಎಫ್ಐಆರ್ ದಾಖಲಿಸಬೇಕು. ಶಿಕ್ಷಣ ಸಂಸ್ಥೆಗಳು ವಿದ್ಯಾ ಕೇಂದ್ರಗಳಾಗಬೇಕು. ಮಕ್ಕಳ ಮನ್ಸಸಿನಲ್ಲಿ ವಿಷ ಬೀಜ ಬಿತ್ತಬಾರದು. ಶಾಲೆಗಳು ದ್ವೇಷ ಬೆಳೆಸುವ ರಾಜಕೀಯ ವೇದಿಕೆಗಳಾಗಬಾರದು. ನಮ್ಮ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ, ಅಧಿಕಾರಿಗಳನ್ನೂ ಸೇರಿಸಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅವರ ಮೇಲೂ ಕ್ರಮ ಕೈಗೊಳ್ಳಬೇಕು ಎಂದು ಶಂಕರಪ್ಪ ಹೇಳಿದರು.

ಕೋವಿಡ್ ಲಾಕ್‌ಡೌನ್ ವೇಳೆ ಮಕ್ಕಳು ಅನುಭವಿಸಿದ ಸಮಸ್ಯೆಗಳನ್ನು ಮೂರು ಗುಂಪುಗಳ ಮೂಲಕ ಸಮೂಹ ಚರ್ಚೆ ನಡೆಸಿ, ಜಿಲ್ಲಾಮಟ್ಟದ ಅಧಿಕಾರಿಗಳ ಗಮನಕ್ಕೆ ತರಲಾಯಿತು. ಆನ್‌ಲೈನ್‌ನಲ್ಲಿ ಸರಿಯಾಗಿ ಪಾಠ ಕೇಳಲು ಸಾಧ್ಯವಾಗಿಲ್ಲ. ಮೊಬೈಲ್ ತೆಗೆಯಲು ಹಣ ಇರಲಿಲ್ಲ. ಮೊಬೈಲ್ ತೆಗೆದರೂ ಡಾಟಾ ಹಾಕಲು ಹಣ ಇರಲಿಲ್ಲ. ಶುಲ್ಕ ಕೊಟ್ಟಿಲ್ಲ ಎಂದು ಆನ್‌ಲೈನ್ ಪಾಠಕ್ಕೆ ಸೇರಿಸಿಲ್ಲ. ಹಿಂದಿನ ವರ್ಷ ಪಠ್ಯ ಕಡಿತ ಮಾಡಿದ್ದರಿಂದ ಈಗ ಪಾಠ ಅರ್ಥವಾಗುತ್ತಿಲ್ಲ ಎಂಬ ಹಲವು ದೂರುಗಳು ವಿದ್ಯಾರ್ಥಿಗಳಿಂದ ವ್ಯಕ್ತವಾಯಿತು.

ಪಂಜಿಮೊಗರು ಸರಕಾರಿ ಶಾಲೆಯ ಮುಖ್ಯ ಶಿಕ್ಷಕರು ವಿದ್ಯಾರ್ಥಿಗಳನ್ನು ಹೀಯಾಳಿಸಿ ಅವಮಾನ ಮಾಡುತ್ತಾರೆ. ಶಾಲೆಯಲ್ಲಿ ಕಲಿಯುವ ವಾತಾವರಣ ಇಲ್ಲ ಎಂದು ವಿದ್ಯಾರ್ಥಿನಿ ದೂರಿದಾಗ, ಯಾವ ಕಾರಣಕ್ಕೂ ಈ ವಿದ್ಯಾರ್ಥಿನಿ ಮತ್ತೆ ದೂರು ಪುನರಾವರ್ತಿಸಬಾರದು ಹಾಗೂ ಆಕೆಯ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗಬಾರದು. ನಾವು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಶಂಕರಪ್ಪ ಹೇಳಿದರು.

ಪುತ್ತೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಕುಳಿತುಕೊಳ್ಳಲು ಬೆಂಚು ಸರಿ ಇಲ್ಲ. ಶೌಚಾಲಯವಿದ್ದರೂ ಬಳಕೆ ಮಾಡಲು ಬಿಡುತ್ತಿಲ್ಲ. ಕುಡಿಯಲು ನೀರಿನ ವ್ಯವಸ್ಥೆ ಇಲ್ಲ ಎಂದು ವಿದ್ಯಾರ್ಥಿನಿ ದೂರಿದಾಗ, ಇದನ್ನು ಗಂಭೀರವಾಗಿ ಪರಿಗಣಿಸಲು ಪಿಯು ಡಿಡಿಗೆ ಸೂಚನೆ ನೀಡಲಾಯಿತು.

ವಿಟ್ಲ ಅನುದಾನಿತ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಯೊಬ್ಬನಿಗೆ ಪ್ರವೇಶ ನಿರಾಕರಣೆ ಬಗ್ಗೆ ಆತ ದೂರಿದಾಗ, ಈಗ ಪ್ರವೇಶದ ಸಮಯ ಮೀರಿದೆ. ಪಿಯು ಇಲಾಖೆ ನಿರ್ದೇಶಕರ ವಿಶೇಷ ಅನುಮತಿ ಪಡೆದುಕೊಂಡು ದಾಖಲಾತಿಗೆ ಅವಕಾಶ ಕೊಡಿಸಬೇಕು. ವಿದ್ಯಾರ್ಥಿಯ ಕಲಿಕೆಗೆ ಅಡ್ಡಿ ಮಾಡಬಾರದು ಎಂದು ಪಿಯು ಉಪನಿರ್ದೇಶಕರಿಗೆ ಶಂಕರಪ್ಪ ಸೂಚನೆ ನೀಡಿದರು.

ಶಿಕ್ಷಣ ಇಲಾಖೆ ಉಪನಿರ್ದೇಶಕ ಮಲ್ಲೇಸ್ವಾಮಿ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೆನ್ನಿ ಡಿಸೋಜ, ಕಾರ್ಮಿಕ ಇಲಾಖೆ ಸಹಾಯಕ ಆಯುಕ್ತ ಶಿವಕುಮಾರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುಳಾ ಜಿ. ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News