ಅಂಜುಮನ್ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ

Update: 2021-11-26 17:32 GMT

ಭಟ್ಕಳ: ಸಂವಿಧಾನದತ್ತವಾದ ಹಕ್ಕುಗಳನ್ನು ನ್ಯಾಯ ಮಾರ್ಗದಲ್ಲಿ ಪಡೆದುಕೊಳ್ಳುತ್ತ ಸಂವಿಧಾನ ಸೂಚಿಸಿದ ಕರ್ತವ್ಯಗಳನ್ನು ಪರಿಪಾಲಿಸುತ್ತ ಘನತೆವೆತ್ತ ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸಬೇಕೆಂದು ಶಿರಾಲಿಯ ಜನತಾವಿದ್ಯಾಲಯದ ಉಪನ್ಯಾಸಕ ಪ್ರೊ. ರವಿ ಚಿತ್ರಾಪುರ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಅಂಜುಮನ್ ಪದವಿ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕವು ಹಮ್ಮಿಕೊಂಡ ‘ಸಂವಿಧಾನ ದಿನಾಚರಣೆ’ ಕಾರ್ಯಕ್ರಮದ ಮುಖ್ಯ ಅತಿಥಿ ಮತ್ತು ಪ್ರಧಾನ ಭಾಷಣಕಾರರಾಗಿ ಆಗಮಿಸಿದ ರವಿ ಚಿತ್ರಾಪುರ, ಸಂವಿಧಾನ ರಚನೆಯ ಹಿನ್ನೆಲೆ, ಸಂವಿಧಾನ ರಚನಾಕಾರರು ಜಗತ್ತಿನಲ್ಲಿಯೇ ಉತ್ತಮ ಸಂವಿಧಾನವನ್ನು ರಚಿಸುವಲ್ಲಿ ಪಟ್ಟ ಪರಿಶ್ರಮ, ಸಂವಿಧಾನದ ಯಾವ ಯಾವ ಭಾಗದಲ್ಲಿ ಯಾವ ಯಾವ ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ, ಜಗತ್ತಿನ ಬೇರೆ ಬೇರೆ ದೇಶಗಳ ಸಂವಿಧಾನದಿಂದ ಯಾವ ಯಾವ ಅಂಶಗಳನ್ನು ಎತ್ತಿಕೊಳ್ಳಲಾಗಿದೆ ಇತ್ಯಾದಿ ವಿಚಾರಗಳನ್ನು ಎಳೆಯೆಳೆಯಾಗಿ ತಿಳಿಸಿಕೊಟ್ಟರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಎಂ. ಕೆ. ಶೇಖ್ ಭಾರತೀಯ ಸಂವಿಧಾನದ ಶ್ರೇಷ್ಠತೆಯನ್ನು ಹೇಳುವುದರ ಜೊತೆಗೆ, ಸಂವಿಧಾನದ ನೆರಳಿನಡಿಯಲ್ಲಿ ಭಾರತೀಯರಾದ ನಾವೆಲ್ಲ ಯಾವುದೇ ಜಾತಿ ಮತ ಧರ್ಮ ಭಾಷೆ ಲಿಂಗ ಪ್ರದೇಶಗಳ ಬೇಧವಿಲ್ಲದೆ ಒಂದಾಗಿದ್ದೇವೆ ಎಂಬುದನ್ನು ನೆನಪಿಸುವುದರ ಜೊತೆಗೆ ಸಂವಿಧಾನದ ಆಶಯಗಳಿಗೆ ಕುಂದು ಬರದಂತೆ ನಡೆದುಕೊಳ್ಳಬೇಕಾದ ಅಗತ್ಯವನ್ನು ಒತ್ತಿ ಹೇಳಿದರು. 

ರಾಷ್ಟ್ರೀಯ ಸೇವಾ ಯೋಜನ ಘಟಕದ ಅಧಿಕಾರಿಯಾದ ಪ್ರೊ. ಆರ್. ಎಸ್. ನಾಯಕ ಪ್ರಾಸ್ತಾವಿಕ ನುಡಿಗಳನ್ನಾಡಿ ಸರ್ವರನ್ನು ಸ್ವಾಗತಿಸಿದರೆ, ವಿದ್ಯಾರ್ಥಿ ಶ್ರೇಯಸ್ ನಾಯಕ ಅತಿಥಿಗಳನ್ನು ಪರಿಚಯಿಸಿದರು. ಆರಂಭದಲ್ಲಿ ನಯೀಮ್ ಪ್ರಾರ್ಥಿಸಿದರೆ, ಕೊನೆಯಲ್ಲಿ ಸ್ವಾತಿ ನಾಯ್ಕ ವಂದಿಸಿದರು.

ಹಿರಿಯ ಪ್ರಾಧ್ಯಾಪಕರಾದ ಪ್ರೊ. ಎಸ್. ಎ. ಇಂಡಿಕರ್ ಮತ್ತು ಪ್ರೊ. ಬಿ. ಎಚ್. ನದಾಫ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಕುಮಾರಿ ನಯನಾ ಮೊಗೇರ ಮತ್ತು ದೀಪಾ ನಾಯ್ಕ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಕುಮಾರಿ ಲಾವಣ್ಯ ಸಂವಿಧಾನದ ಪೀಠಿಕೆಯನ್ನು ವಾಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News