ಕ್ಯಾಂಪ್ಕೋದಿಂದ ದೋಟಿ ಆಧಾರಿತ ಅಡಿಕೆ ಕೌಶಲ ತರಬೇತಿ
ಪುತ್ತೂರು, ನ.24: ಅಡಿಕೆ ಕೃಷಿಕ ಸಮುದಾಯದ ಸಮಸ್ಯೆ ಕುಗ್ಗಿಸಲು ಕ್ಯಾಂಪ್ಕೋ ಸಂಸ್ಥೆಯು ದೋಟಿಯ ಮೂಲಕ ಅಡಿಕೆ ಕೌಶಲ ಪಡೆ ತರಬೇತಿ ನೀಡಲು ನಿರ್ಧರಿಸಿದೆ. ಇದಕ್ಕೆ ಕೃಷಿಕರ ಮಾಧ್ಯಮ ಅಡಿಕೆ ಪತ್ರಿಕೆ ಹಾಗೂ ವಿಟ್ಲದ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ ಸಹಭಾಗಿತ್ವ ನೀಡಲಿವೆ.
ಈ ಬಗ್ಗೆ ಬುಧವಾರ ಪುತ್ತೂರಿನ ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಯಲ್ಲಿ ಪ್ರಥಮ ಪೂರ್ವಭಾವಿ ಸಭೆ ನಡೆಯಿತು. ಕ್ಯಾಂಪ್ರೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಶಂಕರನಾರಾಯಣ ಖಂಡಿಗೆ, ನಿರ್ದೇಶಕ ರಾಘವೇಂದ್ರ ಭಟ್ ಕೆದಿಲ, ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಶ್ರೀಪಡ್ರೆ, ಪತ್ರಿಕೆಯ ಸಂಪಾದಕ - ಪ್ರಕಾಶಕ ರಾಮಕೃಷ್ಣ ಶಾಸ್ತ್ರಿ ಉಪಸ್ಥಿತರಿದ್ದರು.
ತರಬೇತಿಯು ಜನವರಿ ಎರಡನೆಯ ವಾರದಲ್ಲಿ ವಿಟ್ಲದ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನೆ ಸಂಸ್ಥೆಯಲ್ಲಿ ನಡೆಯಲಿದೆ. ಮೂರು ದಿನಗಳ ಈ ತರಬೇತಿಯಲ್ಲಿ ಆಯ್ದ ಇಪ್ಪತ್ತು ಜನರಿಗೆ ಅವಕಾಶ ಇರುತ್ತದೆ. ಅನುಭವಿ ತರಬೇತುದಾರರು ಫೈಬರ್ ಕಾರ್ಬನ್ ದೋಟಿ ಬಳಸಿ ಅಡಿಕೆ ಕೊಯ್ಲು ಮತ್ತು ಸಿಂಪಡಣೆ ಮಾಡಲು ಕಲಿಸಲಿದ್ದಾರೆ. ಕಾಸರಗೋಡು ಹಾಗೂ ದ.ಕ. ಜಿಲ್ಲೆಯ ಸದಸ್ಯರು ಶಿಬಿರದಲ್ಲಿ ಭಾಗವಹಿಸಬಹುದು ಎಂದು ಪ್ರಕಟನೆ ತಿಳಿಸಿದೆ.
ಮೂರು ವರ್ಷ ಹಿಂದೆ ಕ್ಯಾಂಪ್ರೋ ಅಡಿಕೆ ಮರ ಏರಿ ಕೊಯ್ಲು-ಸಿಂಪಡಣೆ ಮಾಡಲುಎರಡು ತರಬೇತಿ ಶಿಬಿರ ನಡೆಸಿತ್ತು.