ಮೂಡುಬಿದಿರೆ ಸರಕಾರಿ ಶಾಲೆಯ ಅವ್ಯವಸ್ಥೆ: ಸೂಕ್ತ ಕ್ರಮಕ್ಕೆ ಆಗ್ರಹಿಸಿ ಸಿಎಫ್‌ಐ ಮನವಿ

Update: 2021-11-23 18:02 GMT

ಮೂಡುಬಿದಿರೆ: ಇಲ್ಲಿಗೆ ಸಮೀಪದ ಅಳಿಯೂರಿನ ದ.ಕ. ಜಿಪಂ ಅನುದಾನಿತ ಹಿ.ಪ್ರಾ. ಶಾಲೆಯ ಅವ್ಯವಸ್ಥೆ ಬೆಳಕಿಗೆ ಬಂದ ಬಳಿಕ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ನಿಯೋಗವು ಮಂಗಳವಾರ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿತು. ಅಲ್ಲದೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿತು.

ಈ ಶಾಲೆಯಲ್ಲಿ 325 ವಿದ್ಯಾರ್ಥಿಗಳು ಕಲಿಯುತ್ತಿದ್ದು, ಸರಿಯಾದ ಕೊಠಡಿ ವ್ಯವಸ್ಥೆ ಇಲ್ಲದ ಕಾರಣ ಬಿಸಿಲು, ಗಾಳಿ- ಮಳೆ ಲೆಕ್ಕಿಸದೆ ಅಂಗಳದಲ್ಲೇ ಕುಳಿತು ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಸಕ್ತ ವರ್ಷದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗಿರುವುದರಿಂದ ಎರಡು ತರಗತಿಗಳು ಶಾಲೆಯ ಒಳಾಂಗಣದಿಂದ ಹೊರಗೆ ಬಿದ್ದಿದೆ. ಕೊಠಡಿಗಳ ಕೊರತೆಯೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಶಾಲೆಯ ಹೊರಾಂಗಣದಲ್ಲಿ ತಾತ್ಕಾಲಿಕ ತಗಡು ಶೀಟ್‌ಗಳನ್ನು ಅಳವಡಿಸಿ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತಿದೆ. ಬೇಸಿಗೆಯಲ್ಲಿ ತಗಡುಶೀಟ್‌ನಿಂದಾಗಿ ಬಿಸಿಲಿನ ಬೇಗೆ ಹೆಚ್ಚಾದರೆ, ಗಾಳಿ-ಮಳೆಯಲ್ಲಿ ತಗಡು ಅಪ್ಪಳಿಸಿ ವಿದ್ಯಾರ್ಥಿಗಳಿಗೆ ಹಾನಿಯಾಗುವ ಸಂಭವವೂ ಇದೆ. ಹಾಗಾಗಿ ಸಿಎಫ್‌ಐ ಮಂಗಳೂರು ಗ್ರಾಮಾಂತರ ಸಮಿತಿಯು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿ ಜಿಲ್ಲಾಧಿಕಾರಿ, ತಹಶೀಲ್ದಾರ್, ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಮತ್ತಿತರ ಅಧಿಕಾರಿಗಳ ಗಮನಕ್ಕೆ ತಂದಿತು.

ಮಂಗಳೂರು ನಗರ ಅಧ್ಯಕ್ಷ ಶರ್ಫುಧ್ಧೀನ್ ಬಜ್ಪೆ, ಮಂಗಳೂರು ಗ್ರಾಮಾಂತರ ಅಧ್ಯಕ್ಷ ಅಶ್ರಫ್ ಪೊರ್ಕೋಡಿ, ಕಾರ್ಯದರ್ಶಿ ಸರ್ಫ್ರಾಝ್, ಉಪಾಧ್ಯಕ್ಷ ಝಹೀರ್, ಸಮಿತಿ ಸದಸ್ಯರಾದ ನಬೀಲ್, ರಾಯೀಫ್ ನಿಯೋಗದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News