ವ್ಯಕ್ತಿತ್ವ ವಿಕಸನದಿಂದ ಆತ್ಮಸ್ಥೈರ್ಯದ ರಾಷ್ಟ್ರ ನಿರ್ಮಾಣ ಸಾಧ್ಯ: ಪ್ರೊ.ಯಡಪಡಿತ್ತಾಯ
ಸುರತ್ಕಲ್, ನ.27: ಭಾರತ ದೇಶವು ವ್ಯಕ್ತಿತ್ವ ವಿಕಸನದ ಮೂಲಕ ನಿರ್ಮಾಣವಾಗುತ್ತಿರುವ ದೇಶ. ಆತ್ಮಸ್ಥೈರ್ಯವನ್ನು ಯುವಶಕ್ತಿ ಪಡೆದುಕೊಂಡರೆ ಸದೃಢ ದೇಶ ನಿರ್ಮಾಣವಾಗುತ್ತದೆ ಎಂದು ಮಂಗಳೂರು ವಿ.ವಿ ಕುಲಪತಿ ಪ್ರೊ.ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಹೇಳಿದರು.
ಎಸ್ಸೆಸ್ಸೆಫ್ ವತಿಯಿಂದ ಕೃಷ್ಣಾಪುರದ ಶಾಲಾ ಮೈದಾನದ ಎಸ್.ಅಬ್ದುಲ್ ರೆಹಮಾನ್ ಎಂಜಿನಿಯರ್ ವೇದಿಕೆಯಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಪ್ರತಿಭೋತ್ಸವ 2021ನ್ನು ಉದ್ಘಾಟಿಸಿ ಮಾತನಾಡಿದರು.
ಶಾಸಕ ಯು.ಟಿ ಖಾದರ್ ಮಾತನಾಡಿ ಮುಸ್ಲಿಂ ಸಮುದಾಯವನ್ನು ಯಾರೂ ಸಂಶಯದ ದೃಷ್ಠಿಯಿಂದ ನೋಡುವಂತಾಗಬಾರದು. ಭಾರತ ದೇಶದಲ್ಲಿ ಸೌಹಾರ್ದತೆಯಿಂದ ಬಾಳಲು ನಮ್ಮ ಹಿರಿಯರು ಮಾರ್ಗದರ್ಶನ ನೀಡಿದ್ದಾರೆ. ಮುಂದಿನ ಪೀಳಿಗೆ ಧರ್ಮಗುರುಗಳ ಮಾರ್ಗದರ್ಶನ ಪಡೆದು ಸಂಸ್ಕಾಯುತವಾಗಿ ಬಾಳ್ವೆ ಮಾಡುವುದರೊಂದಿಗೆ ದೇಶಕ್ಕೆ ಕೊಡುಗೆ ನೀಡುವಂತಾಗ ಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿಯ ಮಮ್ತಾಝ್ ಆಲಿ ಪ್ರಾಸ್ತಾವಿಕ ಮಾತುಗಳನ್ನಾಡಿ ಪ್ರತಿಭೋತ್ಸವ ಸವಿ ನೆನಪಿಗಾಗಿ ಸ್ಥಳೀಯ ಶಾಲೆ ಅಭಿವೃದ್ಧಿ ಪಡಿಸುವ ಯೋಜನೆಯಿದೆ ಎಂದರು.
ಮಾಜಿ ಶಾಸಕ ಮೊಯ್ದಿನ್ ಬಾವಾ, ಮನಪಾ ಸದಸ್ಯರಾದ ಲೋಕೇಶ ಬೊಳ್ಳಾಜೆ, ಲಕ್ಷ್ಮೆ ಶೇಖರ್ ದೇವಾಡಿಗ, ಎಸ್ಸೆಸ್ಸೆಫ್ ಆಧ್ಯಕ್ಷ ಅಬ್ದುಲ್ ಲತೀಫ್ ಸಅದಿ, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್, ಸುಫಿಯಾನ್ ಸಖಾಫಿ,ಅಬು ಸುಫಿಯಾನ್ ಮದನಿ, ಅಶ್ರ್ಅಲ್ ಬದ್ರಿಯಾ, ಸೈಯ್ಯದ್ ಹಮೀಮ್ ತಂಙಳ್, 4ನೇ ವಿಭಾಗದ ಬದ್ರಿಯಾ ಮಸೀದಿ ಉಪಾಧ್ಯಕ್ಷ ಹಿದಾಯತ್, ಆಸಿಫ್ ಮಂಗಳೂರು, ಅಬ್ದುಲ್ ಜಲೀಲ್ ಮೋಟುಗೋಳಿ ಮತ್ತಿತರರು ಉಪಸ್ಥಿತರಿದ್ದರು.